ಬೆಂಗಳೂರು: ಬೆಂಗಳೂರು ನಗರ ಸಾರಿಗೆ ಸಂಸ್ಥೆ (BMTC) ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆಟ್ಟದಾಸನಪುರ ರಸ್ತೆಯಲ್ಲಿ ನಡೆದಿದೆ.

ಈ ಭೀಕರ ಅಪಘಾತದಲ್ಲಿ ತಮಿಲೂನಾಡಿನ ಕಣಿರಾಜ್ (28) ಎಂಬಾತನೆ ಮೃತಪಟ್ಟವರು.
ಕಣಿರಾಜ್ ಅವರು ಬೆಟ್ಟದಾಸನಪುರದಲ್ಲಿ ಜ್ಯೂಸ್ ಅಂಗಡಿ ಆರಂಭಿಸಲು ನಿರ್ಧರಿಸಿದ್ದರು. ಅಂಗಡಿ ನೋಡಲು ಸ್ನೇಹಿತರೊಂದಿಗೆ ಬೈಕ್ನಲ್ಲಿ ಹೊಸೂರಿನಿಂದ ನಗರಕ್ಕೆ ಬಂದಿದ್ದರು. ಆಗ ದುರ್ಘಟನೆ ನಡೆದಿದೆ ಎಂದು ಸಂಚಾದ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಯಲ್ಲಿ ಕಣಿರಾಜ್ ಅವರ ಸ್ನೇಹಿತ ಸಹ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಬಸ್ ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನನ್ನು ಬಂಧಿಸಿ, ಬಸ್ ಜಪ್ತಿ ಮಾಡಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಮಾಹಿತಿ ಪ್ರಕಾರ ರಸ್ತೆಯಲ್ಲಿರುವ ಹಂಪ್ಸ್ ದಾಟುವ ವೇಳೆ ಬೈಕ್ ಸವಾರ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಇದೇವೇಳಗೆ ಬಂದ ಬಿಎಂಟಿಸಿ ಬಸ್ ಬೈಕ್ ಸವಾರನ ತಲೆ ಮೇಲೆ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತದೇಹವನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ಹೇಳಲಾಗುತ್ತಿದೆ. ಇದರಲ್ಲಿ ಬಸ್ ಚಾಲಕನ ತಪ್ಪಿದೆಯೇ ಅಥವಾ ಬೈಕ್ ಸವಾರ ಆಯತಪ್ಪಿ ಕೆಳಗೆ ಬಿದ್ದು ಬಸ್ ಚಕ್ರಕ್ಕೆ ಸಿಲುಕಿ ಅಸುನೀಗಿದ್ದಾರೆಯೆ ಎಂಬುದರ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
Related










