ಕುರ್ಚಿ ಕದನ: ಸದ್ಯದ ಪರಿಸ್ಥಿತಿಯಲ್ಲಿ ಸಿಎಂ ಬದಲಾಯಿಸುವ ವಾತಾವರಣ ನನಗೆ ಕಾಣುತ್ತಿಲ್ಲ- ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸುವ ವಾತಾವರಣ ನನಗೆ ಕಾಣುತ್ತಿಲ್ಲ ಎಂದು ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಪಕ್ಷದ ಕಾರ್ಯಕರ್ತನಷ್ಟೆ. ಆದರೂ ಹೇಳುತ್ತಿದ್ದೇನೆ ಮುಖ್ಯಮಂತ್ರಿಗಳ ಮೇಲೆ ಯಾವುದೇ ದೂರು ಇಲ್ಲ. ಒಳ್ಳೆಯ ಆಡಳಿತವನ್ನು ಕೊಟ್ಟಿದ್ದಾರೆ. ಶಾಸಕರೂ ಕೂಡ ಅವರ ಪರವಾಗಿದ್ದಾರೆ. ಹೀಗಿರುವಾಗ ನನ್ನ ಪ್ರಕಾರ, ಸಿಎಂ ಸ್ಥಾನ ಬದಲಾವಣೆ ಸಾಧ್ಯತೆ ಕಡಿಮೆ ಎಂದರು.
ಇನ್ನು ಮುಖ್ಯಮಂತ್ರಿಗಳು ಹೈಕಮಾಂಡ್ಗೆ ಏನು ಮಾತು ಕೊಟ್ಟಿದ್ದಾರೋ, ಅದೇ ರೀತಿ ನಡೆದುಕೊಳ್ಳುತ್ತಾರೆ. ಯಾರೇ ಆಗಲಿ, ಹೈಕಮಾಂಡ್ಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಏನು ಮಾತು ಕೊಟ್ಟಿದ್ದಾರೋ ಆ ಬಗ್ಗೆ ಅವರನ್ನೇ ಕೇಳಿ. ಅದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಗಳ ಮೇಲೆ ಯಾವುದೇ ದೂರು ಇಲ್ಲ. ಒಳ್ಳೆಯ ಆಡಳಿತವನ್ನು ಕೊಟ್ಟಿದ್ದಾರೆ ಹಾಗಿದ್ದೂ ಕೂಡ ಕೆಲವರು ಸಿಎಂ ಬದಲಾವಣೆ ಆಗಲಿದೆ ಎಂದು ಹೇಳುತ್ತಿದ್ದಾರೆ. ಅದನ್ನು ನಿರ್ಧಾರ ಮಾಡೋದು ಹೈಕಮಾಂಡ್. ಅದರ ಬಗ್ಗೆ ನಾವು ಮಾತನಾಡಿದರೆ ಯಾವುದೇ ಪ್ರಯೋಜನ ಇಲ್ಲ ಎಂದರು.
ಇನ್ನು ಇವತ್ತಿನ ಪರಿಸ್ಥಿತಿಯಲ್ಲಿ ನನ್ನ ಪ್ರಕಾರ ಖಂಡಿತವಾಗಿಯೂ ಸಿದ್ದರಾಮಯ್ಯ ಮುಂದಿನ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.
Related









