
ಬೆಂಗಳೂರು: ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಲೋಕಾಯುಕ್ತ ಪೊಲೀಸರು ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿರುದ್ದದ್ದ ಮೈನಿಂಗ್ ಕೇಸ್ ಸಂಬಂಧ ಲೋಕಾಯುಕ್ತ ಪೋಲಿಸರು ಪ್ರಾಸಿಕ್ಯೂಷನ್ ಅನುಮತಿಗೆ ಮತ್ತೊಮ್ಮೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಕಳೆದ ಏಳು ತಿಂಗಳ ಹಿಂದೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಈ ವೇಳೆ ಕನ್ನಡದಿಂದ ಇಂಗ್ಲಿಷ್ಗೆ ಭಾಷಾಂತರ ಮಾಡಲು ರಾಜ್ಯಪಾಲರು ಸೂಚನೆ ನೀಡಿದ್ದರು. ಸದ್ಯ 5 ಸಾವಿರ ಪುಟಗಳ ಭಾಷಾಂತರ ಮಾಡಿ ಮತ್ತೊಮ್ಮೆ ಪ್ರಾಸಿಕ್ಯೂಷನ್ಗೆ ವಿಶೇಷ ತನಿಖಾ ತಂಡ ಅನುಮತಿ ಕೇಳಿದೆ.
ಕುಮಾರಸ್ವಾಮಿ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್ಗೆ ಮೈನಿಂಗ್ ಮಂಜೂರು ಮಾಡಿದ್ದರು. ಲೋಕಾಯುಕ್ತ ಎಸ್ ಐಟಿ ಸಂಡೂರು ತಾಲೂಕಿನ ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್ ನ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಗಣಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮತ್ತು ಸಿಎಸ್ ಸರ್ಕಾರ ಅನುಮತಿ ನೀಡಿಲ್ಲ, ಖನಿಜ ರಿಯಾಯಿತಿ ನಿಯಮಾವಳಿ 1960ರ ಪಾಲನೆಯಾಗಿಲ್ಲ. ನಿಯಮ 59(2)ರ ರಿಯಾಯಿತಿ ಬಗ್ಗೆ ಸ್ಪಷ್ಟ ಕಾರಣ ನೀಡಿರುವುದಿಲ್ಲ. ಸ್ಪಷ್ಟ ಕಾರಣ ಇಲ್ಲದೇ ರಿಯಾಯಿತಿಗೆ ಪ್ರಸ್ತಾವ ಕಳಿಸದಂತೆ ಕೇಂದ್ರ ಹೇಳಿತ್ತು.ಪತ್ರ ಬರೆದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ತಿಳಿಸಿತ್ತು.
ಆದ್ರೆ ಕುಮಾರಸ್ವಾಮಿ ಸಿಎಸ್ ಅನುಮೋದನೆಗೆ ವ್ಯತಿರಿಕ್ತವಾಗಿ ಆದೇಶ ಮಾಡಿದ್ದರು. ಖನಿಜ ರಿಯಾಯಿತಿ ನಿಯಾಮವಳಿ 1960ಕ್ಕೆ ವಿರುದ್ದವಾಗಿ ಆದೇಶ ನೀಡಿದ್ದು, ಅದೇಶಕ್ಕೂ ಯಾವುದೇ ಸ್ಪಷ್ಟ ಕಾರಣ ನೀಡದೇ ಆದೇಶಿಸಿದ ಆರೋಪ ಎದುರಿಸುತ್ತಿದ್ದಾರೆ.
ಈ ಬಗ್ಗೆ ಅಕ್ಟೋಬರ್ 6, 2007 ರಂದು ಕಡತದಲ್ಲಿ ಎಚ್ಡಿಕೆ ಬರೆದಿದ್ದಾಗಿ ಆರೋಪವಿದೆ. ನಾನು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೆನೆಂದು ಬರೆದ ಆರೋಪ ಕೇಳಿಬಂದಿದೆ. ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ಗೆ ಅನುಮತಿ ಮಂಜೂರು ಮಾಡಲಾಗಿದೆ. ಹೀಗೆ ಬರೆದು ಸಿಎಂ ಇಲಾಖೆಗೆ ಕಳುಹಿಸಿದ್ದರು ಎಂಬ ಆರೋಪವಿದೆ.
ಸದ್ಯ ಎಚ್ಡಿಕೆ ಮೇಲಿನ ಸಂಡೂರು ಶ್ರೀ ಸಾಯಿ ವೆಂಕಟೇಶ್ವರ ಮೈನಿಂಗ್ ಕೇಸ್ 5 ಸಾವಿರ ಪುಟಗಳ ವರದಿ ಭಾಷಾಂತರಗೊಂಡಿದ್ದು, ಇದೀಗ ಮತ್ತೊಮ್ಮೆ ಪ್ರಾಸಿಕ್ಯೂಷನ್ ಅನುಮತಿ ಕೇಳಿ ಲೋಕಾಯುಕ್ತ ಎಸ್ಐಟಿ ಮನವಿ ಮಾಡಿದ್ದು, ರಾಜ್ಯಪಾಲರ ಕ್ರಮ ಕುತೂಹಲ ಮೂಡಿಸಿದೆ.