ಹೈದರಾಬಾದ್: ಲಡಾಖ್ನಲ್ಲಿ ಭಾರತೀಯ ಯೋಧರು ಮಾಡಿರುವ ತ್ಯಾಗ, ಬಲಿದಾನ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್.ಭದೌರಿಯಾ ಹೇಳಿದ್ದಾರೆ.
ಹೈದರಾಬಾದ್ನ ವಾಯುಪಡೆ ಅಕಾಡೆಮಿಯಲ್ಲಿ ಶನಿವಾರ ಭದೌರಿಯಾ ಸಮ್ಮುಖದಲ್ಲಿ ನಡೆದ ಸಂಯೋಜಿತ ಪದವಿ ಪರೇಡ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಲಡಾಖ್ನ ಗಾಲ್ವಾನ್ ನದಿ ಕಣಿವೆಯಲ್ಲಿ ವೀರ ಯೋಧರ ತ್ಯಾಗ, ಬಲಿದಾನವಾಗಿದೆ. ಅದಕ್ಕೆ ತಕ್ಕ ಪಾಠವನ್ನು ಚೀನಾಕ್ಕೆ ಕಲಿಸಿಯೇ ತೀರುತ್ತೇವೆ. ಹೀಗಾಗಿ ನಮಗೆ ಎಂಥ ಪರಿಸ್ಥಿತಿ ಎದುರಾದರೂ ಅದನ್ನು ನಿಭಾಯಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.
ಯಾವುದೇ ಸಮಯದಲ್ಲೇ ಶತ್ರುಗಳು ಬಂದರೂ ಅವರಿಗೆ ತಕದ್ಕ ಪ್ರತಿಕ್ರಿಯೆ ನೀಡಲು ನಾವು ಸಿದ್ಧರಿದ್ದೇವೆ. ಅದಕ್ಕೆ ಬೇಕಾದ ರೀತಿಯಲ್ಲಿ ಸರ್ವ ಸನ್ನದ್ಧರಾಗಿದ್ದೇವೆ. ಅಲ್ಲದೆ, ವೀರ ಯೋಧರ ತ್ಯಾಗ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಆಕ್ರೋಶ ಭರಿತ ಮಾತುಗಳಲ್ಲಿ ಚೀನಾಕ್ಕೆ ಎಚ್ಚರಿಕೆ ನೀಡಿದರು.
ನಮ್ಮ ಗಡಿ ರಕ್ಷಣೆಗಾಗಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಮತ್ತು ಅವರ ವೀರ ಪಡೆಗೆ ನಾವೆಲ್ಲರೂ ಗೌರವ ಸಲ್ಲಿಸೋಣ. ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲೂ ಹೋರಾಡಿದ ಧೈರ್ಯಶಾಲಿಗಳ ಸೌರ್ಯ, ಭಾರತದ ಸಾರ್ವಭೌಮತ್ವವನ್ನು ಎಲ್ಲಾ ಹಂತಲ್ಲೂ ರಕ್ಷಿಸುವ ಸಂಕಲ್ಪ ಮಾಡೋಣ ಎಂದು ತಿಳಿಸಿದ್ದಾರೆ.
ಭಾರತದ ರಕ್ಷಣಾಪಡೆಗಳ ಸಾಮರ್ಥ್ಯದ ಮೇಲೆ ಯಾರೂ ಸಂದೇಹ ಪಡುವ ಅಗತ್ಯವಿಲ್ಲ. ನಾವು ಚೀನಾ ಸಂಘರ್ಷದ ಬೆನ್ನಲ್ಲೇ ಗಡಿಯಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.