NEWSಕೃಷಿನಮ್ಮಜಿಲ್ಲೆನಮ್ಮರಾಜ್ಯ

ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದ ವರುಣನ ಆರ್ಭಟ- ಕೊಡಗಿನಲ್ಲೂ ಅಬ್ಬರ: ಮೈದುಂಬಿಕೊಳ್ಳುತ್ತಿದ್ದಾಳೆ ಕಾವೇರಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಇಂದು ಕೂಡ ಶಾಲಾ- ಕಾಲೇಜುಗಳೀಗೆ ರಜೆ ಘೋಷಿಸಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ. ಈ ಬಾರಿ ಕೊಂಚ ಲೇಟ್ ಆಗಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿರುವ ವರುಣ ತಡವಾಗಿ ಬಂದು ಕರುನಾಡಿನ ಜನರಲ್ಲಿ ಒಂದು ಕಡೆ ಆತಂಕವನ್ನು ಸೃಷ್ಟಿಸಿದ್ದಾನೆ. ಮತ್ತೊಂದು ಕಡೆ ಖುಷಿಯನ್ನು ನೀಡುತ್ತಿದ್ದಾನೆ.

ಮುಂಗಾರು ಶುರುವಾದ ಮೂರ್ನಾಲ್ಕು ದಿನಕ್ಕೇ ಶರವೇಗದಲ್ಲಿ ಬರುತ್ತಿದ್ದು, ಇದರಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಘರ್ಜನೆ ಮಾಡುತ್ತಿದ್ದು, ಜೀವನದಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ 4 ದಿನ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತಲೂ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರವೂ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸತತ ಮೂರು ದಿನಗಳಿಂದ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಹವಾಮಾನ ಇಲಾಖೆ ಮಳೆ ಮುಂದುವರಿಯುವ ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಉಡುಪಿಯಲ್ಲೂ ಅಬ್ಬರ: ಉಡುಪಿಯಲ್ಲೂ ಭಾರೀ ಮಳೆಯಾಗುತ್ತಿದ್ದು, ಹೀಗಾಗಿ ವಿಪತ್ತು ಪರಿಸ್ಥಿತಿಯನ್ನು ಆಧರಿಸಿ ಅವಶ್ಯವಿರುವ ಕಡೆಗಳಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಇನ್ನು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಕಾರಣ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್​ ಎಚ್ಚರಿಕೆ ನೀಡಿದ್ದು, ನಾಳೆನೂ ಸಹ ಜಿಲ್ಲೆಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ರಜೆ ವಿಸ್ತರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಮಾಹಿತಿ ನೀಡಿದ್ದಾರೆ.

ಉಡುಪಿಯಲ್ಲಿ ಕಳೆದ 2 ದಿನಗಳಿಂದ ಭಾರಿ ಮಳೆ ಆಗುತ್ತಿದ್ದು, ಹವಾಮಾನ ಇಲಾಖೆ ಉಡುಪಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿದ್ದು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿವೆ.

ಬ್ರಹ್ಮಾವರ ತಾಲೂಕು ಕೋಡಿ ಬೇಂಗ್ರೆ ಲೈಟ್ ಹೌಸ್ ಬಳಿ ಭಾರಿ ಕಡಲ ಕೊರೆತ ಉಂಟಾಗಿದ್ದು, ಸಮುದ್ರದ ಪಕ್ಕದಲ್ಲಿ ಸಂಪರ್ಕಕ್ಕಾಗಿ ನಿರ್ಮಿಸಲಾಗಿದ್ದ ರಸ್ತೆ ಬಹುತೇಕ ಸಮುದ್ರ ಪಾಲಾಗಿದೆ. ಇನ್ನು ಎರಡು ದಿನಗಳ ಕಾಲ ಮಳೆ ಅಬ್ಬರ ಹೀಗೆ ಮುಂದುವರಿದಲ್ಲಿ ಸಂಪರ್ಕ ರಸ್ತೆ ಜತೆಗೆ ಸಮುದ್ರದಲ್ಲಿ ದೋಣಿಗಳ ಮಾರ್ಗಸೂಚಿಗಾಗಿ ತೀರದಲ್ಲಿ ಹಾಕಲಾಗಿರುವ ಕಿರು ಲೈಟ್ ಹೌಸ್ ಕೂಡ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್ ಘೋಷಣೆ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಹೊನ್ನಾವರ ವ್ಯಾಪ್ತಿಯ ಭಾಸ್ಕೇರಿ ಭಾಗದಲ್ಲಿ ಮನೆಗಳಿಗೆ, ತೋಟಕ್ಕೆ ಮಳೆ ನೀರು ನುಗ್ಗಿದೆ. ಗುಂಡಬಾಳ ನದಿ ಪ್ರವಾಹದಿಂದ ತೋಟ, ಮನೆಗಳು ಜಲಾವೃತಗೊಂಡಿದೆ.

ಇನ್ನು ಮುಂಜಾಗ್ರತ ಕ್ರಮವಾಗಿ ತಗ್ಗು ಪ್ರದೇಶದಲ್ಲಿ ಇರುವ ಹಾಗೂ ನದಿ ಭಾಗದಲ್ಲಿರುವ ಜನರನ್ನು ಸ್ಥಳಾಂತರ ಗೊಳ್ಳಲು ಸೂಚನೆ ನೀಡಲಾಗಿದೆ. ಹೆಚ್ಚಿನ ಹಾನಿ ಸಂಭವಿಸಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತದಿಂದ ಸೂಚಿಸಿದೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೊನ್ನಾವರ, ಭಟ್ಕಳಕ್ಕೆ ತೆರಳಿ ಮಳೆಯಿಂದ ಹಾನಿಗೊಳಗಾದ ಸ್ಥಳಗಳನ್ನು ವೀಕ್ಷಿಸಿದ್ದಾರೆ.

ಕೊಡಗಿನಲ್ಲೂ ಮಳೆ: ಕಳೆದ 2 ದಿನಗಳಿಂದ ಕೊಡಗಿನಲ್ಲಿ ಭಾರೀ ಗಾಳಿ ಸಹಿತ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಪರಿಣಾಮ ಕಾವೇರಿ ನದಿ ಮೈದುಂಬಿಕೊಳ್ಳುತ್ತಿದೆ. ಜಿಲ್ಲೆಯ ಜೀವ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ಬ್ರಹ್ಮಗಿರಿ ತಪ್ಪಲ್ಲಿನ ತಲಕಾವೇರಿ ಭಾಗಮಂಡಲದಲದಲ್ಲೂ ಉತ್ತಮ ಮಳೆಯಾಗಿದೆ. ನಿರಂತರ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಗಣನೀಯ ಏರಿಕೆ ಕಂಡಿದೆ. ಇನ್ನೂ ಜಿಲ್ಲೆಯಲ್ಲಿ ವಿಪರೀತ ಗಾಳಿ ಮಳೆಯಿಂದ ಅಲ್ಲಲ್ಲಿ ಮರಗಳು ಧರೆಗುರುಳುತ್ತಿದ್ದು, ರಸ್ತೆಗೆ ಬಿದ್ದ ಮರಗಳನ್ನು ತೆರವು ಗೊಳಿಸುವ ಕಾರ್ಯಚರಣೆಯೂ ನಡೆಯುತ್ತಿದೆ.

ಧರೆಗುರುಳಿದ ಮರ- ಕೂದಲೆಳೆ ಅಂತರದಲ್ಲಿ ಪಾರು: ಚಲಿಸುತ್ತಿದ್ದ ಬೈಕ್ ಮೇಲೆ ಬೃಹದಾಕಾರದ ಮರ ಬಿದ್ದು, ಸವಾರ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಕೊಡಗಿನ ಸೋಮವಾರಪೇಟೆ ತಾಲೂಕಿನ ಐಗೂರಿನಲ್ಲಿ ನಡೆದಿದೆ. ಸೋಮವಾರಪೇಟೆ ಕಡೆಯಿಂದ ಮಾದಾಪುರ ಕಡೆ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದಿದೆ. ಬೈಕ್ ಸವಾರ ಸನೋಕ್ ಎಂಬವರಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಬೈಕ್ ಜಖಂಗೊಂಡಿದೆ. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳಿಂದ ಅನಾಹುತ ಸಂಭವಿಸುತ್ತಿದ್ದು, ರಸ್ತೆ ಬದಿ ಬೆಂಡಾಗಿರುವ ಮರಗಳನ್ನ ಕಡಿದು ಮುಂದಾಗುವ ಅನಾಹುತವನ್ನು ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

 ಸಣ್ಣ ಮಳೆಗೇ ಬಾಗೇಪಲ್ಲಿ  ತತ್ತರ:  ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದಲ್ಲಿ ಅವೈಜ್ಞಾನಿಕ ರಸ್ತೆ ಹಾಗೂ ಚರಂಡಿ ಕಾಮಗಾರಿಯಿಂದಾಗಿ ಸಣ್ಣ ಮಳೆಗೂ ರಸ್ತೆಯಲ್ಲಿ ನೀರು ತುಂಬಿಕೊಂಡು ಅವಾಂತರ ಸೃಷ್ಟಿಯಾಗಿದೆ. ಇದರಿಂದ ರಸ್ತೆ ಮಧ್ಯೆ ಕೆರೆಯಂತಾಗಿ. ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ ನೀರು ನುಗ್ಗಿ. ಅವಾಂತರ ಉಂಟಾಗಿದೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಾಪಾರ ವಹಿವಾಟು ಹೆಚ್ಚಿಸಿ, ಉತ್ಪಾದನೆ ಉತ್ತೇಜಿಸುವ ಸರ್ಕಾರದ ಬದ್ಧತೆ ಶ್ಲಾಘನೀಯ: ಕಾಸಿಯಾ ಅಧ್ಯಕ್ಷ ರಾಜಗೋಪಾಲ್ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳ ಸೇರಿಸಿ ಅಂತಿಮ: ರಿಜ್ವಾನ್ ಹರ್ಷದ್ ಎಸ್ಸಿಎಸ್‌ಪಿ, ಟಿಎಸ್ಪಿ ವಿಶೇಷ ಯೋಜನೆ ಫೆ. ಅಂತ್ಯದೊಳಗೆ ಶೇ.100 ರಷ್ಟು ಪ್ರಗತಿ ಸಾಧಿಸಿರಬೇಕು: ಅಧಿಕಾರಿಗಳಿಗೆ ಡಿಸಿ ಆ... ರೈತರ ನಿರಂತರ ಹೋರಾಟಕ್ಕೆ ನಾಳೆಗೆ ವರ್ಷ: ಆದರೂ ಕಿವಿಗೊಡದ ಸರ್ಕಾರ KSRTC: ಫೇಕ್ ಫೋನ್‌ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರಿಗೆ ಆರ್ಥಿಕ ಬರೆ!! KKRTC ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ನಿಂದ ದೂರು ಹಿಂಪಡೆಯುವಂತೆ ಬೆದರಿಕೆ-ಆರೋಪ KSRTC ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ - ಸಿಎಂ ಜತೆ ಸಚಿವ ರಾಮಲಿಂಗಾರೆಡ್ಡಿ ಚರ್ಚೆ ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ