ಕೆ.ಆರ್.ಪೇಟೆ: ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದೂ ಇಲ್ಲ. ಆದ್ದರಿಂದ ಶ್ರೀಸಾಮಾನ್ಯರು ಹಾಗೂ ಗ್ರಾಮೀಣ ಜನರು ಶಿಸ್ತುಬದ್ಧ ಜೀವನದ ಜತೆಗೆ ನಿಯಮಿತವಾಗಿ ಆಹಾರ ಸೇವಿಸಿ ತಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಸಲಹೆ ನೀಡಿದರು.
ತಾಲೂಕಿನ ಹೊಸಹೊಳಲು ಗ್ರಾಮದ ಆಯುರ್ವೇದ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ಇಂದು ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಆರೋಗ್ಯ ದೇವತೆ ಧನ್ವವಂತರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದ ಚಿಕಿತ್ಸಾ ಪದ್ದತಿಯ ಮಾತ್ರೆಗಳು ಹಾಗೂ ಚೂರ್ಣಗಳು ನಮ್ಮ ಆರೋಗ್ಯ ಸಂವರ್ಧನೆಗೆ ವರದಾನ. ಅಲ್ಲದೆ, ಯಾವುದೇ ಅಡ್ಡ ಪರಿಣಾಮ ಬೀರದೆ ಆರೋಗ್ಯದ ಜತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಗ್ರಾಮೀಣ ಜನರು ಹಾಗೂ ಹಿರಿಯ ನಾಗರಿಕರು ತಮ್ಮ ಮನೆಯ ಬಾಗಿಲಿನಲ್ಲಿಯೇ ದೊರೆಯುತ್ತಿರುವ ಗುಣಮಟ್ಟದ ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಂಡು ನೂರ್ಕಾಲ ಆರೋಗ್ಯವಂತರಾಗಿ ನೆಮ್ಮದಿಯ ಜೀವನ ನಡೆಸಿ ಎಂದು ಮನವಿ ಮಾಡಿದರು.
ಪುರಸಭೆ ಮಾಜಿ ಸದಸ್ಯ ಎಚ್.ಆರ್.ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆಯುಷ್ ವೈದ್ಯಾಧಿಕಾರಿ ಡಾ. ಲೋಕೇಶ್, ತಜ್ಞ ವೈದ್ಯರಾದ ಡಾ.ಚಂದ್ರಶೇಖರ್, ತಾಲೂಕು ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷ ಪೋಸ್ಟ್ ಕೃಷ್ಣೆಗೌಡ ಸೇರಿದಂತೆ ನೂರಾರು ಜನರು ಶಿಬಿರದಲ್ಲಿ ಭಾಗವಹಿಸಿದ್ದರು.
ವರದಿ.ಕೆ.ಎನ್.ಸಾಗರ್. ಕೃಷ್ಣರಾಜಪೇಟೆ