ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನ ಹೆಚ್ಚಳವನ್ನು ಶೇ.3ರಿಂದ ಶೇ.5ರಷ್ಟು ಕೊಡಲಷ್ಟೇ ನಮ್ಮ ನಿಗಮಗಳು ಶಕ್ತವಾಗಿವೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ತಿಳಿಸಿದ್ದಾರೆ.

ಇಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು 2021ನೇ ಸಾಲಿನಿಂದ ಪ್ರಸ್ತುತ ಇಲ್ಲಿಯವರೆಗೆ ಸಂಸ್ಥೆಯ ಆರ್ಥಿಕ ಸ್ಥಿತಿಗತಿಗಳು ಮತ್ತು ಖರ್ಚು ವೆಚ್ಚಗಳ ಬಗ್ಗೆ ಸಂಪೂರ್ಣ ಮಾಹಿತಿಯ ಸಾರಾಂಶವನ್ನು ವಿವರಿಸಿದರು.
ತದನಂತರದಲ್ಲಿ ಮೂರು ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಅವರವರ ಸಂಸ್ಥೆಯ ಆಯವ್ಯಯಗಳ ಬಗ್ಗೆ ವಿವರಣೆ ನೀಡಿದರು. ಬಳಿಕ ವೇತನ ಹಿಂಬಾಕಿಯ ವಿಚಾರದಲ್ಲಿ ಸರ್ಕಾರ ಈಗಾಗಲೇ 26 ತಿಂಗಳ ವೇತನದ ಹಿಂಬಾಕಿಯನ್ನು ನೀಡಲು 1,272 ಕೋಟಿ ರೂ.ಗಳನ್ನು ಅನುದಾನ ಮೀಸಲಿರಿಸಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದ ನಂತರ ನೌಕರರಿಗೆ ನೀಡುವುದಾಗಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.
ಆ ಬಳಿಕ ವೇತನ ಹೆಚ್ಚಳದ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ತಮ್ಮ ಸಂಸ್ಥೆಯ ಆರ್ಥಿಕ ಸ್ಥಿತಿಗತಿಗಳಿಗನುಗುಣವಾಗಿ ಬಿಎಂಟಿಸಿ 3% ಪರ್ಸೆಂಟ್ ಕೊಡಲು ಶಕ್ತವಾಗಿದೆ ಅನ್ನುವ ವಿಚಾರ ಪ್ರಸ್ತಾಪಿಸಿದರು.
ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ ಹಾಗೂ ಎನ್ಡಬ್ಲ್ಯುಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಕೊನೆಯದಾಗಿ 5% ಕೊಡಲು ನಾವು ಸಿದ್ದರಿದ್ದೇವೆ ಅನ್ನೋ ವಿಚಾರವನ್ನು ತಿಳಿಸಿದರು.
ಈ ಎಲ್ಲವನ್ನು ಕೇಳಿದ ಮೇಲೆ ನಾವು ಅನಿವಾರ್ಯವಾಗಿ ಮುಂದಿನ ದಿನಗಳಲ್ಲಿ ನಾವು ಹೋರಾಟದ ಮುಖಾಂತರ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿ ಸಭೆಯಿಂದ ಹೊರ ನಡೆದೆವು ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ ಇಂದಿನ ಎಂಡಿ ಸಭೆಯು ಯಾವುದೇ ಫಲಪ್ರದವನ್ನು ಕಾಣದೆ ವಿಫಲಗೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಾವು ಹೋರಾಟ ಮಾಡಿಯೇ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಪಡೆದುಕೊಳ್ಳೋಣ ಎಂದು ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
Related










