ಬೆಂಗಳೂರು: ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಯಂಡಹಳ್ಳಿ ಜಂಕ್ಷನ್ ಸಮಗ್ರ ಅಭಿವೃದ್ಧಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಯುಕ್ತ ಡಾ. ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಗುರುತಿಸಲಾದ ಜಾಗಗಳ ಪರಿಶೀಲನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುರಕ್ಷಾ 75 ಯೋಜನೆಯಡಿ ನಾಯಂಡಹಳ್ಳಿ ಜಂಕ್ಷನ್ ನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಜಂಕ್ಷನ್ ಅಭಿವೃದ್ಧಿಯಾದರೆ ಸಂಚಾರ ದಟ್ಟಣೆ ಕಡಿಮೆ: ನಾಯಂಡಹಳ್ಳಿ ಜಂಕ್ಷನ್ ಸಮಗ್ರ ಅಭಿವೃದ್ಧಿ ಮಾಡಿದರೆ, ಜಂಕ್ಷನ್ ನಲ್ಲಿದ್ದ ಐಲ್ಯಾಂಡ್ ಗಳನ್ನು ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗದ ರೀತಿಯಲ್ಲಿ ಅಭಿವೃದ್ಧಿ ನಡೆಸಿದರೆ ಸಂಚಾರ ದಟ್ಟಣೆ ಬಹುತೇಕ ನಿವಾರಣೆಯಾಗಲಿದೆ.
ಹೊಸಕೆರೆಹಳ್ಳಿ ಸರ್ವಿಸ್ ರಸ್ಥೆ ಅಭಿವೃದ್ಧಿಪಡಿಸಿ: ಹೊಸಕೆರೆ ಹಳ್ಳಿ ಮೇಲ್ಸೇತುವೆ ಮತ್ತು ಹೊಂದಿಕೊಂಡಿರುವ ಸರ್ವಿಸ್ ರಸ್ತೆಗಳ ಪರಿಶೀಲನೆ ನಡೆಸಲಾಯಿತು. ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಸರ್ವಿಸ್ ರಸ್ತೆಗಳ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಗುರುತಿಸಲಾದ ‘ಬ್ಲಾಕ್ ಸ್ಪಾಟ್’ ಅನ್ನು ತಕ್ಷಣ ಸರಿಪಡಿಸಲು ಆದೇಶಿಸಿದರು.
ಟ್ರಾನ್ಸಫರ್ ಸ್ಟೇಷನ್ ಗೆ ಜಾಗ ಪರಿಶೀಲನೆ: ದೀಪಾಂಜಲಿ ನಗರ ಇಂದಿರಾ ಕ್ಯಾಂಟೀನ್ ಬಳಿ ಇರುವ ಖಾಲಿ ಜಾಗದಲ್ಲಿ ಟ್ರಾನ್ಸಫರ್ ಸ್ಟೇಷನ್ ನಿರ್ಮಾಣ ಮಾಡುವ ಸಲುವಾಗಿ ಜಾಗವನ್ನು ಪರಿಶೀಲಿಸಲಾಯಿತು. ಈ ವೇಳೆ ವಲಯ ಜಂಟಿ ಆಯುಕ್ತರು ಹಾಗೂ ಎ.ಡಿ.ಎಲ್.ಆರ್ ಅಧಿಕಾರಿಗಳಿಗೆ ವಿವರವಾದ ಸಮೀಕ್ಷೆ ನಡೆಸಿ ಎರಡು ದಿನಗಳೊಳಗಾಗಿ ವರದಿ ಸಲ್ಲಿಸಲು ಸೂಚಿಸಿದರು.
ಅನಂತರ, ಪಟ್ಟಣಗೆರೆ ಬಳಿ ಸರ್ವೇ ನಂ. 8ರಲ್ಲಿ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣ ಮಾಡುವ ಸಲುವಾಗಿ ಜಾಗ ಪರಿಶೀಲಿಸಿ, ಜಾಗದ ಮಾಲೀಕತ್ವ ಮತ್ತು ವ್ಯಾಪ್ತಿಯನ್ನು ವಿವರವಾದ ಸಮೀಕ್ಷೆ ಮೂಲಕ ಪರಿಶೀಲಿಸಿ ವರದಿ ಸಲ್ಲಿಸಲು ಜಂಟಿ ಆಯುಕ್ತರಿಗೆ ನಿರ್ದೇಶನ ನೀಡಿದರು.
ಸಿ.ಆರ್.ಸಿ.ಪಿ ಜಾಗ ಪರಿಶೀಲನೆ: ಮಾಲಗಾಳ ಪಾಲಿಕೆ ಭವನದ ಸಮೀಪದ ಸಿ.ಆರ್.ಸಿ.ಪಿ ಜಾಗವನ್ನು ಪರಿಶೀಲಿಸಿ, ಭೂ ದಾಖಲೆಗಳನ್ನು ಪರಿಶೀಲಿಸಿ ಅನುಷ್ಠಾನ ಸಾಧ್ಯತೆಯ ವಿವರಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರಿಶೀಲನೆ ನಡೆಸಿದ ಬಳಿಕ ಅಭಿವೃದ್ಧಿ ಕಾಮಗಾರಿಗಳ ಪರಿಣಾಮಕಾರಿಯ ಅನುಷ್ಠಾನಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಇಲಾಖೆಗಳ ನಡುವೆ ಸಮನ್ವಯ ಮಾಡಿಕೊಂಡು ಇರುವ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಂಡು ಸಮರ್ಪಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆಯ ವೇಳೆ ಅಭಿವೃದ್ಧಿ ಅಪರ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಜಂಟಿ ಆಯುಕ್ತರಾದ ಆರತಿ ಆನಂದ್, ಮುಖ್ಯ ಅಭಿಯಂತರರಾದ ಸ್ವಯಂ ಪ್ರಭ, ವಿಶ್ವನಾಥ್, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಇದ್ದರು.
Related










