ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ: ಕೇಂದ್ರ ರಸ್ತೆ ಸಾರಿಗೆ -ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ
ನ್ಯೂಡೆಲ್ಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಇನ್ನು ಮುಂದೆ ನಗದು ರಹಿತ ಚಿಕಿತ್ಸೆ ನೀಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ಜನಪರ ಯೋಜನೆಗಳ ಜಾರಿಗೆ ಹೆಸರುವಾಸಿಯಾಗಿರುವ ಸಚಿವರು ಈ ಮೂಲಕ ಮತ್ತೊಂದು ಜನಪರ ಯೋಜನೆಯನ್ನು ಘೋಷಿಸಿದ್ದು ಜನರಿಗೆ ಆರ್ಥಿಕ ಚಿಂತನೆ ತಪ್ಪಿದಂತಾಗಿದೆ. ಹೀಗಾಗಿ ಇನ್ನು ಮುಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆಯ ಸೌಲಭ್ಯ ಸಿಗಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿತಿನ್ ಗಡ್ಕರಿ, “ಅಪಘಾತ ಸಂಭವಿಸಿದ 24 ಗಂಟೆಯೊಳಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಸಂತ್ರಸ್ತರ ಏಳು ದಿನಗಳ ಕಾಲ ಚಿಕಿತ್ಸಾ ವೆಚ್ಚ ಅಥವಾ ಗರಿಷ್ಠ 1.5 ಲಕ್ಷ ರೂ. ಮೊತ್ತವನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇನ್ನು ಹಿಟ್ ಅಂಡ್ ರನ್ ಅಪಘಾತ ಪ್ರಕರಣದಲ್ಲಿ ಮೃತಪಟ್ಟರೆ, ಅವರ ಕುಟುಂಬದ ಸದಸ್ಯರಿಗೆ 2 ಲಕ್ಷ ರೂ. ಪರಿಹಾರ ನೀಡುವುದಾಗಿಯೂ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ನಗದು ರಹಿತ ಚಿಕಿತ್ಸೆ ಯೋಜನೆಯು ಈಗಾಗಲೇ ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ಇದನ್ನು ಸಂಪೂರ್ಣ ದೇಶಕ್ಕೆ ಅನ್ವಯಿಸುವಂತೆ ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ನಗದು ರಹಿತ ಚಿಕಿತ್ಸೆ ಯೋಜನೆಯಲ್ಲಿ ಕೆಲವು ದೋಷಗಳನ್ನು ನಾವು ಗುರುತಿಸಿದ್ದೇವೆ. ಈ ದೋಷಗಳನ್ನು ನಿವಾರಿಸಿ ಶೀಘ್ರದಲ್ಲೇ ಇಡೀ ದೇಶಕ್ಕೆ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಸಚಿವರು ವಿವರಿಸಿದರು.
ರಸ್ತೆ ಸುರಕ್ಷತೆ ನಮ್ಮ ಪ್ರಥಮ ಆದ್ಯತೆಯಾಗಿದೆ. ಆದಾಗ್ಯೂ 2024ರಲ್ಲಿ ಸುಮಾರು 1.8 ಲಕ್ಷ ಜನರು ರಸ್ತೆ ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಸುಮಾರು 30 ಸಾವಿರ ಜನ ಹೆಲ್ಮೆಟ್ ಧರಿಸದೇ ಇರುವ ಕಾರಣಕ್ಕೆ ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ ಪ್ರಾಣ ಕಳೆದುಕೊಂಡವರ ಪೈಕಿ ಶೇ.66ರಷ್ಟು ಜನ 18-34 ವರ್ಷದೊಳಗಿನ ಯುವಕರು ಎಂಬುದು ಇನ್ನೂ ಆಘಾತಕಾರಿಯಾಗಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.
ಇನ್ನು ಅಪಘಾತ ಪ್ರಕರಣಗಳಲ್ಲಿ ಚಾಲನಾ ಪರವಾನಿಗೆ ಇಲ್ಲದೇ ವಾಹನ ಓಡಿಸುವವರ ಸಂಖ್ಯೆಯೇ ಅಧಿಕ ಎಂದಿರುವ ನಿತಿನ್ ಗಡ್ಕರಿ, ಚಾಲನಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಹೊಸ ನೀತಿಯನ್ನು ಜಾರಿಗೊಳಿಸುವುದಾಗಿ ಹೇಳಿದರು.
ಹಳೆಯ ವಾಹನಗಳ ಸ್ಕ್ರ್ಯಾಪಿಂಗ್ ನೀತಿಗೆ ಸ್ಪಷ್ಟ ರೂಪ ನೀಡಬೇಕಿದ್ದು, ದೇಶದ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆಗೂ ಇದು ಸಹಾಯಕಾರಿಯಾಗಿದೆ. ಈ ಕುರಿತು ದೇಶದ ಆಟೋಮೊಬೈಲ್ ಕಂಪನಿಗಳೊಂದಿಗೆ ನಡೆಯುತ್ತಿರುವ ಮಾಹಿತಿ ಪ್ರಗತಿಯ ಹಂತದಲ್ಲಿದೆ ಎಂದು ಇದೇ ವೇಳೆ ತಿಳಿಸಿದರು.
ಇನ್ನು ಮುಂದೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ಯೋಜನೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ತುರ್ತು ಸಂದರ್ಭದಲ್ಲಿ ದೊರೆಯಬಹುದಾದ ಮಾನವೀಯ ನೆರವು ಜೀವ ಉಳಿಸುವಲ್ಲಿ ಪೂರಕ ಎಂಬ ಅಭಿಪ್ರಾಯ ಜನರಲ್ಲಿ ವ್ಯಕ್ತವಾಗಿದೆ.