
ಬೆಂಗಳೂರು: ಅಂಗಾಂಗದಾನ ಮಾಡುವುದರಿಂದ ಮತ್ತೊಬ್ಬರಿಗೆ ಜೀವದಾನ ಮಾಡಿದಂತಾಗುತ್ತದೆ, ಹೀಗಾಗಿ ಪ್ರತಿಯೊಬ್ಬರೂ ಅಂಗಾಂಗದಾನ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಕರೆ ನೀಡಿದರು.
ವಿಶ್ವ ಕಿಡ್ನಿ ದಿನಾಚರಣೆ ಪ್ರಯುಕ್ತ ದೀರ್ಘಾವಧಿ ಮೂತ್ರಪಿಂಡ ಕಾಯಿಲೆಯಿಂದಾಗುವ ಆರೋಗ್ಯ ಸಮಸ್ಯೆಯ ಕುರಿತು ಜಾಗೃತಿ ಮೂಡಿಸಲು ಖಾಸಗಿ ಆಸ್ಪತ್ರೆಯೊಂದು ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಗಾಂಗ ದಾನ ಮಾನವೀಯತೆಯ ಪರಮೋಚ್ಛ ಕಾರ್ಯಗಳಲ್ಲಿ ಒಂದು. ನಾವೆಲ್ಲರೂ ಈ ಶ್ರೇಷ್ಠ ಕಾರ್ಯವನ್ನು ಬೆಂಬಲಿಸಬೇಕು” ಎಂದ ಅವರು ಜೀವ ರಕ್ಷಕ ಅಂಗಾಂಗ ಕಸಿಗೆ ಅನುವು ಮಾಡಿಕೊಡುವ ಕರ್ನಾಟಕ ಅಂಗ ಮತ್ತು ಅಂಗಾಂಶಗಳ ಕಸಿ ಸಂಸ್ಥೆ (SOTTO Karnataka)ಯ ಪಾತ್ರ ಹಾಗೂ ವೈದ್ಯರು, ದಾನಿಗಳ ತ್ಯಾಗವನ್ನು ಶ್ಲಾಘನೀಯ ಎಂದರು.
ಕಿಡ್ನಿ ಸಂಬಂಧಿ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವುದು, ಅಂಗಾಂಗ ದಾನ ಹಾಗೂ ವಿಶ್ವ ದರ್ಜೆಯ ಕಸಿ ಸೌಕರ್ಯ ಇರುವುದು ನಿಜಕ್ಕೂ ಮೆಚ್ಚುಗೆಯ ವಿಷಯ ಎಂದು ಹೇಳದರು.
ಅಂಗಾಂಗದಾನ ಮಾಡುವುದರಿಂದ ಮತ್ತೊಬ್ಬರಿಗೆ ಜೀವದಾನ ಮಾಡಿದಂತೆ. ವರದಿಗಳ ಪ್ರಕಾರ ಮಹಿಳೆಯರೇ ಹೆಚ್ಚು ಅಂಗಾಂಗದಾನ ಮಾಡಲು ಮುಂದಾಗುತ್ತಾರೆ. ಪುರುಷರೂ ಸಹ ಅಂಗಾಂಗದಾನ ಮಾಡಲು ಮುಂದಾಗಬೇಕು. ನಮ್ಮ ದೇಹದಲ್ಲಿ ಬದುಕಿರುವಾಗಲೇ ಅಂಗಾಂಗದಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಜಾಗೃತಿಯ ಅವಶ್ಯಕತೆ ಇದೆ ಎಂದರು.
ಡಾ.ಶರಣ್ ಶಿವರಾಜ್ ಪಾಟೀಲ್ ಮಾತನಾಡಿ “ಕಿಡ್ನಿ ಸಮಸ್ಯೆಯು ಕೇವಲ ವೈದ್ಯಕೀಯವಾಗಿ ಮಾತ್ರವಲ್ಲ ಇದು ಕುಟುಂಬಗಳ ಮೇಲೆ ಅಪಾರವಾದ ಆರ್ಥಿಕ ಮತ್ತು ಭಾವನಾತ್ಮಕ ಹೊರೆ ಬೀಳುವಂತೆ ಮಾಡುತ್ತದೆ. ಆರಂಭಿಕ ಹಂತದಲ್ಲೇ ರೋಗ ನಿರ್ಣಯ, ಆರೋಗ್ಯಕರವಾದ ಜೀವನ ಶೈಲಿ ರೂಢಿಸಿಕೊಳ್ಳುವುದು ಹಾಗೂ ಮಧುಮೇಹದಂತಹ ಸಮಸ್ಯೆಗಳನ್ನು ಸೂಕ್ತವಾಗಿ ನಿಭಾಯಿಸುವುದು ದೀರ್ಘಾವಧಿ ಕಿಡ್ನಿ ಸಮಸ್ಯೆಯ ಅಪಾಯವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಲ್ಲದು ಎಂದರು.
ಇನ್ನು ಅತ್ಯಾಧುನಿಕ ಸೌಲಭ್ಯಗಳು, ಸುಧಾರಿತ ಪರಿಣತಿಯೊಂದಿಗೆ ವೈದ್ಯಕೀಯ ತಂಡವು ಕಿಡ್ನಿ ಕಸಿ ಮೂಲಕ ಜೀವ ಉಳಿಸಬಲ್ಲ ಚಿಕಿತ್ಸೆ ಮತ್ತು ಆರೈಕೆಗೆ ಸರ್ವ ಸನ್ನದ್ಧವಾಗಿದ್ದು ಕಿಡ್ನಿ ಕಸಿ ಅಗತ್ಯವಿರುವ ರೋಗಿಗಳ ಪಾಲಿಗೆ ಹೊಸ ಭರವಸೆ ಮೂಡಿಸಿದೆ ಎಂದು ತಿಳಿಸಿದರು.
ನೆಫ್ರೋಲಜಿ ವಿಭಾಗದ ಹಿರಿಯ ತಜ್ಞ ಡಾ.ಹರ್ಷ ಕುಮಾರ್, ಹಿರಿಯ ಸಮಾಲೋಚಕ ಮತ್ತು ಅಂಗಾಂಗ ಕಸಿ ವೈದ್ಯ ಡಾ.ಸುನಿಲ್ ಆರ್. ಮತ್ತಿತರರು ಉಪಸ್ಥಿತರಿದ್ದರು.