ಚಾಮರಾಜನಗರ: KSRTC ಬಸ್- ಲಾರಿ ನಡುವೆ ಭೀಕರ ಅಪಘಾತ- ಬಸ್ ಚಾಲಕ ಮೃತ, 20ಕ್ಕೂ ಹೆಚ್ಚು ಮಂದಿಗೆ ಗಾಯ

ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬಸ್ ಚಾಲಕ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಬೆಂಡರವಾಡಿಯ ಬಳಿ ಮಂಗಳವಾರ ರಾತ್ರಿ ನಡೆದಿದೆ.

KSRTC ಚಾಮರಾಜ ನಗರ ವಿಭಾಗದ ಚಾಮರಾಜನಗರ ಘಟದ ಅಶ್ವಮೇಧ ಬಸ್ ಚಾಲಕ ಇರಸವಾಡಿ ಗ್ರಾಮದ ನಿವಾಸಿ ಮಂಜು ಎಂಬುವರು ಮೃತಪಟ್ಟವರು. ತೀವ್ರ ಗಾಯಗೊಂಡಿರುವ ಲಾರಿ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಮೈಸೂರಿನಿಂದ ಚಾಮರಾಜನಗರದ ಕಡಗೆ ಬರುತ್ತಿದ್ದ ಬಸ್ ಹಾಗೂ ನಗರದಿಂದ ನಂಜನಗೂಡಿನ ಕಡೆಗೆ ತೆರಳುತ್ತಿದ್ದ ಲಾರಿ ಮಧ್ಯೆ ಬೆಂಡರವಾಡಿ ಗ್ರಾಮದ ತಿರುವೊಂದರಲ್ಲಿ ಈ ಅಪಘಾತ ಸಂಭವಿಸಿದೆ.
ರಸ್ತೆ ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಬಸ್ಸಿನಲ್ಲಿದ್ದ ಗಾಯಾಳು ಪ್ರಯಾಣಿಕರನ್ನು ಮತ್ತು ತೀವ್ರ ಗಾಯಗೊಂಡಿದ್ದ ಎರಡು ವಾಹನಗಳ ಚಾಲಕರನ್ನು ಹೊರತೆಗೆದು ಅಂಬುಲೆನ್ಸ್ ಮೂಲಕ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೆಲ ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪೈಕಿ ಬಸ್ ಬಾಲಕ ಮಂಜು ಚಿಕಿತ್ಸೆ ಫಲಿಸದೆ ಕೊನೆಯುಸಿಗಳೆದಿದ್ದಾರೆ.
ಅಪಘಾತದ ತೀವ್ರತೆಗೆ ಬಸ್ನ ಮುಂಭಾಗ ನಜ್ಜುಗುಜ್ಜಾಗಿದ್ದು ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹೆಚ್ಚಿನವರು ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಎಂದು ತಿಳಿದು ಬಂದಿದೆ.
ಅಪಘಾತದಿಂದಾಗಿ ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿ 150 ಎ’ಯಲ್ಲಿ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಂಡಿತ್ತು. ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು ಬಳಿಕ ಸಂಚಾರ ಪೊಲೀಸರು ಅಪಘಾತಕ್ಕೀಡಾದ ಬಸ್ ಮತ್ತು ಲಾರಿಯನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Related









