ಬೆಂಗಳೂರು: ಧೋತಿ ಉಟ್ಟು ಬಂದ ರೈತನಿಗೆ ಜಿ.ಟಿ.ಮಾಲ್ ಪ್ರವೇಶ ನಿರಾಕರಿಸಿ ಅವಮಾನ ಮಾಡಿದ್ದಕ್ಕೆ ಜಿ.ಟಿ.ಮಾಲ್ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಂಡಿದೆ. 7 ದಿನಗಳ ಕಾಲ ಮಾಲ್ ಕ್ಲೋಸ್ ಮಾಡಲು ಬಿಬಿಎಂಪಿ ಮುಂದಾಗಿದೆ.
ಹೌದು! ಪಂಚೆ ತೊಟ್ಟ ಪ್ರಾಯಸ್ತ ವ್ಯಕ್ತಿಗೆ ನೋ ಎಂಟ್ರಿ ಎಂದು ಹೇಳಿತ್ತು. ಆದರೀಗ ರೈತನಿಗೆ ಅಪಮಾನ ಮಾಡಿದ ಮಾಲ್ಗೆ ಸರ್ಕಾರ ತಕ್ಕಪಾಠ ಕಲಿಸಲು ಮುಂದಾಗಿದೆ.
ಸರ್ಕಾರ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ಮೇರೆಗೆ ಜಿ.ಟಿ.ಮಾಲ್ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ. ವಲಯ ಆಯುಕ್ತರ ತಂಡ ಕೆಲವೇ ಹೊತ್ತಲ್ಲಿ ಜಿ.ಟಿ. ಮಾಲ್ಗೆ ತೆರಳಲಿದ್ದು, ಬಳಿಕ ಜಿ.ಟಿ ಮಾಲ್ಅನ್ನು ಒಂದು ವಾರಗಳ ಕಾಲ ಲಾಕ್ ಮಾಡಲಿದ್ದಾರೆ.
ವಿಧಾನ ಸೌಧ ಮೆಟ್ಟಿಲೇರಿದ ಪಂಚೆ ಮ್ಯಾಟ್ರು: ಇಂದು ನಡೆದ ಸದನದಲ್ಲೂ ಇದೇ ವಿಚಾರದ ಕುರಿತು ಚರ್ಚೆ ನಡೆದಿದೆ. ಸಚಿವ ಭೈರತಿ ಸುರೇಶ್ ಕೂಡ ಈ ವಿಚಾರವಾಗಿ ಮಾತನಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಹೇಳಿದ್ದಾರೆ.
ಏನಿದು ಘಟನೆ?: ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಗ್ರಾಮದ ನಾಗರಾಜ್ ತಮ್ಮ ತಂದೆ ತಾಯಿ ಜೊತೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೋ ಜಿ.ಟಿ.ಮಾಲ್ಗೆ ಸಿನಿಮಾ ನೋಡೋಕೆ ಬಂದಿದ್ರು. ಹೀಗೆ ಮಾಲ್ ಒಳಗೆ ಎಂಟ್ರಿ ಕೊಡ್ತಿದ್ದಂತೆ ಸೆಕ್ಯೂರಿಟಿ ಸಿಬ್ಬಂದಿ ನಾಗರಾಜ್ ತಂದೆ ಪಂಚೆ ತೊಟ್ಟಿದ್ದಾರೆ. ಮಾಲ್ನ ಒಳಗೆ ಪಂಚೆ ತೊಟ್ಟವರಿಗೆ ಪ್ರವೇಶವಿಲ್ಲ ಅಂತ ಅಲ್ಲೇ ತಡೆದಿದ್ದಾರೆ. ಇದನ್ನ ಪ್ರಶ್ನಿಸಿದ ಬಳಿಕ ಎಂಟ್ರಿ ಕೊಟ್ಟ ಮಾಲ್ ಮ್ಯಾನೇಜರ್ ಕೂಡಾ ಅದೇ ರಾಗ ತೆಗೆದಿದ್ದರು.
ಅಷ್ಟೇ ಅಲ್ಲ. ಸುಮಾರು ಅರ್ಧ ಗಂಟೆಗಳ ಕಾಲ ಮಾಲ್ ಒಳಗೆ ಬಿಡದೇ ಸಿಬ್ಬಂದಿ ಸತಾಯಿಸಿದ್ದಾರೆ. ಸಿನಿಮಾ ವೀಕ್ಷಣೆಗೆ ಹೋಗಲೂ ಬಿಡದೇ ಗೇಟ್ ಬಳಿಯೇ ಕೂರಿಸಿ ಅವಮಾನ ಮಾಡಿದ್ದಾರೆ. ಇದನ್ನೆಲ್ಲಾ ಕಂಡು ವೃದ್ಧನ ಪುತ್ರ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದರು. ಮಾಲ್ ಸಿಬ್ಬಂದಿ ತೋರಿದ ದರ್ಪವನ್ನೆಲ್ಲ ತನ್ನ ಮೊಬೈಲ್ನಲ್ಲಿ ಸೆರೆಹಿಡಿದ್ದರು. ಇಷ್ಟೆಲ್ಲ ಆದ್ಮೇಲೂ ಕೂಡ ಸತಾಯಿಸಿ ಒಳಬಿಟ್ಟಿದ್ದರು.