ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ಮಹಾಲಕ್ಷ್ಮಿಪುರ ವಿಭಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಯನ್ನು ಕರ್ತವ್ಯ ಲೋಪವೆಸಗಿರುವ ಕಾರಣ ಕರ್ತವ್ಯದಿಂದ ಬಿಡುಗಡೆಗೊಳಿ ಪಶ್ಚಿಮ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅದೇಶ ಹೊರಡಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆ ಸಹಾಯಕ ಅಭಿಯಂತರರಾದ ಸಂತೋಷ್, ಚಂದನ ಬಿ.ಎಸ್ ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕ (ಗುತ್ತಿಗೆ ಸಿಬ್ಬಂದಿ) ಬಾಬು ಎಂಬುವರೆ ಕರ್ತವ್ಯ ಲೋಪವೆಸಗಿದವರು.
ಈ ವಲಯದ ವಿವಿಧ ವಾರ್ಡ್ ಗಳಲ್ಲಿ ಸಮಸ್ಯೆಗಳು ಮತ್ತು ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ 1ನೇ ಹಾಗೂ 2ನೇ ಜುಲೈ 2025 ರಂದು ನಡೆದ ಸಭೆಯಲ್ಲಿ ನೀಡಿದ ಮಾರ್ಗದರ್ಶನದಂತೆ ಹಾಗೂ 14ನೇ ಜುಲೈ 2025 ರಂದು ಹೊರಡಿಸಿರುವ ಸಭಾ ನಡವಳಿಯಂತೆ ತಮ್ಮ ವಾರ್ಡ್ ವ್ಯಾಪ್ತಿಯ ದೂರುಗಳನ್ನು ಸಹಾಯ 2.0 ತಂತ್ರಾಂಶ (Sahaaya 2.0 App) ದಲ್ಲಿ ಅಪ್ಲೋಡ್ ಮಾಡಿ ನಂತರ ದೂರುಗಳ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿತ್ತು.
ಇಂದು ಮುಖ್ಯ ಆಯುಕ್ತರು ವಾರ್ಡ್-102 ವೃಷಭಾವತಿನಗರ, ಮಹಾಲಕ್ಷ್ಮೀಪುರ ವಿಭಾಗದಲ್ಲಿ ಬೆಳಗ್ಗೆ ನಡಿಗೆ ಮೂಲಕ ತಪಾಸಣೆ ಕೈಗೊಂಡ ಸಂದರ್ಭದಲ್ಲಿ ರಸ್ತೆಯಲ್ಲಿ ಇರುವ ಗುಂಡಿಗಳು, ಪಾದಚಾರಿ ಮಾರ್ಗದ ಅಂಚಿನಲ್ಲಿ ತ್ಯಾಜ್ಯ, ಪಾದಚಾರಿ ಮಾರ್ಗದ ಮೇಲೆ ಮನೆ ಕಟ್ಟಡದ ಭಗ್ನಾವಶೇಷಗಳನ್ನು ಸುರಿದಿರುವುದು ಮತ್ತು ರಸ್ತೆಯ ಬದಿಯಲ್ಲಿ ಘನತ್ಯಾಜ್ಯ, ಒಳಚರಂಡಿ ಸ್ವಚ್ಚಗೊಳಿಸಿಲ್ಲದಿರುವುದು. ಅಲ್ಲದೇ ದೂರುಗಳ ವಿಲೇವಾರಿ ಮಾಡಲು ಯಾವುದೇ ರೀತಿಯ ಕ್ರಮವಹಿಸಿಲ್ಲ ಮತ್ತು ಸಾರ್ವಜನಿಕರು ಸಹ ಈ ಬಗ್ಗೆ ಬಹಳಷ್ಟು ದೂರುಗಳನ್ನು ಹೇಳಿಕೊಂಡಿದ್ದರು.
ಈ ಸಂಬಂಧ ಈಗಾಗಲೇ 14ನೇ ಜುಲೈ 2025 ರಂದು ಹೊರಡಿಸಿರುವ ಸಭಾ ನಡವಳಿಯಲ್ಲಿ ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿ ಪರಿಹರಿಸಲು ಕ್ರಮವಹಿಸುವುದು ಇಲ್ಲದಿದ್ದಲ್ಲಿ ಸಭಾ ನಡವಳಿಯನ್ನೇ ಕಾರಣಕೇಳಿ ಪತ್ರವೆಂಬುದಾಗಿ ಭಾವಿಸಲು ಸೂಚಿಸಿ ಸಹಾಯ 2.0 ತಂತ್ರಾಂಶದಲ್ಲಿ ದೂರುಗಳ ಕುರಿತು ಅಪ್ಲೋಡ್ ಮಾಡಲು ತಿಳಿಸಿದ್ದರೂ ನೌಕರರು ಸಹ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ.
ಹೀಗಾಘಿ ಈ ನೌಕರರು ತಮ್ಮ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿತನ ತೋರಿಸಿರುವುದರಿಂದ ಹಾಗೂ ಇವರ ಸೇವೆಯು ತೃಪ್ತಿಕರವಾಗಿರದೇ ಇರುವುದರಿಂದ ಸಾರ್ವಜನಿಕರ ಮತ್ತು ಆಡಳಿತ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಾರ್ಡ್-102 ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.

Related
