ಸಾರಿಗೆ ನೌಕರರಿಗೆ ಗುಡ್ನ್ಯೂಸ್: EL ಪಾವತಿ ವಿಳಂಬಕ್ಕೆ ಶೇ.6ರ ಬಡ್ಡಿ ಸಹಿತ ಕೊಡಲು ಹೈ ಕೋರ್ಟ್ ಆದೇಶ

- 12 ವಾರಗಳಲ್ಲಿ ಪಾವತಿ ಮಾಡದಿದ್ದರೆ ಶೇಕಡಾ 9ರಷ್ಟು ಬಡ್ಡಿ ವಿಧಿಸುವುದಾಗಿ ಎಚ್ಚರಿಕೆ ಕೊಟ್ಟ ನ್ಯಾಯಪೀಠ
ಬೆಂಗಳೂರು: ರಾಜ್ಯದ ಸಾರಿಗೆ ನಿಗಮಗಳ ನೌಕರರ ರಜೆ ನಗದೀಕರಣ ವಿಳಂಬಕ್ಕೆ ಶೇ.6ರ ಬಡ್ಡಿ ಸಹಿತ ಪಾವತಿ ಮಾಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಈ ನಿರ್ದೇಶನ ನೀಡಿರುವ ಹೈಕೋರ್ಟ್ ರಜೆ ನಗದೀಕರಣ ವಿಳಂಬಕ್ಕೆ ಶೇ. 6ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ. ಇನ್ನು ಈ ಹಣವನ್ನು ನಿವೃತ್ತ ಸಿಬ್ಬಂದಿಗೆ 12 ವಾರಗಳಲ್ಲಿ ಪಾವತಿ ಮಾಡದಿದ್ದರೆ ಶೇಕಡಾ 9ರಷ್ಟು ಬಡ್ಡಿ ವಿಧಿಸುವುದಾಗಿ ನ್ಯಾಯಪೀಠ ಎಚ್ಚರಿಕೆಯನ್ನು ಸಹ ನೀಡಿದೆ.
ಇನ್ನು ಸರ್ಕಾರ ಮಹಿಳೆಯರಿಗೆ ಜಾರಿಗೊಳಿಸಿರುವ ಉಚಿತ ಪ್ರಯಾಣ ನೀತಿ ಮತ್ತು ಕೋವಿಡ್ನಿಂದ ನಿಗಮ ಆರ್ಥಿಕ ಸಂಕಷ್ಟದಲ್ಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ, ನೌಕರರ ರಜೆ ನಗದೀಕರಣ (ಇಎಲ್) ಪಾವತಿಯಲ್ಲಿ ವಿಳಂಬ ಮಾಡಿರುವುದು ಸಲ್ಲ. ಈ ಪರಿಣಾಮ ನಿವೃತ್ತ ಸಿಬ್ಬಂದಿಗೆ ಶೇ. 6ರಷ್ಟು ಬಡ್ಡಿ ಸೇರಿಸಿ ಮುಂದಿನ 12 ವಾರಗಳಲ್ಲಿ ಪಾವತಿ ಮಾಡಬೇಕು ಇಲ್ಲದಿದ್ದರೆ ಶೇ.9ರಷ್ಟು 9ರಷ್ಟು ಬಡ್ಡಿ ವಿಧಿಸಲಾಗುವುದು ಎಂದು ಹೇಳಿದೆ.
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯಲ್ಲಪ್ಪ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಾದ – ಪ್ರತಿವಾದ ಆಲಿಸಿದ ಬಳಿಕ ಈ ಆದೇಶ ನೀಡಿದೆ.
ಅರ್ಜಿದಾರರು ನಿವೃತ್ತಿಯ ಬಳಿಕ 10 ರಿಂದ 25 ತಿಂಗಳು ಕಳೆದರೂ ಅವರಿಗೆ ಲಭ್ಯವಾಗಬೇಕಾದ ಇಎಲ್ ನಗದೀಕರಣ ಮಾಡುವುದಕ್ಕೆ ನಿಗಮ ಮುಂದಾಗಿಲ್ಲ. ಅಲ್ಲದೆ, ರಜೆ ನಗದೀಕರಣ ಪಾವತಿ ವಿಳಂಬವಾಗಿದ್ದರೂ, ಬಡ್ಡಿ ಪಾವತಿಸಿಲ್ಲ. ಆದ್ದರಿಂದ ಮುಂದಿನ 12 ವಾರಗಳಲ್ಲಿ ಬಡ್ಡಿ ಪಾವತಿಸಬೇಕು. ಒಂದು ವೇಳೆ ಬಡ್ಡಿ ಪಾವತಿಸುವಲ್ಲಿ ವಿಳಂಬ ಮಾಡಿದಲ್ಲಿ ಶೇ. 9ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ನಿವೃತ್ತ ನೌಕರರ ಬೇಡಿಕೆಯಂತೆ ರಜೆ ನಗದೀಕರಣಕ್ಕಾಗಿ ಶೇ. 9ರಿಂದ 10ರಷ್ಟು ಬಡ್ಡಿ ಸೇರಿಸಬೇಕಾಗಿದೆ. ಆದರೆ, ಅರ್ಜಿದಾರರು ನಿವೃತ್ತರಾದ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಶೇ. 5.54ರಷ್ಟು ಬಡ್ಡಿ ದರವಿತ್ತು. ಆದ್ದರಿಂದ ನಿಗಮ ಶೇ. 6ರಷ್ಟು ಬಡ್ಡಿ ಸೇರಿಸಿ ಪಾವತಿಸಧಿಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ನೌಕರರ ರಜೆ ನಗದು ಪಾವತಿ ವಿಳಂಬ ಮಾಡಿರುವುದರಿಂದ ಅದಕ್ಕೆ ಪರಿಹಾರ ಪಡೆಯುವ ಹಕ್ಕು ನೌಕರರಿಗಿದೆ. ಸಾರ್ವಜನಿಕ ನಿಧಿಯಿಂದ ಸಾರ್ವಜನಿಕ ಸಾರಿಗೆ ನಿಗಮಗಳು ಎದುರಿಸುತ್ತಿರುವ ಆರ್ಥಿಕ ವಾಸ್ತವಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ನ್ಯಾಯಪೀಠ ಸಲಹೆ ನೀಡಿದೆ.
ನಿಗಮದ ಸುತ್ತೋಲೆಯ ಪ್ರಕಾರ, ನಿವೃತ್ತ ನೌಕರರ ಸೌಲಭ್ಯಗಳನ್ನು ಪಾವತಿಸುವಲ್ಲಿ ವಿಳಂಬವಾದಲ್ಲಿ ಬಡ್ಡಿ ಸೇರಿಸಿ ಪಾವತಿಸಬೇಕೆಂಬ ನಿಯಮವಿದೆ. ಹಾಗಾಗಿ, ರಜೆ ನಗದೀಕರಣ ಸೌಲಭ್ಯ ವಿಳಂಬವಾಗಿರುವುದರಿಂದ ಬಡ್ಡಿ ಸೇರಿಸಿ ಪಾವತಿ ಮಾಡಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದ್ದರು.
ಪ್ರಕರಣ ಏನು?: ಅರ್ಜಿದಾರರು 1987ರಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಕಂಡಕ್ಟರ್ ಆಗಿ ನೇಮಕಗೊಂಡಿದ್ದರು. 2022ರಲ್ಲಿ ನಿವೃತ್ತರಾದರು. ಈ ನಿವೃತ್ತಿ ಬಳಿಕ ರಜೆ ನಗದೀಕರಣ ಮಾಡಿಕೊಟ್ಟಿರಲಿಲ್ಲ. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಉಚಿತದ ಸಂಕಷ್ಟ: ಈ ಮಧ್ಯೆ ಸಾರಿಗೆ ನಿಗಮಗಳ ಜವಾಬ್ದಾರಿಗಳನ್ನು ನಿರ್ವಹಿಸಲು 2 ಸಾವಿರ ಕೋಟಿ ರೂ. ಸಾಲ ಪಡೆಯಬೇಕಾಗಿದೆ ಎಂಬುದು ದಾಖಲೆಗಳಿಂದ ತಿಳಿಯಲಿದೆ. ಕೋವಿಡ್-19ರಿಂದ ಸಾರಿಗೆ ನಿಗಮಗಳಿಗೆ ಉಂಟಾದ ಆರ್ಥಿಕ ಸಂಕಷ್ಟ ಎರಡು ವರ್ಷ ಕಳೆದರೂ ಇಂದಿಗೂ ಮುಂದುವರಿಯುತ್ತಿದೆ. ಅಲ್ಲದೆ, ಸರ್ಕಾರ ಘೋಷಣೆ ಮಾಡಿರುವ ಉಚಿತ ಪ್ರಯಾಣದ ನೀತಿಯೂ ನಿಗಮವನ್ನು ಇನ್ನಷ್ಟು ಆರ್ಥಿಕ ದುಸ್ಥಿತಿಗೆ ದೂಡಲು ಕಾರಣವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Related









