Please assign a menu to the primary menu location under menu

Search By Date & Category

Latestನಮ್ಮರಾಜ್ಯರಾಜಕೀಯ

ಬೆಂಗಳೂರು ರಸ್ತೆ ಗುಂಡಿಗಳು: 30ಕ್ಕೂ ಹೆಚ್ಚು ಕಾರ್ಪೊರೇಟರ್‌ಗಳ ವಿರುದ್ಧ ಎಎಪಿಯಿಂದ ವಿವಿಧ ಠಾಣೆಗಳಲ್ಲಿ ದೂರು ದಾಖಲು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಾಜಧಾನಿಯ ರಸ್ತೆ ಗುಂಡಿಗಳಿಗೆ ಸಂಬಂಧಪಟ್ಟಂತೆ ತಪ್ಪಿತಸ್ಥ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವ ಆಮ್‌ ಆದ್ಮಿ ಪಾರ್ಟಿಯ ಅಭಿಯಾನವು ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೃಹತ್‌ ಜನಸ್ತೋಮದೊಂದಿಗೆ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಗುಂಡಿಗಳ ವಿರುದ್ಧ ಆಮ್‌ ಆದ್ಮಿ ಪಾರ್ಟಿ ನಡೆಸಿದ ಹಲವು ಪ್ರತಿಭಟನೆಗಳು ಹಾಗೂ ರಸ್ತೆ ಗುಂಡಿ ಹಬ್ಬ ಎಂಬ ವಿನೂತನ ಚಳವಳಿಗೆ ಉತ್ತಮ ಜನಮನ್ನಣೆ ದೊರೆತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಜನಬೆಂಬಲ ವ್ಯಕ್ತವಾಗುತ್ತಿದ್ದು, ಟ್ವಿಟರ್‌ನಲ್ಲಿ ನಮ್ಮ ಅಭಿಯಾನಗಳು ಟ್ರೆಂಡ್‌ ಆಗುತ್ತಿವೆ ಎಂದರು.

ಇನ್ನು ವಾಹನ ಸವಾರರ ಜೀವ ತೆಗೆಯುತ್ತಿರುವ ಗುಂಡಿಗಳ ಬಗ್ಗೆ ಜನರು ಪಕ್ಷಕ್ಕೆ ಮಾಹಿತಿ ನೀಡುತ್ತಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಗುಂಡಿಗಳಿಗೆ ಕಾರಣರಾದವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. 75ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಈವರೆಗೆ ದಾಖಲಿಸಲಾಗಿದ್ದು, 30ಕ್ಕೂ ಹೆಚ್ಚು ಕಾರ್ಪೊರೇಟರ್‌ಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.

ನವೆಂಬರ್‌ 9ರಂದು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಗುಂಡಿಗಳಿಗೆ ಸಂಬಂಧಿಸಿ ಮಾಜಿ ಕಾರ್ಪೊರೇಟರ್‌ಗಳ ವಿರುದ್ಧ ದೂರು ದಾಖಲಿಸಲಾಗಿದೆ. ಬಿಬಿಎಂಪಿಯ ಕೊನೆಯ ಅವಧಿಯಲ್ಲಿ ಕಾರ್ಪೊರೇಟರ್‌ ಆಗಿದ್ದವರು ಜನತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹಾ ಮೋಸ ಎಸಗಿ, ವಿಶ್ವಾಸ ದ್ರೋಹ ಮಾಡಿದ್ದಾರೆ.

ಮುಂದಿನ ಹತ್ತು ದಿನಗಳಲ್ಲಿ ಬೆಂಗಳೂರು ಗುಂಡಿಮುಕ್ತ ಆಗದಿದ್ದರೆ, ಬೃಹತ್‌ ಜನಸ್ತೋಮದೊಂದಿಗೆ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತದೆ. ರಾಜ್ಯ ರಾಜಧಾನಿಯ ವರ್ಚಸ್ಸು ಉಳಿಸುವ ನಿಟ್ಟಿನಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಮೋಹನ್‌ ದಾಸರಿ ಹೇಳಿದರು.

ಸರಿಯಾದ ರಸ್ತೆಗಳನ್ನು ಪಡೆಯುವುದು ಜನರ ಹಕ್ಕು. ಇವುಗಳನ್ನು ಪಡೆಯುವುದಕ್ಕಾಗಿ ಜನರು ವಾಹನ ತೆರಿಗೆ, ರಸ್ತೆ ತೆರಿಗೆ, ಆಸ್ತಿ ತೆರಿಗೆ, ಜಿಎಸ್‌ಟಿ ಮುಂತಾದವುಗಳನ್ನು ಕಟ್ಟಿರುತ್ತಾರೆ. ರಸ್ತೆ ದುರಸ್ತಿಗಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದ ಸಾವಿರಾರು ಕೋಟಿ ರೂಪಾಯಿ ಖರ್ಚಾಗಿದ್ದರೂ ಗುಂಡಿಗಳು ಕಡಿಮೆಯಾಗಲಿಲ್ಲ. ಕೇವಲ ಒಂದು ತಿಂಗಳೊಳಗೆ ಕಿತ್ತುಹೋಗುವಷ್ಟು ಕಳಪೆ ಕಾಮಗಾರಿ ಮಾಡಲಾಗಿದೆ. ದುಡ್ಡು ಕೊಳ್ಳೆ ಹೊಡೆಯುವುದಕ್ಕಾಗಿ ಕಡಿಮೆ ಗುಣಮಟ್ಟದ ವಸ್ತುಗಳನ್ನು ರಸ್ತೆಗಾಗಿ ಬಳಸಲಾಗಿದೆ ಎಂದು ಹೇಳಿದರು.

ಒಂದೇ ವರ್ಷದಲ್ಲಿ 8 ಬೆಂಗಳೂರಿಗರ ಜೀವ ಈ ಬಿಬಿಎಂಪಿ ಕೆಟ್ಟ ರಸ್ತೆಗಳ ಮುಖಾಂತರ ತೆಗೆದುಕೊಂಡಿದೆ, ಯಾರು ಹೊಣೆಗಾರರು..?? 20,000 ಕೋಟಿ ಕಳೆದ 5 ವರ್ಷದಲ್ಲಿ ಬೆಂಗಳೂರಿನ ರಸ್ತೆಗಳಿಗೆ ಖರ್ಚು ಮಾಡಿದ್ದೀವಿ ಅಂತ ಹೇಳುತ್ತಾ ಇದೀರಲ್ಲ, ಲೆಕ್ಕ ಕೊಡಿ, ದೊಡ್ಡಮಟ್ಟದ ತನಿಖೆ ಆಗಲೇ ಬೇಕು.

ರಾಜ್ಯಮಾಧ್ಯಮ ಸಂಚಾಲಕ ಜಗದೀಶ್ ವಿ. ಮಾತನಾಡಿ, 1000 ಕ್ಕೂ ಹೆಚ್ಚು ಬೆಂಗಳೂರಿಗರು ನಮ್ಮ ಸಹಯವಾಣಿಗೆ ರಸ್ತೆಗುಂಡಿಗಳ ಚಿತ್ರಗಳನ್ನ ಕಳುಹಿಸಿ ದೂರು ನೀಡಿದ್ದಾರೆ, ನಾವು ಕಾನೂನು ಘಟಕದ ಸಹಕಾರ ನೀಡುತ್ತೇವೆಂದರೂ ಅವರು ಮುಂದೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಮುಂದಾಗಲಿಲ್ಲ. ಅಂದರೆ ಪೊಲೀಸರ ಮೇಲಿನ ಹೆದರಿಕೆಯಾಗಿರಬಹುದು, ಸ್ಥಳೀಯ ರಾಜಕಾರಣಿಗಳ ಗುರಿಯಾಗಬಹುದೆಂದೋ ಮುಂದೆ ಬರಲಿಲ್ಲ.

ನಮ್ಮ ವಾರ್ಡ್‌ ಮಟ್ಟದ ನಾಯಕರು ಪೊಲೀಸ್‌ ಠಾಣೆಗೆ ಹೋಗಿ ಸ್ಥಳೀಯ ಬಿಬಿಎಂಪಿ ಸದಸ್ಯರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ, ಇದು ಸಾಮಾನ್ಯ ವಿಷಯವಲ್ಲ, ಅವರ ಧೈರ್ಯಕ್ಕೆ ಬೆಂಗಳೂರಿಗರು ಅಭಾರರು. ಅಧಿಕಾರವಿಲ್ಲದೇ ಇಷ್ಟು ಕೆಲಸ ಮಾಡಬಹುದೆಂದರೆ, ಒಂದು ಅವಕಾಶ ಕೊಟ್ಟು ಗೆಲ್ಲಿಸಿದರೆ, ಒಂದೇ ಒಂದು ದಿನ ರಸ್ತೆಗುಂಡಿಗಳಿಲ್ಲದ ಉತ್ತಮ ರಸ್ತೆಗಳನ್ನ ಮಾಡಿ ತೋರಿಸುತ್ತೇವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಮಾತನಾಡಿ, ಗುಂಡಿಗಳಿಂದ ವಾಹನಗಳು ಹಾಳಾಗುತ್ತಿರುವುದು ಹಾಗೂ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದಷ್ಟೇ ಅಲ್ಲದೇ, ಅನೇಕ ವಾಹನ ಸವಾರರು ಕೈಕಾಲು ಮುರಿದುಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸುಮಾರು 7 ಮಂದಿ ಜೀವವನ್ನೇ ಕಳೆದುಕೊಂಡಿದ್ದಾರೆ. ಗುಂಡಿಗಳು ಬೆಂಗಳೂರಿಗರ ಜೀವಕ್ಕೆ ಸಂಚಕಾರ ತರುತ್ತಿದ್ದರೂ ಗಂಭೀರವಾಗಿ ಪರಿಗಣಿಸದ ಸರ್ಕಾರ ಹಾಗೂ ಪಾಲಿಕೆಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಜಗದೀಶ್ ಚಂದ್ರ, ಗೋಪಿನಾಥ್, ಸುಹಾಸಿನಿ , ಅಶೋಕ್ ಮೃತ್ಯುಂಜಯ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು

ಈವರೆಗೆ ದಾಖಲಿಸಲಾದ ಪ್ರಕರಣಗಳು- ಆರೋಪಿ ಕಾರ್ಪೊರೇಟರ್‌ಗಳ ವಿವರ  
ಶ್ಯಾಮಲಾ ಕುಮಾರ್‌  –  ವಿದ್ಯಾಪೀಠ ವಾರ್ಡ್‌
ಕೋದಂಡ ರೆಡ್ಡಿ – ಬಾಣಸವಾಡಿ ವಾರ್ಡ್‌
ಸೈಯದ್‌ ಸಜಿದಾ ನಸೀರುಲ್ಲಾ – ಮನೇಶ್ವರ ನಗರ ವಾರ್ಡ್‌

ಚಂದ್ರಪ್ಪ ರೆಡ್ಡಿ – ಕೋನೆನ ಅಗ್ರಹಾರ ವಾರ್ಡ್‌
ನೌಶೀರ್‌ ಅಹ್ಮದ್‌ – ಕೆಜಿ ಹಳ್ಳಿ ವಾರ್ಡ್‌
ಭಾಗ್ಯಲಕ್ಷ್ಮಿ ಮುರಳಿ – ಅರಕೆರೆ ವಾರ್ಡ್‌
ನಜೀಮಾ ಅಯೂಬ್‌ ಖಾನ್‌ – ಕೆಆರ್ ಮಾರ್ಕೆಟ್‌ ವಾರ್ಡ್‌

ಕೋಕಿಲಾ ಚಂದ್ರಶೇಖರ್‌ – ಚಾಮರಾಜಪೇಟೆ ವಾರ್ಡ್‌
ಸುಜಾತ ರಮೇಶ್‌ – ಆಜಾದ್‌ ನಗರ ವಾರ್ಡ್‌
ಇಮ್ರಾನ್‌ ಪಾಷಾ – ಪಾದರಾಯನಪುರ ವಾರ್ಡ್‌
ರಾಧಮ್ಮ ವೆಂಕಟೇಶ್‌ – ಹೊರಮಾವು ವಾರ್ಡ್‌

ಶಶಿರೇಖ ಮುಕುಂದ್‌ – ಸರ್ವಜ್ಞನಗರ ವಾರ್ಡ್‌
ಉಮ್ಮೆ ಸಲ್ಮಾ – ಕುಶಾಲ್‌ ನಗರ ವಾರ್ಡ್‌
ರಮೇಶ್‌ – ಸುಂಕೇನಹಳ್ಳಿ ವಾರ್ಡ್‌
ನೇತ್ರ ಪಲ್ಲವಿ – ಅತ್ತೂರು ವಾರ್ಡ್‌

ಸತೀಶ್‌ – ಯಲಹಂಕ ಸೆಟ್‌ಲೈಟ್‌ ಟೌನ್‌ ವಾರ್ಡ್‌
ಪದ್ಮರಾಜ್‌ – ಬಸವೇಶ್ವರನಗರ ವಾರ್ಡ್‌
ಕೃಷ್ಣಮೂರ್ತಿ – ಮಂಜುನಾಥ ನಗರ ವಾರ್ಡ್‌
ಝಾಕೀರ್‌ – ಪುಲಕೇಶಿನಗರ ವಾರ್ಡ್‌

ಲೀಲಾ ಶಿವಕುಮಾರ್‌ – ಚಿಕ್ಕಪೇಟೆ ವಾರ್ಡ್‌
ಶಾರದಾ ಮುನಿರಾಜ – ಉಳ್ಳಾಲ ವಾರ್ಡ್
ಸತ್ಯನಾರಾಯಣ – ಕೆಂಗೇರಿ ವಾರ್ಡ್‌
ಆರ್ಯ ಶ್ರೀನಿವಾಸ್‌ – ಹೆಮ್ಮಿಗೆಪುರ ವಾರ್ಡ್‌

ಗುರುಮೂರ್ತಿ ರೆಡ್ಡಿ – ಅಗರ ವಾರ್ಡ್‌
ಶಕೀಲ್‌ ಅಹ್ಮದ್‌ – ಭಾರತಿ ನಗರ ವಾರ್ಡ್‌
ಮಂಜುನಾಥ್‌ – ಸುಬ್ರಹ್ಮಣ್ಯಪುರ ವಾರ್ಡ್‌
ದಿ. ಫಾರಿದಾ ಇಶ್ತಿಯಾಕ್‌ – ಶಿವಾಜಿನಗರ ವಾರ್ಡ್‌

ಪದ್ಮಾವತಿ ಅಮರನಾಥ್‌ – ಚೌಡೇಶ್ವರಿ ವಾರ್ಡ್‌
ಮೋಹನ್‌ ಕುಮಾರ್‌ – ಕೊಟ್ಟಿಗೆಪಾಳ್ಯ ವಾರ್ಡ್‌
ತೇಜಸ್ವಿನಿ – ಜ್ಞಾನಭಾರತಿ ವಾರ್ಡ್‌

ಸತ್ಯಪಥ ನಿಮ್ಮ ವಿಜಯಪಥಕ್ಕೆ  ಬಲ ತುಂಬಲು 2ರೂ.ನಿಂದ ನಿಮಗೆ ಅನಿಸಿದಷ್ಟು ದೇಣಿಗೆ (Donation) ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ.   ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ  ಅಥವಾ 9986160163ಗೆ  ಕಳುಹಿಸುವ ಮೂಲಕ ಮಾರ್ಗದೀಪವಾಗಿರಿ.

Leave a Reply