ಡಾ.ವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ: ಸರ್ಕಾರ ಘೊಷಣೆ- ಅಭಿಮಾನಿಗಳಲ್ಲಿ ಹರ್ಷ

ಬೆಂಗಳೂರು: ರಾಜ್ಯ ಸರ್ಕಾರ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಸರೋಜಾದೇವಿಗೆ ಇಂದು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ನಮ್ಮ ದಶಕಗಳ ಬೇಡಿಕೆ ಫಲಿಸಿದೆ ಎಂದು ವಿಷ್ಣು ಅಭಿಮಾನಿಗಳು ಖುಷಿಪಡುತ್ತಿದ್ದಾರೆ.
ಈ ದಿಗ್ಗಜರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಇನ್ನು ಪ್ರಶಸ್ತಿಯನ್ನು ಯಾವಾಗ, ಎಲ್ಲಿ ಪ್ರದಾನ ಮಾಡಬೇಕೆಂದು ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ. ಇಂದಿನ ಸಂಪುಟ ಸಭೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ನೀಡಬೇಕೆಂದು ಕೇಂದ್ರಕ್ಕೆ ಪತ್ರ ಕಳುಹಿಸಲು ನಿರ್ಣಯ ಅಂಗೀಕರಿಸಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅನಿರುದ್ಧ ಅವರು ಮನವಿ ಮಾಡಿದ್ದರು. ಅಲ್ಲದೇ, ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಶ್ರುತಿ, ಮಾಳವಿಕಾ ಅವಿನಾಶ್ ಅವರು ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದರು.
1972ರಲ್ಲಿ ವಂಶವೃಕ್ಷ ಚಿತ್ರದಲ್ಲಿ ನಟಿಸಿದ್ದ ವಿಷ್ಣುವರ್ಧನ್ ಅವರು ಅದೇ ವರ್ಷ ಬಿಡುಗಡೆಯಾಗಿದ್ದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಂಡರು. ಈ ಚಿತ್ರ ಬ್ಲಾಕ್ ಬಸ್ಟರ್ ಚಿತ್ರವಾಗಿದ್ದು ಮೊದಲ ಪ್ರಯತ್ನದಲ್ಲೇ ವಿಷ್ಣುವರ್ಧನ್ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು.
ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು 220 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯವು 2005ರಲ್ಲಿ ವಿಷ್ಣುವರ್ಧನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ದಿವಂಗತ ಸರೋಜಾದೇವಿ: ಕನ್ನಡದ ಹಿರಿಯ ಚಲನಚಿತ್ರ ನಟಿಯರಲ್ಲಿ ಬಿ. ಸರೋಜಾದೇವಿ ಸಹ ಒಬ್ಬರು. ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಭಾರತೀಯ ನಟಿಯಾಗಿ ಗುರುತಿಸಿಕೊಂಡರು. ಅವರು ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಅಭಿನಯ ಸರಸ್ವತಿ’ ಮತ್ತು ತಮಿಳಿನಲ್ಲಿ ‘ಕನ್ನಡತು ಪೈಂಗಿಲಿ’ (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ.

ಸರೋಜಾದೇವಿ ಅವರು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತದ 60ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತ ಸರ್ಕಾರ 2008ರ ಜೀವಮಾನ ಸಾಧನೆ ಪ್ರಶಸ್ತಿ ನೀಡಿತ್ತು. ಇನ್ನು 1992ರಲ್ಲಿ ‘ಪದ್ಮಭೂಷಣ ಪ್ರಶಸ್ತಿ’ ಮತ್ತು 1969ರಲ್ಲಿ ಪದ್ಮಶ್ರೀ ಪಡೆದಿದ್ದರು.
ಭಾರತಿ ವಿಷ್ಣುವರ್ಧನ್ ಸಂತಸ: ಇನ್ನು ವಿಷ್ಣು ದಾದಾಗೆ ಕರ್ನಾಟಕ ರತ್ನ ಪುರಸ್ಕಾರ ಘೋಷಣೆಯಾಗಿದ್ದಕ್ಕೆ ಭಾರತಿ ವಿಷ್ಣುವರ್ಧನ್ ಸಂತಸ ವ್ಯಕ್ತಪಡಿಸಿದ್ದಾರೆ. 75ನೇ ವಸಂತದಲ್ಲಿ ಅವರಿಗೆ ಸಿಗಬೇಕು ಅಂತ ಪ್ರೇರಣೆ ಇತ್ತು. ವಿಷ್ಣು ಅಭಿಮಾನಿಗಳ ಸಂತೋಷವನ್ನ ಎಕ್ಸ್ಪ್ರೆಸ್ ಮಾಡಲಾರೆ. ಅಭಿಮಾನಿಗಳ ಸಂತಸ ನೋಡುತ್ತಿದ್ದರೇ, ಮನಸ್ಸು ತುಂಬಿ ಬರುತ್ತೆ. ಅಭಿಮಾನಿಗಳ ಸಂತೋಷವೇ ನಮ್ಮ ಸಂತೋಷ ಎಂದು ಹೇಳಿದ್ದಾರೆ.
ಈ ಕರ್ನಾಟಕ ರತ್ನ ಪ್ರಶಸ್ತಿ ಅಭಿಮಾನಿಗಳಿಗೆ ಅರ್ಪಣೆಯಾಗುತ್ತೆ. ಯಾಕಂದ್ರೇ ಅಭಿಮಾನಿಗಳ ಕೋರಿಕೆ, ಆಸೆ ಮೇರೆಗೆ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಧನ್ಯವಾದಗಳನ್ನ ತಿಳಿಸುವೆ. ಎಲ್ಲ ಕಲಾವಿದರ ಮೇಲೂ ಇದೇ ಪ್ರೀತಿ ಇರಲಿ. ಸಂತೋಷಕ್ಕೆ ನಾನು ಭಾವುಕಳಾಗಿದ್ದೇನೆ. ಭಾವನೆಗಳಲ್ಲೇ ಗೊತ್ತಾಗುತ್ತೆ. ಮಾತುಗಳಲ್ಲಿ ಗೊತ್ತಾಗಲ್ಲ.
ಮೈಸೂರು ಅಂದ್ರೇ ಅಭಿಮಾನ. ವಿಷ್ಣು ಇಷ್ಟ ಪಟ್ಟ ಜಾಗ ಮೈಸೂರು. ನಮ್ಮಿಂದ ಏನೂ ಆಗಿಲ್ಲ. ಡಾ.ವಿಷ್ಣು ಅವರಿಗೆ ಮಾಡಿಸಿಕೊಳ್ಳಬೇಕಿತ್ತು. ಡಾ.ವಿಷ್ಣು ಅವರನ್ನ ಮಿಸ್ ಮಾಡಿಕೊಳ್ಳುತ್ತಿಲ್ಲ. ನನ್ನ ಜೊತೆಗೆ ಡಾ.ವಿಷ್ಣುವರ್ಧನ್ ಸದಾ ಇರುತ್ತಾರೆ ಎಂದು ಭಾರತಿ ವಿಷ್ಣುವರ್ಧನ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
Related








