
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರಿಗೆ ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರಬೇಕಿರುವ ವೇತನ ಪರಿಷ್ಕರಣೆ 14ತಿಂಗಳಗಳು ಕಳೆದರೂ ಮಾಡಿದಿರುವ ಸರ್ಕಾರದ ವಿರುದ್ಧ ಸುಪ್ರೀಂ ಮತ್ತು ಹೈಕೋರ್ಟ್ ವಕೀಲ ಎಚ್.ಬಿ.ಶಿವರಾಜು ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ವಿಜಯಪಥಕ್ಕೆ ತಿಳಿಸಿರುವ ಅವರು, ಸಾರಿಗೆ ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆಯನ್ನು ಇನ್ನೂ ಮಾಡಿಲ್ಲ. ಹೀಗಾಗಿ ಸರ್ಕಾರ ಮಾರ್ಚ್ 7ರಂದು ಮಂಡಿಸುವ 2025-26ನೇ ಸಾಲಿನ ಬಜೆಟ್ನಲ್ಲಿ ನೌಕರರಿಗೆ ಸಿಹಿ ಸುದ್ದಿ ಕೊಡದಿದ್ದರೆ ಮಾ.8 ಅಥವಾ 9ರಂದು ಹೈಕೋರ್ಟ್ನಲ್ಲಿ ಪಿಟಿಶನ್ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರ ಸಾರಿಗೆ ನೌಕರರನ್ನು ಒಂದು ರೀತಿ ಮಲತಾಯಿಯಂತೆ ನೋಡುತ್ತಿದೆ. ಹೀಗಾಗಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಜತೆಗೆ ಕೆಲ ಸಂಘಟನೆಗಳ ಮುಖಂಡರು ವೈಯಕ್ತಿಕ ದ್ವೇಷದಿಂದ ಸರ್ಕಾರಕ್ಕೆ ಎಚ್ಚರಿಕೆ ಕೊಡದೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದೇನೇ ಇರಲಿ ಸರ್ಕಾರ ಮಾರ್ಚ್ 3ರಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಸಾರಿಗೆ ನೌಕರರಿಗೆ ಒಳ್ಳೆ ಸುದ್ದಿಕೊಟ್ಟರೆ ನಾವು ಹೈಕೋರ್ಟ್ ಮೆಟ್ಟಿಲೇರುವುದಿಲ್ಲ. ಒಂದು ವೇಳೆ ಅದು ಆಗದಿದ್ದರೆ ಪಿಟಿಶನ್ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಇದಿಷ್ಟೇ ಅಲ್ಲದೆ ಕೆಲಸ ಸಂಘಟನೆಗಳನ್ನು ಇಲ್ಲಿ ಪ್ರತಿವಾದಿಗಳನ್ನಾಗಿ ಸೇರಿಸಲಾಗುವುದು. ಕಾರಣ ನೌಕರರನ್ನು ನಂಬಿಸಿಕೊಂಡು ದಿನದೂಡಿಕೊಂಡೆ ಈಗಾಗಲೇ 5ವರ್ಷಗಳಿಂದ ಬಂದಿದ್ದಾರೆ ಹೀಗಾಗಿ ಸಂಘಟನೆಗಳನ್ನು ಇಲ್ಲಿ ಪ್ರತಿವಾದಿಗಳಾಗಿ ಸೇರಿಸುತ್ತೇವೆ ಎಂದು ಹೇಳಿದ್ದಾರೆ.
ನೌಕರರಿಗೆ ಸಂಘಟನೆಗಳು ಏನಾದರೊಂದು ಮಾಡಿಸಿಕೊಡುತ್ತವೆ ಎಂದು ನಾವು ಈವರೆಗೂ ಕಾದು ನೋಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ 15-20 ಅಧಿಕಾರಿಗಳು/ನೌಕರರ ಸಹಿಯೊಂದಿಗೆ ಪಿಟಿಶನ್ ಹಾಕಲಾಗುವುದು. ಅದಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು ನಾವು ಸೇರಿದಂತೆ ಸುಪ್ರೀಂ ಕೋರ್ಟ್ನ ಮತ್ತೊಬ್ಬ ವಕೀಲರು ಇದರಲ್ಲಿ ಭಾಗಿಯಾಗಿ ನೌಕರರ ಪರ ಕೋರ್ಟ್ನಲ್ಲಿ ಪಿಟಿಶನ್ ಹೂಡಲಿದ್ದೇವೆ ಎಂದು ತಿಳಿಸಿದ್ದಾರೆ.