ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ತಾಲ್ಲೂಕಿನಲ್ಲಿ ಹೆಣ್ಣುಮಕ್ಕಳು ಸೋಂಕಿನ ಲಕ್ಷಣಗಳು ಕಂಡು ಬಂದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಭಯಪಡುತ್ತಿರುವ ಕಾರಣ ಹೆಣ್ಣುಮಕ್ಕಳ ಸಾವು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ ಎಂದು ತಾ.ಪಂ.ಇಒ ಸಿ.ಆರ್.ಕೃಷ್ಣಕುಮಾರ್ ತಿಳಿಸಿದರು.
ತಾಲೂಕಿನ ಕಗ್ಗುಂಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಸೆಂಟರ್ ನಲ್ಲಿ ಸೋಮವಾರ ರಾತ್ರಿ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ಹಾಗೂ ಮನೋಬಲ ಹೆಚ್ಚಿಸುವ ಸಲುವಾಗಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಸಂಗೀತ ರಸಸಂಜೆ ಹಾಗೂ ಮನೋರಂಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಕೋವಿಡ್ ನಿಂದ ಸಾವಿಗೀಡಾದವರಲ್ಲಿ ಮಹಿಳೆಯರೆ ಹೆಚ್ಚಿನವರಾಗಿದ್ದಾರೆ, ಇವರು ತಮ್ಮ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯುಸಲು ಹೆಚ್ಚು ಶ್ರಮವಹಿಸಿ ದುಡಿಯುತ್ತಿರುವ ಕಾರಣಕ್ಕೆ ಇವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ,
ಅಪ್ಪಿತಪ್ಪಿ ಸಣ್ಣಪುಟ್ಟ ಜ್ವರ. ಕೆಮ್ಮು, ನಗಡಿ ಸೇರಿದಂತೆ ಇನ್ನಿತರ ಸೋಂಕುಗಳು ಇವರನ್ನು ಭಾದಿಸಿದರೂ ಇದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸೋಕು ಹೆಚ್ಚಲು ಕಾರಣವಾಗಿದೆ ಆದ್ದರಿಂದ ಯಾರಿಗಾದರೂ ಸಣ್ಣಪುಟ್ಟ ಜ್ವರ ಹಾಗೂ ಸೋಕಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ಸ್ಥಳೀಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತೋರಿಸಿ ಪರೀಕ್ಷೆ ಮಾಡಿಸಿಕೊಳ್ಳಿ ಒಂದು ವೇಳೆ ಸೋಂಕು ಕಂಡು ಬಂದರೂ ಹತ್ತಿರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯಿರಿ ಎಂದರು.
ತಹಸೀಲ್ದಾರ್ ಚಂದ್ರಮೌಳಿ ಮಾತನಾಡಿ, ಸೋಂಕು ಆವರಿಸಿದವರು ಭಯಪಡುವ ಅಗತ್ಯವಿಲ್ಲ, ತಾಲೂಕು ಆಡಳಿತ ನಿಮ್ಮೊಂದಿಗಿದೆ ಕೋವಿಡ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಅಗತ್ಯವಾದ ಚಿಕಿತ್ಸೆ ಹಾಗೂ ಔಷಧವನ್ನು ನೀಡುತ್ತೇವೆ. ಕೇವಲ ಆಹಾರ ಸೇವಿಸುವುದರಿಂದ ಸೋಕಿತರಿಗೆ ಆರೋಗ್ಯದ ಸಮಸ್ಯೆ ಬಗೆಯರಿಯುವುದಿಲ್ಲ.
ರೋಗನಿರೋಧಕ ಶಕ್ತಿ ಮತ್ತು ಆತ್ಮಬಲವನ್ನು ಹೆಚ್ಚಿಸಲು ಸಂಗೀತ, ಯೋಗಭ್ಯಾಸ ಹಾಗೂ ಮನೋರಂಜನೆ ಮುಖ್ಯ, ಹಾಗಾಗಿ ಕೋವಿಡ್ ಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರ ಮನೋಬಲ ಹೆಚ್ಚಿಸುವ ಸಲುವಾಗಿ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ತಾಲೂಕು ನೌಕರರ ಸಂಘದ ನಿರ್ದೇಶಕ ಅಣ್ಣೇಗೌಡ, ಎಡಿಎಲ್ಆರ್ ಚಿಕ್ಕಣ್ಣ, ಗಾಯಕ ಸತೀಶ್ ಶೈವ ಸೇರಿದಂತೆ ಮತ್ತಿತರ ಕಲಾವಿದರು ಗಾಯನ ಮತ್ತು ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುವ ಮೂಲಕ ರಸಸಂಜೆ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ, ಶಿರಸ್ತೇದಾರ್ ವಿನೋದ್ ಕುಮಾರ್, ಸಿಡಿಪಿಒ ಕುಮಾರ್, ಸರ್ವೆಪ್ರಕಾಶ್, ಕಂದಾಯ ನಿರೀಕ್ಷಕ ಶ್ರೀಧರ್,ಗ್ರಾಮಲೆಕ್ಕಿಗ ಮನುಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಇದ್ದರು.