NEWSಸಂಸ್ಕೃತಿ

ಬೀಡನಹಳ್ಳಿ: ಇಂದು, ನಾಳೆ ಅನ್ನದಾನಪ್ರಭು ಶ್ರೀನಂದಿ ಬಸವೇಶ್ವರ ಸ್ವಾಮಿಯ 14ನೇ ಬಂಡಿ-ಕೊಂಡೋತ್ಸವ

ವಿಜಯಪಥ ಸಮಗ್ರ ಸುದ್ದಿ
  • ದೇವರಾಜು ಬೀಡನಹಳ್ಳಿ
    ಬನ್ನೂರು: ಬೀಡನಹಳ್ಳಿ ಶ್ರೀಕ್ಷತ್ರದಲ್ಲಿ ನೆಲೆಸಿರುವ ಅನ್ನದಾನಪ್ರಭು ಶ್ರೀ ನಂದಿಬಸವೇಶ್ವರ ಸ್ವಾಮಿಯ 14ನೇ ಬಂಡಿ ಮತ್ತು ಕೊಂಡೋತ್ಸವ ಫೆ.22-2026 ಹಾಗೂ 23-2026ರ ಅಂದರೆ ಇಂದು ನಾಳೆ ಜರುಗಲಿದೆ.

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ, ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದಲ್ಲಿ ಬಂಡಿ ಮಹೋತ್ಸವ ನಡೆಯಲಿದ್ದು, ಮೊಳ್ಳೆ ಕೆಂಪಣ್ಣನವರ ಕುಟುಂಬ ಮತ್ತು ದೊಡ್ಡನಿಂಗಯ್ಯನವರ ಕುಟುಂಬದವರು ಬಂಡಿಗೆ ತಮ್ಮ ಜೋಡೆತ್ತುಗಳನ್ನು ಮೊದಲು ಕಟ್ಟಿ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ ಬಂಡಿ ಉತ್ಸವಕ್ಕೆ ಇಂದು ಭಾನುವಾರ ಸಂಜೆ ತಮ್ಮ ಜೋಡೆತ್ತುಗಳನ್ನು ಬಂಡಿಗೆ ಕಟ್ಟಿ ಓಡಿಸುವ ಮೂಲಕ ಚಾಲನೆ ನೀಡುವರು. ನಂತರ ಗ್ರಾಮದ ಇತರರು ಜೋಡೆತ್ತುಗಳನ್ನು ಕಟ್ಟಿ ಬಂಡಿ ಓಡಿಸಲಿದ್ದಾರೆ.

ಇನ್ನು ಫೆ.23ರಂದು ಅಂದರೆ ನಾಳೆ ಮುಂಜಾನೆ 630ರೊಳಗೆ ಕೊಂಡೋತ್ಸವ ನೆರವೇರಲಿದೆ. ಈಗಾಗಲೇ ಬೀಡನಹಳ್ಳಿ ಗ್ರಾಮಸ್ಥರು ಕೊಂಡೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕೊಂಡೋತ್ಸವಕ್ಕೆ ಚನ್ನೇಗೌಡನವರ ಕುಟುಂಬ ಕೊಂಡ ತೆಗೆಯಲಿದ್ದು, ಶಂಭೇಗೌಡರ ಕುಟುಂಬದವರು ಸೌದೆ (ಕಟ್ಟಿಗೆ) ತರಲಿದ್ದಾರೆ. ಭಾನುವಾರ ರಾತ್ರಿ 10 ಗಂಟೆ ನಂತರ ಮಂಗಳವಾದ್ಯಗಳೊಂದಿಗೆ ಶ್ರೀ ನಂದಿ ಬಸವೇಶ್ವರ ಸ್ವಾಮಿಯ ಬಸವನೊಂದಿಗೆ ಗ್ರಾಮದ ಮುಖಂಡರು ಮೆರವಣಿಗೆ ಮೂಲಕ ಅರ್ಚಕ ಪುಟ್ಟಮಾದಪ್ಪ ಅವರ ಮನೆಗೆ ತೆರಳಿ ಅಲ್ಲಿಂದ ಬೆಂಕಿಕೆಂಡ ತಂದು ಕೊಂಡಕ್ಕೆ ಸ್ಪರ್ಶ ಮಾಡುವರು.

ಬಳಿಕ ರಂಗಬೆಟ್ಟಯ್ಯನವರ ಕುಟುಂಬದವರು ಕೊಂಡವನ್ನು ಹದ ಮಾಡುವರು. ಗುಳ್ಳಯ್ಯನ ನಿಂಗಪ್ಪ, ಬೆಟ್ಟೇಗೌಡರ ಕುಟುಂಬದವರು ಕೊಂಗ ಹೊಡೆಯುವರು ( ಕೆಂಡಕ್ಕೆ ಗಾಳಿ ಬೀಸುವುದು). ಮುಂಜಾನೆ 6.30 ಗಂಟೆಯೊಳಗೆ ಕಾಶಿ ವೇಷಧಾರಿ ದೇವಸ್ಥಾನದ ಅರ್ಚಕರೂ ಆದ ಮಹದೇವಸ್ವಾಮಿ ಕೊಂಡ ಹಾಯುವರು. ನಂತರ ಶ್ರೀ ಸ್ವಾಮಿಯ ಗುಡ್ಡಪ್ಪನವರಾದ ನಂಜುಂಡೇಗೌಡರು ಮತ್ತು ರಾಜೇಶ ಅವರು ಕೊಂಡ ಹಾಯಲಿದ್ದಾರೆ. ಕೊಂಡೋತ್ಸವ ಆದ ಒಂದು ವಾರದ ಬಳಿಕ ಬೆಟ್ಟೇಗೌಡನ ಮನೆಯವರು ಕೊಂಡ ಮುಚ್ಚುವರು.

ಅರ್ಚಕರು ಕೊಂಡ ಹಾಯುವ ಮುನ್ನ ದೇಸ್ಥಾನದ ಬಾಗಿಲಿಗೆ ಕೆಂಡ ಎರಚಿ ಸಾವಿರಾರು ಭಕ್ತರ ನಡುವೆ ವೇದಘೋಷಗಳು ಮೊಳಗುತ್ತವೆ. ಭಾನುವಾರ ರಾತ್ರಿ ಪೂರ ವಿವಿಧ ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮಗಳನ್ನು ಗ್ರಾಮದ ಜಾನಪದ ಕಲಾವಿದರೊಂದಿಗೆ ಇತರರು ನಡೆಸಿಕೊಡಲಿದ್ದಾರೆ.

ಗ್ರಾಮಸ್ಥರ ನಿತ್ಯ ಆರಾಧ್ಯ ದೈವ: ನಂಬಿದ ಭಕ್ತರು ಬೇಡುವ ವರವನ್ನು ದಯಪಾಲಿಸುವ ಮೂಲಕ ಲಕ್ಷಾಂತರ ಭಕ್ತರ ನಂಬಿಕೆಯ ದೈವವಾಗಿರುವ ಬೀಡನಹಳ್ಳಿ ಗ್ರಾಮದ ಶ್ರೀ ನಂದಿ ಬಸವೇಶ್ವರ ಸ್ವಾಮಿ ಬೀಡನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರ ನಿತ್ಯ ಆರಾಧ್ಯ ದೈವ.

ಕಾವೇರಿ ನದಿ ದಂಡೆಯ ಸ್ವಚ್ಛ ಪರಿಸರಹೊಂದಿರುವ ಗ್ರಾಮದಲ್ಲಿ ಶತಶತಮಾನಗಳಷ್ಟು ಹಳೆಯದಾದ ಶ್ರೀಸ್ವಾಮಿಯ ದೇವಾಲಯ. ಇದು ದೈಹಿಕ ಮತ್ತು ಮಾನಸಿಕವಾಗಿ ಹಲವು ಸಮಸ್ಯೆಗಳಿಗೆ ಸಿಲುಕಿರುವ ಭಕ್ತರ ನೋವು ನೀಗಿಸುವ ತಾಲೂಕಿನ ಏಕೈಕ ದೈವ ಶ್ರೀಸ್ವಾಮಿ ಎಂಬುವುದು ಭಕ್ತರ ನಂಬಿಕೆ. ಶ್ರೀಸ್ವಾಮಿಯ ಸನ್ನಿಧಾನಕ್ಕೆ ಬೆಂಗಳೂರು, ಮೈಸೂರು, ಹಾಸನ, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರು ಹರಕೆ ಮಾಡಿಕೊಂಡು ಕಷ್ಟ ಪರಿಹಾರವಾದ ಬಳಿಕ ಹರಕೆ ತೀರಿಸುತ್ತಾರೆ.

 ಹಸಿವು ನೀಗಿಸುವ ಅನ್ನದಾನಪ್ರಭು: ಅಂದಹಾಗೆ ಹಣ ಒಡವೆ ಹೀಗೆ ಬೆಲೆಬಾಳುವ ವಸ್ತುಗಳನ್ನು ದೇವಾಲಯಕ್ಕೆ ಭಕ್ತರು ಹರಕೆ ರೂಪದಲ್ಲಿ ನೀಡಬೇಕಿಲ್ಲ. ಶ್ರೀಸ್ವಾಮಿಗೆ ಆರ್ಥಿಕ ಶಕ್ತಿಗೆ ಅನುಸಾರವಾಗಿ ಹರಕೆ ಮಾಡಿಕೊಂಡು ದೊಡ್ಡಪರ ಇಲ್ಲವೇ ಚಿಕ್ಕಪರವನ್ನು (ಚಿಕ್ಕಪರ ಎಂದರೆ ಶಿವರಾತ್ರಿ ಬಳಿಕ ಸೋಮವಾರ ಮತ್ತು ಶುಕ್ರವಾರಗಳಲ್ಲಿ ರಾತ್ರಿ ವೇಳೆ 8 ರಿಂದ 10ಸಾವಿರ ಭಕ್ತರಿಗೆ ಅನ್ನದಾಸೋಹ ಮಾಡುವುದು.

ದೊಡ್ಡ ಪರ ಸೋಮವಾರ ಇಲ್ಲ ಶುಕ್ರವಾರದಂದು ಬೆಳಗ್ಗೆ 8ರಿಂದ ರಾತ್ರಿ 7 ಗಂಟೆ ವರೆಗೆ ಅನ್ನದಾಸೋಹವನ್ನು ದೇಗುಲದ ಆವರಣದಲ್ಲಿ ನೆರವೇರಿಸುವುದು) ಮಾಡಬೇಕು. ಇದಲ್ಲದೆ ಪ್ರತಿ ಸೋಮವಾರ ಮತ್ತು ಶುಕ್ರವಾರ ಸೇರಿದಂತೆ ಇತರ ಬಹುತೇಕ ಎಲ್ಲ ವಾರಗಳಲ್ಲೂ ಮೊಸರನ್ನ ಮತ್ತು ಪುಳಿಯೋಗರೆ, ಬಾತು ಹೀಗೆ ವಿವಿಧ ಪ್ರಸಾದವನ್ನು ಮಾಡಿಸಿ ನೂರಾರು ಭಕ್ತರಿಗೆ ಪ್ರಸಾದ ರೂಪದಲ್ಲಿ ಬಡಿಸಲಾಗುತ್ತದೆ.

ಬಂಜೆತನ ನಿವಾರಣೆ: ವೈಜ್ಞಾನಿಕವಾಗಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಚಿಕಿತ್ಸೆಗೆ ಒಳಪಟ್ಟರೂ ಮಕ್ಕಳಾಗದೇ ಬಂಜೆತನದಿಂದ ಬಳಲಿ ಜೀವನದಲ್ಲಿ ನಿರಾಸೆಗೊಂಡು, ಮಾನಸಿಕವಾಗಿ ಕುಗ್ಗಿರುವ ಅನೇಕ ಮಂದಿ ಶ್ರೀಸ್ವಾಮಿ ಸನ್ನಿಧಿಗೆ ಬಂದು ಮಕ್ಕಳ ವರ ಕೇಳಿ ಹರಕೆ ಮಾಡಿಕೊಂಡು ಹೋಗುತ್ತಾರೆ. ಇಷ್ಟೇ ಅಲ್ಲದೇ ದೆವ್ವ, ಭೂತ, ಪೀಡೆ, ಪಿಶಾಚಿಗಳಿಂದ ಬಳಲುವವರು ಶ್ರೀಸ್ವಾಮಿ ಸನ್ನಿಧಿಗೆ ಬರುತ್ತಾರೆ. ಇಲ್ಲಿಗೆ ಬರುವ ನೂರಾರು ಭಕ್ತರ ಕಾಯಿಲೆ ವಾಸಿಯಾಗಿದೆ. ಅಷ್ಟರ ಮಟ್ಟಿಗೆ ಈ ಸ್ಥಳದ ಮಹಿಮೆ ಇದೆ ಎಂದು ಭಕ್ತರು ನಂಬಿದ್ದಾರೆ.

ಗ್ರಾಮಕ್ಕೆ ಹಂದಿಗಳ ಪ್ರವೇಶವಿಲ್ಲ: ಶ್ರೀ ನಂದಿ ಬಸವೇಶ್ವರ ಸ್ವಾಮಿ ಬೀಡನಹಳ್ಳಿ ಗ್ರಾಮ ಸೇರಿ ಸುತ್ತ ಮುತ್ತಲ ಹತ್ತಾರು ಗ್ರಾಮಗಳ ಆರಾಧ್ಯ ದೈವ. ಇಲ್ಲಿ ಪ್ರಮುಖವಾದ ಒಂದು ಪ್ರತೀತಿ ಇದೆ. ಅದೆಂದರೆ ಗ್ರಾಮಕ್ಕೆ ಹಂದಿಗಳ ಪ್ರವೇಶವಿಲ್ಲ. ಒಂದು ವೇಳೆ ಬಂದರೆ ಅವು ದೇವಸ್ಥಾನದ ಹಿಂಭಾಗವಾಗಲಿ ಅಥವಾ ಮುಂಭಾಗವಾಗಲಿ ಹೋದರೆ ಗ್ರಾಮದ ಎಲ್ಲೆಯಿಂದ ಹೊರಹೋಗುತ್ತಿದ್ದಂತೆ ಸತ್ತು ಹೋಗುತ್ತವೆ ಎಂಬ ನಂಬಿಕೆ ಈಗಲು ಇದೆ. ಆದ್ದರಿಂದಲೇ ಇಂದಿಗೂ ಕೂಡ ಗ್ರಾಮಕ್ಕೆ ಹಂದಿಗಳ ಪ್ರವೇಶವಿಲ್ಲ. ಅಲ್ಲದೇ ಗ್ರಾಮದ ನಿವಾಸಿಗಳು ಹಂದಿ ಮಾಂಸ ತಿಂದರೆ ಮುಖ, ಕೈ-ಕಾಲು ಊದಿಕೊಳ್ಳುವ ಜತೆಗೆ ವಿಚಿತ್ರ ರೋಗಕ್ಕೆ ತುತ್ತಾಗಿ ನರಳಿ ನರಳಿ ಸಾಯುತ್ತಾರೆ ಎಂದು ಗ್ರಾಮದ ಹಿರಿಯರು ವಿವರಿಸುತ್ತಾರೆ.

ದೀಪಾವಳಿಯಲ್ಲಿ ಮಾಂಸಾಹಾರ ನಿಷೇಧ: ಬೀಡನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದ ಮೊದಲ ಕಾರ್ತಿಕ ದೀಪವನ್ನು ಶ್ರೀನಂದಿ ಬಸವೇಶ್ವರ ದೇವಾಲಯದಲ್ಲಿ ಹಚ್ಚುವ ಮುನ್ನ ಮಾಂಸ ಆಹಾರವನ್ನು ಮನೆಗಳಲ್ಲಿ ಮಾಡಬಹುದು. ಶ್ರೀಸ್ವಾಮಿ ಸನ್ನಿಧಿಯಲ್ಲಿ ದೀಪ ಹಚ್ಚಿದ ನಂತರ ಕಡೆಯ ಕಾರ್ತಿಕ ಸೋಮವಾರದವರೆಗೆ ಅಂದರೆ ಒಂದು ತಿಂಗಳ ಕಾಲ ಮಾಂಸ ಆಹಾರವನ್ನು ಮನೆಯಲ್ಲಿ ಯಾರು ಮಾಡುವುದಿಲ್ಲ. ಈಗಲೂ ಇದು ಮುಂದುವರಿದುಕೊಂಡು ಬರುತ್ತಿದೆ.

Megha
the authorMegha

Leave a Reply

error: Content is protected !!
Latest news
ಭಟ್ಕಳ: ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ ಒಂದೇ ಕುಟುಂಬದ 8 ಮಂದಿ ಮೃತ- ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಹೈ ಕೋರ್ಟ್‌ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು! ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿಗಾಗಿ ಪತ್ರ ಚಳವಳಿಗೆ ಮುಂದಾದ ಸಾರಿಗೆ ನೌಕರರು: ಹೈ ಕೋರ್ಟ್‌ ಸಿಜೆಗೆ ಲೆಟರ್ ಬರೆಯಲು ... ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್‌ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರ... ಬಿಎಂಟಿಸಿ ಹೊಸ ವೇಗದೂತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು ನಿವೇಶನ ರಹಿತ 500 ಬಡ ಕುಟುಂಬಗಳಿಗೆ ಜೂನ್ ತಿಂಗಳಲ್ಲಿ ನಿವೇಶನ ವಿತರಣೆ: ಸಚಿವ ಮುನಿಯಪ್ಪ