
ಬೆಂಗಳೂರು: ಮಹಿಳೆಯರಿಗೆ ಮನೆ ಜವಾಬ್ದಾರಿ, ಕೆಲಸದ ನಡುವೆ ಈ ರೀತಿಯ ಕ್ರೀಡೆಗಳನ್ನು ಏರ್ಪಡಿಸುವುದರಿಂದ ಅವರಲ್ಲಿ ಕ್ರೀಡಾ ಉತ್ಸಾಹ ಬೆಳೆದು ಒತ್ತಡದ ಜೀವನ ದೂರವಾಗುತ್ತದೆ ಎಂದು ದೇವನಹಳ್ಳಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಾತ್ ಹೇಳಿದರು.
ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಅಯೋಜಿಸಿದ್ದ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತಾಡಿದರು.
ಮಹಿಳೆಯಲ್ಲಿರುವ ಆಸಕ್ತಿಗೆ ಅನುಗುಣವಾಗಿ ವಿವಿಧ ಸ್ಪರ್ಧೆ ಏರ್ಪಡಿಸಿ ಅವರಲ್ಲಿರುವ ಜ್ಞಾನ, ಪ್ರತಿಭೆಯನ್ನು ಇತರರಿಗೆ ಗುರುತಿಸಿ ಕೊಡುತ್ತಿರುವುದು ಸಂತೋಷದ ವಿಷಯ. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಮಹಿಳೆಯರಲ್ಲಿ ಆತ್ಮ ಸ್ಥೈರ್ಯ ಹೆಚ್ಚಿಸಲು ಸಹಕಾರ ನೀಡಬೇಕು. ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಉತ್ತಮ ಸಾಧನೆಗೈಯುತ್ತಿದ್ದು ಪುರುಷನಿಗಿಂತ ಕಡಿಮೆ ಇಲ್ಲ ಎಂದು ಸಾಧನೆ ಮಾಡುತ್ತಿದ್ದಾರೆ ಎಂದರು.
ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ಮ್ಯೂಸಿಕಲ್ ಚೇರ್,ಮಡಿಕೆ ಹೊಡೆಯುವುದು, ಬಾಲ್ಇನ್ ದಿ ಬಕೆಟ್,50 ಮೀ ವಾಕ್ರೇಸ್, ಲೆಮನ್ ಅಂಡ್ ಸ್ಪೂನ್, ಖೋ- ಖೋ, ಕೇರಂ ಸ್ಪರ್ಧೆಗಳು ನಡೆದವು ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ರಣತಿ ಮತ್ತು ಮಾನಸ ಅವರಿಗೆ ಸನ್ಮಾನಿಸಲಾಯಿತು.
ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಜಯಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ನಳಿನಾ, ತಾಲ್ಲೂಕು ದೈಹಿಕ ಶಿಕ್ಷಣ ಪ್ರಬಾರಿ ವೆಂಕಟೇಶ್, ಮದ್ದೂರಪ್ಪ, ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರು, ಇಲಾಖೆ ಸಿಬ್ಬಂದಿ ಹಾಗೂ ಜಿಲ್ಲೆಯ ಮಹಿಳೆಯರು ಉಪಸ್ಥಿತರಿದ್ದರು.