ವರದಕ್ಷಿಣೆ ಕಿರುಕುಳ ಆರೋಪ: ಚಲನಚಿತ್ರ ನಿರ್ದೇಶಕ, ನಟ ಎಸ್.ನಾರಾಯಣ್, ಪತ್ನಿ, ಪುತ್ರನ ವಿರುದ್ಧ FIR ದಾಖಲು


ಬೆಂಗಳೂರು: ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಖ್ಯಾತ ಚಲನಚಿತ್ರ ನಿರ್ದೇಶಕ, ನಟ ಎಸ್.ನಾರಾಯಣ್, ಪತ್ನಿ ಹಾಗೂ ಪುತ್ರನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಸೊಸೆಯೇ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.
ಈ ಬಗ್ಗೆ ಎಸ್.ನಾರಾಯಣ್ ಅವರು ಪ್ರತಿಕ್ರಿಯೆ ನೀಡಿದ್ದು, ವರ್ಷದ ಹಿಂದೆಯೇ ಸೊಸೆ ಮನೆ ಬಿಟ್ಟು ಹೋಗಿದ್ರು. ಈಗ ವರದಕ್ಷಿಣೆ ಕಿರುಕುಳ ಅಂತ ದೂರು ಕೊಟ್ಟಿದ್ದಾರೆ. ರೆಗ್ಯೂಲರ್ ಆಗಿ ನಮ್ಮ ದೇಶದಲ್ಲಿ ಎಲ್ಲ ಹೆಣ್ಮಕ್ಕಳು ಮಾಡೋದು ಅದೊಂದೇ ತಾನೆ ಎಂದ ಹೇಳಿದರು.
ನಾವೇನೋ ಹಿಂಸೆ ಕೊಟ್ಟಿದ್ದೇವೆ ಅಂತ ದೂರು ಕೊಟ್ಟಿದ್ದಾರೆ. ಅದು ಕೋರ್ಟಿಗೆ ಹೋಗಿದೆ. ನಾವು ಅದರ ಬಗ್ಗೆ ಹೇಳಿದರೆ ಅವರಿಗೇ ಅವಮಾನ ಮಾಡಿದಂತೆ ಆಗುತ್ತೆ. ಪಾಪ ಹೆಣ್ಮಗು ಅಲ್ವಾ? ಅವರಿಗೆ ತೇಜೋವಧೆ ಮಾಡಬಾರದು ಅಂತ ನಾರಾಯಣ್ ಹೇಳಿದರು.
ಈಗ ದೂರು ಕೊಟ್ಟಿದ್ದಾರೆ. ಅವರಿಗೆ ಸುಃಖ, ಸಂತೋಷ ಎಲ್ಲಿ ಸಿಗುತ್ತೋ ಅಲ್ಲಿಗೆ ಹೋಗಿದ್ದಾರೆ. ನನ್ನ ವ್ಯಕ್ತಿತ್ವ ಎಲ್ಲರಿಗೂ ಗೊತ್ತು, ನಾವು ಸದಾ ಹೆಣ್ಮಕ್ಕಳನ್ನು ಗೌರವರಿಂದ ಕಾಣುವಂತಹವರು ಅಂತ ಹೇಳಿದರು.
ಎಫ್ಐಆರ್ ಏಕೆ?: ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ನಾರಾಯಣ್, ಪತ್ನಿ, ಪುತ್ರನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಸ್.ನಾರಾಯಣ್ ಅವರ 2ನೇ ಮಗನ ಪತ್ನಿ ಪವಿತ್ರಾ ದೂರು ದಾಖಲಿಸಿದ್ದಾರೆ.
ಈ ದೂರಿನನ್ವಯ ಮಾವ ಎಸ್.ನಾರಾಯಣ್, ಅತ್ತೆ ಭಾಗ್ಯಲಕ್ಷ್ಮಿ, ಪತಿ ಪವನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಮದುವೆಯಲ್ಲಿ ವರದಕ್ಷಿಣೆ ಕೊಟ್ಟಿದ್ದರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಹಲ್ಲೆ ನಡೆಸಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಹಾಗೂ ಎಸ್.ನಾರಾಯಣ್ ಪುತ್ರ ಪವನ್ 2021ರಲ್ಲಿ ಮದುವೆಯಾದೆವು. ಪವನ್ ಓದಿರದ ಕಾರಣ ಕೆಲಸ ಇಲ್ಲದೆ ಮನೆಯಲ್ಲಿಯೇ ಇದ್ದರು. ಇದರಿಂದಾಗಿ ನಾನೇ ಕೆಲಸಕ್ಕೆ ಹೋಗಿ ಮನೆ ಸಾಗಿಸುತ್ತಿದ್ದೆ. ನಂತರ ಪವನ್ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಬೇಕೆಂದು ಯೋಚಿಸಿದ್ದರು. ಇದಕ್ಕಾಗಿ ನನ್ನ ಬಳಿ ದುಡ್ಡು ಕೇಳಿದ್ದರು. ಆಗ ನನ್ನ ತಾಯಿಯ ಒಡವೆ ಕೊಟ್ಟಿದ್ದೆ. ಆದ್ರೆ ಬಳಿಕ ಲಾಸ್ ಆಗಿ ಇನ್ಸ್ಟಿಟ್ಯೂಟ್ ಮುಚ್ಚಬೇಕಾದ ಪರಿಸ್ಥಿತಿ ಬಂತು.
ಮದುವೆಯಲ್ಲಿ 1 ಲಕ್ಷ ರೂ. ಮೌಲ್ಯದ ಉಂಗುರ ಹಾಗೂ ಮದುವೆ ಖರ್ಚು ನೋಡಿಕೊಂಡಿದ್ದೆವು. ವರದಕ್ಷಿಣೆ ಕೊಟ್ರೂ ಹಲ್ಲೆ ನಡೆಸಿ ಹೆಚ್ಚಿನ ಹಣಕ್ಕೆ ಒತ್ತಾಯಿಸಿದ್ದಾರೆ. ಹೀಗಾಗಿ ಜಗಳ ಆಗಿ ನನ್ನನ್ನು ಮನೆಯಿಂದ ಆಚೆ ಹಾಕಿದ್ದರು. ಇದರಿಂದ ನನಗೆ ಹಾಗೂ ನನ್ನ ಮಗನಿಗೆ ತೊಂದರೆಯಾಗುತ್ತೆ, ಒಂದು ವೇಳೆ ಏನಾದರೂ ಆದರೆ ಇವರೇ ಕಾರಣ ಎಂದು ಆರೋಪಿಸಿ, ಕ್ರಮಕ್ಕಾಗಿ ಪೊಲೀಸರಲ್ಲಿ ಮನವಿ ಮಾಡಿಕೊಡಿದ್ದಾರೆ.
Related








