KSRTC ಶಕ್ತಿ ಯೋಜನೆ : 500ನೇ ಕೋಟಿ ಪ್ರಯಾಣಿಕರಾಗಿ ಟಿಕೆಟ್ ಪಡೆಯುವ ಮಹಿಳೆಗೆ ವಿಶೇಷ ಸನ್ಮಾನ- ಸಚಿವ ರಾಮಲಿಂಗಾರೆಡ್ಡಿ


- 500 ಕೋಟಿಯತ್ತ ಶಕ್ತಿಯೋಜನೆ- ಮಹಿಳೆಯರಿಗೆ 500 ಕೋಟಿ ಉಚಿತ ಟಿಕೆಟ್ ವಿತರಿಸಿ ದಾಖಲೆ ನಿರ್ಮಿಸುವತ್ತ ಸಾರಿಗೆ ನಿಗಮಗಳು
ಬೆಂಗಳೂರು: 2023ರ ಜೂನ್ 11ರಂದು ರಾಜ್ಯದಲ್ಲಿ ಜಾರಿಗೆ ಬಂದ ‘ಶಕ್ತಿ’ ಯೋಜನೆಯಡಿ ನಮ್ಮ ಸಾರಿಗೆ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರು 500 ಕೋಟಿ ಉಚಿತ ಪ್ರಯಾಣ ಮಾಡುವ ಹತ್ತಿರ ಸಲುಪಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಮಾಡುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಗಳ ಹಿಂದೆ ಆರಂಭಿಸಲಾದ ಈ ಶಕ್ತಿ ಯೋಜನೆಯಡಿ ಇದೇ ಜು.14 ಅಥವಾ 15ಕ್ಕೆ 500 ಕೋಟಿ ಉಚಿತ ಪ್ರಯಾಣವನ್ನು ರಾಜ್ಯದ ಮಹಿಳೆಯರಿಗೆ ನೀಡಿದ ಗುರಿ ತಲುಪಲಿದೆ.
ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ವಿಶೇಷ ಕಾರ್ಯಕ್ರಮ ಆಯೋಜಿಸುವ ಕುರಿತು ಚಿಂತನೆಯಿದೆ. ಹೀಗಾಗಿ ಈ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಇತರರೊಂದಿಗೆ ಚರ್ಚಿಸಲಾಗುವುದು. ಜತೆಗೆ 500 ಕೋಟಿ ಉಚಿತ ಪ್ರಯಾಣದ ಟಿಕೆಟ್ ಪಡೆಯುವ ಪ್ರಯಾಣಿಕ ಮಹಿಳೆಗೆ ವಿಶೇಷ ಬಹುಮಾನ ನೀಡುವ ಚಿಂತನೆಯಿದೆ ಎಂದು ಹೇಳಿದರು.
ಸರ್ಕಾರಿ ಸಾರಿಗೆ ಬಸ್ಗಳಲ್ಲಿ 500 ಕೋಟಿ ಉಚಿತ ಪ್ರಯಾಣ ನೀಡಿದ್ದು ನಮ್ಮ ರಾಜ್ಯವೇ ಮೊದಲಾಗುತ್ತಿದ್ದು, ಇದು ದಾಖಲೆಯಾಗಿದೆ. ಶಕ್ತಿ ಯೋಜನೆ ಅನುಷ್ಠಾನಗೊಂಡಾಗ ಹಲವು ಸವಾಲುಗಳು ನಮ್ಮೆದುರಿದ್ದವು. ಸಿಬ್ಬಂದಿ, ಬಸ್ಗಳ ಕೊರತೆಗಳಿದ್ದವು. ಈ ಕೊರತೆಯ ನಡುವೆ ರಾಜ್ಯದ ನಾಲ್ಕೂ ನಿಗಮಗಳ ಸಾರಿಗೆ ಸಿಬ್ಬಂದಿ ಜನರ ಸೇವೆಯಲ್ಲಿ ನಿರತರಾಗಿ ಈ ಗುರಿ ತಲುಪಲು ಶ್ರಮಿಸಿದ್ದಾರೆ. ಇದರ ಎಲ್ಲ ಕ್ರೆಡಿಟ್ಗಳು ಸಾರಿಗೆ ನಿಗಮಗಳ ಎಲ್ಲ ನೌಕರರಿಗೆ ಸಲ್ಲಬೇಕು ಎಂದು ಹೇಳಿದರು.
ಇನ್ನು ಕೊರೊನಾ ಅವಧಿಯಲ್ಲಿ 3,800 ಬಸ್ಗಳನ್ನು ಸ್ಥಗಿತಗೊಳಿಸಲಾಗಿತ್ತು. ನಾವು ಅಧಿಕಾರಕ್ಕೆ ಬಂದ ನಂತರ 9 ಸಾವಿರ ಜನರನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, 5,100 ಬಸ್ಗಳನ್ನು ಸೇರ್ಪಡೆಯಾಗಿವೆ.
ಜತೆಗೆ 1.54 ಲಕ್ಷ ಶೆಡ್ಯೂಲ್ಗಳಿಗೆ ಹೆಚ್ಚುವರಿಯಾಗಿ 20 ಸಾವಿರ ಶೆಡ್ಯೂಲ್ಗಳನ್ನು ಸೇರಿಸಲಾಗಿದೆ. ಹಾಗೆಯೇ, ಶಕ್ತಿ ಯೋಜನೆ ಜಾರಿ ನಂತರ ಪ್ರತಿ ದಿನ 84 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ 1 ಕೋಟಿ ಮೀರಿದೆ. ಜತೆಗೆ ಈವರೆಗೆ ₹12,534 ಕೋಟಿ ಮೌಲ್ಯದ ಟಿಕೆಟ್ಗಳು ಖರೀದಿಯಾಗಿವೆ ಎಂದು ತಿಳಿಸಿದರು.

Related
