ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಬಿಎಂಟಿಸಿ ಬಸ್ಗಳಿಂದ ಅಪಘಾತ ಹೆಚ್ಚುತ್ತಿರುವುದನ್ನು ತಡೆಯಲು ಸಂಸ್ಥೆಯ ಚಾಲಕರಿಗೆ ವಲಯವಾರು ವಾರದಲ್ಲಿ ಎರಡು ಬಾರಿ ಚಾಲನಾ ತರಬೇತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು.
ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಪಘಾತ ನಿಯಂತ್ರಣ ಹೇಗೆ ಎಂಬ ನಿಟ್ಟಿನಲ್ಲಿ ಚರ್ಚಿಸಲಾಯಿತು.
ಈ ವೇಳೆ ಅಪಘಾತ ರಹಿತ ಚಾಲನೆ ಕುರಿತು ಚಾಲಕರಲ್ಲಿ ಅರಿವು ಮೂಡಿಸುವುದು ಮತ್ತು ಸೂಕ್ತ ತರಬೇತಿ ನೀಡುವ ಬಗ್ಗೆ ನಿರ್ಧರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಆರ್. ರಾಮಚಂದ್ರನ್, ಬಿಎಂಟಿಸಿಯ ಎಲ್ಲ ಘಟಕಗಳಲ್ಲಿ ಪ್ರತಿದಿನ ಬೆಳಗ್ಗೆ 5ಗಂಟೆಗೆ ಸಭೆ ನಡೆಸಿ ಚಾಲಕರಿಗೆ ಸುರಕ್ಷಾ ಚಾಲನೆ ಮತ್ತು ನಿಯಮ ಪಾಲನೆ ಕುರಿತು ಸೂಚನೆ ನೀಡಬೇಕು. ವಲಯವಾರು ವಾರದಲ್ಲಿ ಕನಿಷ್ಠ ಎರಡು ಬಾರಿ ಚಾಲನಾ ತರಬೇತಿ ನೀಡಬೇಕು. ಚಾಲಕರಿಂದಾಗುವ ಸಂಚಾರ ನಿಯಮ ಉಲ್ಲಂಘನೆ, ಅಪಘಾತ ತಡೆಯುವ ನಿಟ್ಟಿನಲ್ಲಿ ರೂಪಿಸಿರುವ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
ಚಾಲಕರು ಮೊಬೈಲ್ನಲ್ಲಿ ಮಾತನಾಡಿದರೆ ಅವರನ್ನು 15 ದಿನಗಳ ಅಮಾನತು ಮಾಡಿ ಬೇರೆ ಘಟಕಕ್ಕೆ ವರ್ಗಾವಣೆ ಮಾಡಲಾಗುವುದು. ಮದ್ಯಪಾನ ಮಾಡಿ ಬಸ್ ಚಲಾಯಿಸಿದರೆ ಅಮಾನತು ಮಾಡಲಾಗುವುದು ಎಂಬುದನ್ನು ಚಾಲಕರಿಗೆ ಮನದಟ್ಟು ಮಾಡಬೇಕು ಎಂದರು.
20 ಚಾಲಕರ ಅಮಾನತು: ಆಗಸ್ಟ್ ತಿಂಗಳಲ್ಲಿ ಬಿಎಂಟಿಸಿ ಬಸ್ಗಳಿಂದ ಒಟ್ಟು 4 ಮಾರಣಾಂತಿಕ ಅಪಘಾತಗಳಾಗಿವೆ. ಅದರಲ್ಲಿ 3 ಪ್ರಕರಣಗಳು ಬಿಎಂಟಿಸಿ ಚಾಲಕರ ಹೊಣೆಗಾರಿಕೆ ಇರಲಿಲ್ಲ. ಉಳಿದೊಂದು ಅಪಘಾತ ಇ-ಬಸ್ ಚಾಲಕನಿಂದ ಸಂಭವಿಸಿದೆ. ಹಾಗೆಯೇ, ಕಳೆದೊಂದು ವರ್ಷದಲ್ಲಿ 20 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 20 ಚಾಲಕರನ್ನು ಅಮಾನತು ಮಾಡಲಾಗಿದೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

Related
