ನಮ್ಮರಾಜ್ಯಲೇಖನಗಳು

ಸಾರಿಗೆ ಸಂಸ್ಥೆಯ ಸಂಘಿಗಳ ಬಣ ಬಡಿದಾಟಕ್ಕೆ ವೇತನ ಸೌಲಭ್ಯದಿಂದ ನೌಕರರು  ವಂಚಿತ !

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರನ್ನು ಹಾಳು ಮಾಡಲು ಹೊರಟಿರುವುದು ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ನೌಕರರ ಒಕ್ಕೂಟ ಈ ಎರಡು ಬಣಗಳ ಮುಖಂಡರು.

ಜಂಟಿ ಕ್ರಿಯಾ ಸಮಿತಿ ಬಣದ ಮುಖಂಡರು ಹಾಗೂ ಪದಾಧಿಕಾರಿಗಳು ನೌಕರರ ಒಕ್ಕೂಟದ ಮುಖಂಡರು ಹಾಗೂ ಪದಾಧಿಕಾರಿಗಳ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ನಿಂದಿಸುವುದು ಅದರಂತೆ ಒಕ್ಕೂಟದ ಮುಖಂಡರು, ಪದಾಧಿಕಾರಿಗಳು ಜಂಟಿ ಕ್ರಿಯಾ ಸಮಿತಿಯವರ ಬಗ್ಗೆ ನಿಂದಿಸುವುದು ಇದೇ ಆಯಿತು.

ಈ ನಡುವೆ ಈ ಬಣಗಳ ಬಡಿದಾಟದಿಂದ ನೌಕರರು ಯಾವರೀತಿ ನಡೆದುಕೊಳ್ಳಬೇಕೋ ಎಂಬ ಗೊಂದಲದಲ್ಲೇ ಪ್ರಮುಖವಾಗಿ ಪಡೆಯಬೇಕಾದ ವೇತನ ಸೌಲಭ್ಯವನ್ನು ಪಡೆಯಲಾಗದೆ ಹೆಣಗಾಡುತ್ತಿದ್ದಾರೆ.

ಇನ್ನು ಈ ಬಣಗಳ ಜತೆಗೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಹಾಗೂ ಆಡಳಿತ ವರ್ಗದ ಸಿಬ್ಬಂದಿಗಳ ಸಂಘಟನೆಗಳು ಕೂಡ ಬಸ್‌ ನಿಲ್ಲಿಸಿ ಮುಷ್ಕರ ಮಾಡುವುದಕ್ಕೆ ನಮ್ಮ ಬೆಂಬಲವಿಲ್ಲ. ಆದರೆ ಶಾಂತಿಯುತ ಧರಣಿಯನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳುತ್ತಿದ್ದಾರೆ.

ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಹಾಗೂ ನೌಕರರ ಒಕ್ಕೂಟದ ಪದಾಧಿಕಾರಿಗಳು ತಮ್ಮ ಸ್ವ ಪ್ರತಿಷ್ಠೆಗಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಒಬ್ಬರಿಗೊಬ್ಬರು ನಿಂದಿಸಿಕೊಂಡು ನಾವು ವೇತನ ಹೆಚ್ಚಳ ಮಾಡಿಸುತ್ತೇವೆ ನೀವು ಸಮ್ಮನಿದ್ದು ಬಿಡಿ ಎಂದು ಉತ್ತರನ ಪೌರುಷ ಒಲೆಮುಂದೆ ಎಂಬಂತೆ ಕಳೆದ 5 ವರ್ಷಗಳಿಂದಲೂ ಹೇಳಿಕೊಂಡೆ ಬರುತ್ತಿದ್ದಾರೆ.

ಈ ನಡುವೆ ವಿಧಾನಸಭೆ ಚುನಾವಣೆ ವೇಳೆ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳವಾದಗ ನಾವು ಇದನ್ನು ಒಪ್ಪುವುದಿಲ್ಲ ನಮ್ಮ ಕಾರ್ಮಿಕರಿಗೆ ಅನ್ಯಾಯವಾಗಿದೆ. ಶೇ.25ರಷ್ಟು ಕೊಡಲೇಬೇಕು ಎಂದು ಹೌಹಾರಿದ ಮುಖಂಡು ಬಳಿಕ ಅಂದಿನ ಸಿಎಂಗೆ ಹೂ ಗುಚ್ಛ ನೀಡಿ ಬಳಿಕ ನಮ್ಮಿಂದಲೇ ಶೇ.15ರಷ್ಟು ವೇತನ ಹೆಚ್ವಳವಾಯಿತು ಎಂದು ಹೇಳಿಕೊಂಡರು. ಅದನ್ನು ಈಗಲೂ ಹೇಳುತ್ತಿದ್ದಾರೆ.

ಆದರೆ, ಶೇ.15ರಷ್ಟು ವೇತನ ಹೆಚ್ಚಳದ ಘೋಷಣೆ ಆಗಿ ಎರಡು ವರ್ಷಗಳು ಕಳೆಯುತ್ತ ಬಂದರೂ ಈವರೆಗೂ ಇವರಿಗೆ 38 ತಿಂಗಳ ಹಿಂಬಾಕಿ ಕೊಡಿಸಲು ಆಗಿಲ್ಲ. ಕೇಳಿದರೆ ಮತ್ತದೆ ಕಾರಣ ಏನು ನಾವು ಶೇ.15ರಷ್ಟು ವೇತನ ಹೆಚ್ಚಳ ಮಾಡಿಸಿದ್ದೇವೆ ನೀವು ಹಿಂಬಾಕಿ ಕೊಡಿಸಿ ಎಂದು ಜಾರಿಕೊಳ್ಳುವುದು.

ಇತ್ತ ನೌಕರರ ಒಕ್ಕೂಟದ ಪದಾಧಿಕಾರಿಗಳು ನಾವೇಕೆ ಹಿಂಬಾಕಿ ಕೊಡಿಸಬೇಕು. ಶೇ.15ರಷ್ಟು ವೇತನ ಹೆಚ್ಚಳವಾಗಿರುವುದು ನಮ್ಮಿಂದಲೇ ಎಂದು ಹೇಳಿಕೊಂಡು ಬೊಬ್ಬೆ ಹೊಡೆಯುತ್ತಿದ್ದೀರಲ್ಲ ನೀವೇ 38 ತಿಂಗಳ ಹಿಂಬಾಕಿ ಕೊಡಿಸಿ ಏಕೆ ನಿಮ್ಮಿಂದ ಅದು ಸಾಧ್ಯವಾಗುತ್ತಿಲ್ಲವೇ ಎಂದು ಮರು ಪ್ರಶ್ನೆ ಹಾಕಿಕೊಂಡು ಕಾಲ ಕಳೆದುಕೊಂಡೆ ಬರುತ್ತಿರುವುದು.

ಅಂದರೆ ಇಲ್ಲಿ ನೌಕರರು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿರುವುದು ಶೇ.15ರಷ್ಟು ವೇತನ ಹೆಚ್ಚಳ ಮಾಡಿದ್ದು ಸರ್ಕಾರ. ಇಲ್ಲಿ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯೂ ಅಲ್ಲ ನೌಕರರ ಒಕ್ಕೂಟವು ಅಲ್ಲ ಎಂದು. ಏಕೆಂದರೆ ನಿಜವಾಗಲು ಜಂಟಿ ಕ್ರಿಯಾ ಸಮಿತಿ ಶೇ.15ರಷ್ಟು ವೇತನ ಹೆಚ್ಚಳ ಮಾಡಿಸಿದ್ದರೆ ಈಗಾಗಲೇ 38 ತಿಂಗಳ ಹಿಂಬಾಕಿಯನ್ನು ಕೊಡಿಸುತ್ತಿತ್ತು.

ಆದರೆ ಈವರೆಗೂ ಅದು ಸಾಧ್ಯವಾಗಿಲ್ಲ ಎಂದರೆ ಅಂದಿನ ಬಿಜೆಪಿ ಸರ್ಕಾರವೇ ಏಕಪಕ್ಷೀಯವಾಗಿ ವೇತನ ಹೆಚ್ಚಳ ಮಾಡಿದೆ ಎಂಬುವುದು ಇಲ್ಲಿ ಸ್ಪಷ್ಟ. ಇನ್ನು ಏನೆ ಒಳ್ಳೆಯದಾದರೂ ಅದರ ಲಾಭ ಪಡೆಯಲು ನಾವೇ ಮಾಡಿಸಿದ್ದು ಎಂದು ಹೇಳುವುದಕ್ಕೆ ಎರಡೂ ಬಣಗಳು ಮುಂದೆ ಬರುತ್ತವೆ. ಆಗಬೇಕಿರುವುದನ್ನು ಏಕೆ ಮಾಡಿಸಿಲ್ಲ ಎಂದರೆ ಒಬ್ಬರಮೇಲೆ ಒಬ್ಬರು ವಿರುದ್ಧ ಹೇಳಿಕೆ ಕೊಡುತ್ತ ಅವರಿಂದಲೇ ಮಾಡಿಸಿಕೊಳ್ಳಿ ಎಂದು ಬೊಬ್ಬೆಹೊಡೆಯುತ್ತಾರೆ.

ಇನ್ನಾದರೂ ಇದೆಲ್ಲವನ್ನು ಬಿಟ್ಟು ನೌಕರರಿಗೆ ಅನುಕೂಲ ಮಾಡುವುದಿದ್ದರೆ ಕಾಳಜಿಯಿಂದ ಮಾಡಿ, ಇಲ್ಲ ಇಂದು ಅಂದರೆ ಮಾ.10ರಂದು ವಕೀಲರೊಬ್ಬರು ನೌಕರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹೆಜ್ಜೆಹಾಕುತ್ತಿದ್ದಾರೆ. ಅವರನ್ನಾದರೂ ಬೆಂಬಲಿಸಿ ಬರಿ ಬೊಗಳೆ ಬಿಟ್ಟುಕೊಂಡು ನೌಕರರ ದಾರಿತಪ್ಪಿಸುವುದನ್ನು ಇನ್ನಾದರೂ ನಿಲ್ಲಿಸಿ ಎಂಬುವುದು ನೊಂದ ನೌಕರರ ಒತ್ತಾಯಪೂರ್ವಕ ಮನವಿ.

Deva
the authorDeva

Leave a Reply

error: Content is protected !!