NEWSನಮ್ಮರಾಜ್ಯ

ಅಧಿಕಾರಿಗಳಲ್ಲಿ ಮಾಹಿತಿ ಕೊರತೆಯಿಂದ ಆರ್‌ಟಿಐ ಅರ್ಜಿಗಳ ವಿಲೇವಾರಿ ವಿಳಂಬ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ
  • ಆರ್‌ಟಿಐ ದುರ್ಬಳಕೆ ತಡೆಯಲು ಅಧಿಕಾರಿಗಳಿಂದ ಸಾಧ್ಯ
  • ಮಾಹಿತಿ ಹಕ್ಕು ಸರಿಯಾಗಿ ಅರಿತರೆ ಅತ್ಯಂತ ಸರಳ, ಸುಲಲಿತ, ಸುಲಭ
  • ಸಾರ್ವಜನಿಕ ದಾಖಲೆಗಳನ್ನು ಮುಕ್ತವಾಗಿ ಜನರ ಮುಂದೆ ಇಡುವುದು ಆರ್‌ಟಿಐ ನ ಮುಖ್ಯ ಉದ್ದೇಶ: ಮಾಹಿತಿ ಆಯುಕ್ತ ಹರೀಶ್ ಕುಮಾರ್

ಬೆಂಗಳೂರು ಗ್ರಾಮಾಂತರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸುವ ಹಾಗೂ ಸಾರ್ವಜನಿಕ ದಾಖಲೆಗಳನ್ನು ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ ಹಕ್ಕಿ(ಆರ್.ಟಿ.ಐ) ನ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಅಧಿನಿಯಮ 2005 ರನ್ವಯ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.

ಮಾಹಿತಿ ಹಕ್ಕು ಬಹಳ ಸರಳ ಹಾಗೂ ಗಂಭೀರ ಸ್ವರೂಪ ಹೊತ್ತಾಗಿದ್ದು ಸರ್ಕಾರವನ್ನು ಬುಡಮೇಲು ಮಾಡುವ ಶಕ್ತಿ ಕೂಡ ಇದೆ ಜನಪರ ಕಾನೂನು ಜಾರಿಯಾದ ನಂತರ ಅದರ ಬಗ್ಗೆ ಸರ್ಕಾರಿ ಅಧಿಕಾರಿಗಳು ತಿಳಿದಿರಬೇಕು. ಅರ್ಜಿದಾರರು ಕೂಡ ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳದೆ ಸಮಾಜದ ನೈತಿಕತೆ ಸಾಮಾಜಿಕ ಸ್ವಾತಂತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಅರ್.ಟಿ ಐ ಮೂಲಕ ಸಾರ್ವಜನಿಕರು ಮಾಹಿತಿ ಕೇಳಬೇಕು.

ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಹಣಕಾಸು, ನರೇಗಾ, ಕಂದಾಯ, ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆಗಳಲ್ಲಿ ಹೆಚ್ಚು ಆರ್.ಟಿ.ಐ ಅರ್ಜಿಗಳು ಬರುತ್ತವೆ. ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದ್ದಲ್ಲಿ ಶೀಘ್ರ ವಿಲೇವಾರಿ ಮಾಡಬಹುದು ಎಂದರು.

ಪೊಲೀಸ್ ಸ್ಟೇಷನ್ ಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬ ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಆಧರಿಸಿ ಕಡ್ಡಾಯವಾಗಿ ಎಲ್ಲ ಪೊಲೀಸ್ ಸ್ಟೇಷನ್ಗಳಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಹಾಗೆಯೇ ಅವುಗಳನ್ನು ಒಂದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕಿದೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪಾಲಿಸುವುದು ಅವಶ್ಯಕ ಎಂದರು.

ಮಾಹಿತಿ ಅಧಿಕಾರಿಯು ಯಾವುದೇ ಕಾರಣವಿಲ್ಲದೇ ಮಾಹಿತಿಯನ್ನು ನೀಡದಿದ್ದಲ್ಲಿ ಅಥವಾ ದುರುದ್ದೇಶದಿಂದ ತಪ್ಪಾದ ಮಾಹಿತಿ ನೀಡಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ ಜೊತೆಗೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಾಲಕಾಲಕ್ಕೆ ಅರ್ಜಿಗಳ ವಿಲೇವಾರಿ ಮಾಡಬೇಕು ಎಂದರು.

Advertisement

ಆರ್.ಟಿ.ಐ ಸಾರ್ವಜನಿಕ ಕಾಯ್ದೆ, ಜನಸ್ನೇಹಿ ಕಾಯ್ದೆ: ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಡಾ.ಮಮತ ಬಿ.ಆರ್ ಅವರು ಮಾತನಾಡಿ ಮಾಹಿತಿ ಹಕ್ಕಿನ ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಅಧಿಕಾರಿಗಳಲ್ಲಿ ಅರಿವಿನ ಕೊರತೆ ಇದೆ. ಈ ಕಾಯ್ದೆಯು ಸಾರ್ವಜನಿಕ ಜನ ಸ್ನೇಹಿ ಕಾಯ್ದೆಯಾಗಿದೆ. ಇದನ್ನು ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ.

6(1) ಅಧಿನಿಯಮದ ಪ್ರಕಾರ ಮಾಹಿತಿ ಕೋರಿ ಅರ್ಜಿ ಬಂದರೆ ಅಂತಹ ಅರ್ಜಿಗೆ 30 ದಿನಗಳ ಒಳಗಾಗಿ ಪ್ರತಿ ಪುಟಕ್ಕೆ ಎರಡು ರೂ ಗಳಂತೆ ಹಣ ಪಾವತಿಸಿಕೊಂಡು ಮಾಹಿತಿ ನೀಡಬೇಕು, ನಿಗದಿತ ಕಾಲಮಾನಕ್ಕೆ ಮಾಹಿತಿ ನೀಡಲು ಸಾಧ್ಯವಾಗದಿದ್ದಲ್ಲಿ ಉಚಿತವಾಗಿ ಮಾಹಿತಿಯನ್ನು ನೀಡಬೇಕು. 41ಎ ಮತ್ತು 41ಬಿ ಯನ್ನು ಎಲ್ಲಾ ಕಚೇರಿಗಳಲ್ಲಿ ಕಡ್ದಾಯವಾಗಿ ಅಳವಡಿಸಬೇಕು. ಅಧಿಕಾರಿಗಳಿಗೆ ಕಾಲಕಾಲಕ್ಕೆ ತರಬೇತಿಗಳು ನೀಡಬೇಕು ಕಾಯ್ದೆಯ ನಿರ್ಲಕ್ಷ್ಯತೆ ಆಗಬಾರದು ಎಂದರು.

ಜಿಲ್ಲೆಯಲ್ಲಿ 1440 ದ್ವಿತೀಯ ಮೇಲ್ಮನವಿ ಪ್ರಕರಣಗಳು ಬಾಕಿ: ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ, ಅವರು ಮಾತನಾಡಿ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಮಾಹಿತಿ ಹಕ್ಕು ಕಾಯ್ದೆ ಕುರಿತು ಸಂಪೂರ್ಣ ಅರಿವು ಹೊಂದಿದ್ದಲ್ಲಿ ಮಾತ್ರ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ಒದಗಿಸಲು ಸಾಧ್ಯ. ರಾಜ್ಯದಲ್ಲಿ 45000 ದ್ವಿತೀಯ ಹಂತದ ಮೇಲ್ಮನವಿ ಪ್ರಕರಣಗಳು ಬಾಕಿ ಇದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯು 9 ನೇ ಸ್ಥಾನದೊಂದಿಗೆ 1440 ದ್ವಿತೀಯ ಮೇಲ್ಮನವಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ಹೇಳಿದರು.

ಹಾಗೆ ಕಾಯ್ದೆಯು ಬಹಳ ಸುಲಭವಾಗಿದ್ದು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೆ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬಹುದು. ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮಾಹಿತಿ ಹಕ್ಕು ಅಡಿಯಲ್ಲಿ ಸುಪ್ರೀಂ ಇದ್ದಹಾಗೆ. ಮಾಹಿತಿ ಹಕ್ಕನ್ನು ಸರಿಯಾಗಿ ಅರ್ಥೈಸಿಕೊಂಡು ಶೀಘ್ರ ಬಗೆಹರಿಸಬಹುದಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅನಿವಾರ್ಯವಾಗಿದ್ದು ನಿಭಾಯಿಸುವುದು ನಮ್ಮ ಕರ್ತವ್ಯ. ನಿಷ್ಠಾವಂತ ಆರ್‌ಟಿಐ ಅರ್ಜಿದಾರರಿಗೆ ವಂಚಿತತೆ, ದುರ್ಬಳಕೆ ಆಗುತ್ತಿರುವುದನ್ನು ತಡೆಯುವುದು ನಮ್ಮ ಅಧಿಕಾರಿಗಳ ಕರ್ತವ್ಯ ಕೂಡ ಆಗಿದೆ ಎಂದರು.

ಜಿಲ್ಲಾಧಿಕಾರಿ ಎ ಬಿ ಬಸವರಾಜು ಅವರು ಮಾತನಾಡಿ ಕಂದಾಯ ಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಈಗ ಎಲ್ಲವೂ ಆನ್ಲೈನ್ ಅಲ್ಲಿ ಸಿಗುವಂತೆ ಮಾಡಲಾಗಿದೆ. ನ್ಯಾಯಲಯಕ್ಕೆ ಸಂಬಂಧಪಟ್ಟ ಮಾಹಿತಿಗಾಗಿ ಆರ್.ಸಿ.ಸಿ.ಎಂ.ಎಸ್ ಪೋರ್ಟಲ್ ಮತ್ತು ಭೂಮಿಗೆ ಸಂಬಂಧಪಟ್ಟ ಮಾಹಿತಿಗಾಗಿ ಭೂ ಸುರಕ್ಷಾ ಪೋರ್ಟಲ್ ಅಲ್ಲಿ ಮಾಹಿತಿ ಪಡೆಯಬಹುದು ಸರ್ವೆ ದಾಖಲೆ ಕೂಡ ಈಗ ಸಿಗುತ್ತದೆ ಎಂದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಮುಖ್ಯ. ಅಧಿಕಾರಿಗಳು ಯಾವುದೇ ಭಯ ಪಡದೇ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ವಿಲೇವಾರಿ ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ಎನ್. ಅನುರಾಧ, ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ, ಎಎಸ್ಪಿ ನಾಗರಾಜ್, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಶಿವಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕ ಸಂಪರ್ಕ ಅಧಿಕಾರಿಗಳು, ಪ್ರಥಮ ಮೇಲ್ಮನವಿ ಅಧಿಕಾರಿಗಳು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!