KSRTC ಫ್ರೀ ಬಸ್ಪಾಸ್ ಈ ತಿಂಗಳು ಸಿಗುವುದು ಡೌಟ್- ನಿತ್ಯ ಹಣಕೊಟ್ಟು ಓಡಾಡುತ್ತಿರುವ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?
ಸರ್ಕಾರ ಕೂಡಲೇ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳಬೇಕು ಎಂಬ ಆಗ್ರಹ ವಿದ್ಯಾರ್ಥಿಗಳು ಹಾಗೂ ಪೊಷಕರ ಕಡೆಯಿಂದ ಕೇಳಿ ಬರುತ್ತಿದೆ.

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಖುಷಿಯಲ್ಲಿ ಅಂದೇ ಶಾಲಾ-ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಘೋಷಣೆ ಮಾಡಿದರು.
ಆದರೆ, ಘೋಷಣೆ ಮಾಡಿ ಆರು ದಿನಗಳು ಕಳೆದರೂ ಈವರೆಗೂ ಆ ಬಗ್ಗೆ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲದ ಕಾರಣ ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಉಚಿತ ಬಸ್ಪಾಸ್ ಸಿಗುತ್ತದೆ ಅಂತ ಈಗ ಬಸ್ನಲ್ಲಿ ಹಣಕೊಟ್ಟು ಟಿಕೆಟ್ ತೆಗೆದುಕೊಂಡು ಪ್ರಯಾಣಿಸುತ್ತಿದ್ದಾರೆ.
ಈ ನಡುವೆ ಸರ್ಕಾರ ಕೂಡಲೇ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳಬೇಕು ಎಂಬ ಆಗ್ರಹ ವಿದ್ಯಾರ್ಥಿಗಳು ಹಾಗೂ ಪೊಷಕರ ಕಡೆಯಿಂದ ಕೇಳಿ ಬರುತ್ತಿದೆ.
ಆದರೂ ಸಹ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡೋದಾಗಿ ಘೋಷಣೆ ಮಾಡಿ ಈಗ ಪಾಸ್ ವಿತರಣೆಯಾಗುವುದು ಮತ್ತಷ್ಟು ವಿಳಂಬವಾಗಲಿದೆ ಎಂಬ ಮಾಹಿತಿ ಕೇಳಿ ವಿದ್ಯಾರ್ಥಿಗಳು ಶಾಕ್ಗೆ ಒಳಗಾಗಿದ್ದು, ಜೂನ್ ಅಂದರೆ ಈ ತಿಂಗಳು ಸಿಗೋದು ಡೌಟ್ ಎನ್ನಲಾಗುತ್ತಿದ್ದು, ನಾವು ಎಷ್ಟು ಹಣಕೊಟ್ಟು ಓಡಾಡಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಶಿವಕುಮಾರ್ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನ ಸಚಿವ ಸಂಪುಟ ಸಭೆ ಮಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಸದ್ಯ ಪಾಸ್ ವಿತರಣೆಯ ಸಿದ್ಧತೆ ನಡೆಯುತ್ತಿದೆ. ಆದರೆ, ಈಗಾಗಲೇ ಶಾಲಾ-ಕಾಲೇಜುಗಳು ಆರಂಭವಾಗಿರುವುದರಿಂದ ಇದು ವಿದ್ಯಾರ್ಥಿಗಳ ಪಾಲಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸುತ್ತಿದೆ.
ಇತ್ತ ಸಾರಿಗೆ ಸಚಿವ ಬೈರತಿ ಸುರೇಶ್ ಸಭೆ ಮಾಡಿ, ಬಸ್ ಪಾಸ್ ವಿತರಣೆ ಸಂಬಂಧ ಮಾಹಿತಿ ಪಡೆದಿದ್ದಾರೆ. ಖರ್ಚು ವೆಚ್ಚ ಮತ್ತು ಎಷ್ಟು ವಿದ್ಯಾರ್ಥಿಗಳಿಗೆ ನೀಡಬೇಕಾಗುತ್ತೆ ಎಂಬ ಮಾಹಿತಿ ಪಡೆದಿರುವ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ ಉಚಿತ ಬಸ್ ಪಾಸ್ ಕೊಟ್ಟೆ ಕೊಡ್ತೇವೆ. ಕ್ಯಾಬಿನೆಟ್ ಮುಂದೆ ಇಡುತ್ತೇವೆ. ಅಷ್ಟು ಬಸ್ ಪಾಸ್ ಪ್ರಿಂಟ್ ಆಗಬೇಕು ಸಮಯ ತೆಗೆದುಕೊಳ್ಳುತ್ತೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಹೀಗಾಗಿ ಪಾಸ್ ವಿತರಣೆ ಇನ್ನೂ ಒಂದು ತಿಂಗಳು ತಡ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದರಿಂದ ಉಚಿತ ಬಸ್ ಪಾಸ್ ವ್ಯಾಪ್ತಿಗೆ ಬರುವ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಇಂದು ಹಣಕೊಟ್ಟು ಟಿಕೆಟ್ ತೆಗೆದುಕೊಂಡು ಬಸ್ನಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುತ್ತಿದ್ದಾರೆ.
ಇನ್ನು ಈ ಉಚಿತ ಬಸ್ ಪಾಸ್ ವಿತರಣೆಯಿಂದ ಸರ್ಕಾರಕ್ಕೆ 1,500 ರಿಂದ 1,800 ಕೋಟಿ ರೂ. ವೆಚ್ಚ ಆಗುವ ಸಾಧ್ಯತೆಯಿದೆ. ಹೀಗಾಗಿ ಯಾವಾಗ ಬಸ್ ಪಾಸ್ ವಿತರಣೆ ಮಾಡ್ತಾರೆ ಎಂಬುದರ ಬಗ್ಗೆ ಕಾದು ನೋಡಬೇಕಿದೆ. ಅಲ್ಲದೆ ಈ ಬಸ್ಪಾಸ್ ಹಣವನ್ನು ಕೂಡಲೇ ಸಾರಿಗೆ ನಿಗಮಗಳಿಗೆ ಸರ್ಕಾರ ಬಿಡುಗಡೆ ಮಾಡಬೇಕು ಎಂಬ ಬಗ್ಗೆಯೂ ಒತ್ತಾಯ ಕೇಳಿ ಬರುತ್ತಿದೆ.
Related









