NEWSಕೃಷಿಮೈಸೂರು

ರೈತರ ಸಮಸ್ಯೆ ಬಗೆ ಹರಿಸಲು ಒತ್ತಾಯಿಸಿ ಡಿಸಿ ಕಚೇರಿ ಮುಂದೆ ರೈತ ಮುಖಂಡರ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ರೈತರ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ , ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಪರವಾಗಿ ತಹಸೀಲ್ದಾರ್ ರೇಖಾ ಅವರಿಗೆ ಒತ್ತಾಯ ಪತ್ರ ಸಲ್ಲಿಸಿದರು.

ಮಂಗಳವಾರ ಪ್ರತಿಭಟನೆ ನಡೆಸಿದ ಮೈಸೂರು ಭಾಗದ ರೈತ ಮುಖಂಡರು, ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರ ಟನ್ ಕಬ್ಬಿಗೆ 3550 ರೂ. ನಿಗದಿ ಮಾಡಿದೆ. ಪ್ರಸಕ್ತ 2025-2026ನೇ ಸಾಲಿಗೆ ಕಬ್ಬಿನ ಎಫ್ಆರ್ಪಿ ದರಕ್ಕೆ ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆ ಎಸ್ಎಪಿ ದರ ಏರಿಕೆ ಮಾಡಿ ಟನ್‌ಗೆ 4500 ರೂ. ನಿಗದಿ ಪಡಿಸಿ ಈ ಹೆಚ್ಚುವರಿ ಹಣ ಕೊಡಿಸಬೇಕು ಆಗ್ರಹಿಸಿದರು.

ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ ಕೊಡಿಸಬೇಕು. ಎಫ್ಆರ್ಪಿ ದರ ಪುನರ್ ಪರಿಶೀಲನೆ ಮಾಡಿ ಸಿಎಸಿಪಿ ವರದಿಯಂತೆ ಪ್ರತಿ ಟನ್ ಕಬ್ಬಿಗೆ ರೈತನ ಹೊಲದಲ್ಲಿನ ದರ ಟನ್‌ಗೆ 4500 ರೂ. ಬೆಲೆ ನಿಗದಿ ಪಡಿಸಬೇಕು.

ಕಳೆದ 2023-2024 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಟನ್‌ಗೆ 150 ರೂ. ಬೆಲೆ ನಿಗದಿ ಪಡಿಸಿದ್ದು, ಕಾರ್ಖಾನೆಗಳು ಇನ್ನು ಆ ಹಣವನ್ನು ಕೊಟ್ಟಿಲ್ಲ ಅದಕ್ಕೆ ಬಡ್ಡಿ ಸೇರಿಸಿ ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಬೇಕು. ಕಬ್ಬಿನ ಎಫ್ಆರ್ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು ಎಂದು ಆಗ್ರಹಿಸಿದರು.

ಇನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಇಳುವರಿ ಮೋಸ ತಪ್ಪಿಸಲು ಇಳುವರಿ ಮಿತಿ ಕನಿಷ್ಠ ಶೇ.9ಕ್ಕೆ ನಿಗದಿ ಆಗಬೇಕು. ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆಗಳ ಮುಂದೆ ಸರ್ಕಾರದಿಂದ ತೂಕದ ಯಂತ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಇತ್ತ ಜಿಲ್ಲೆಯಲ್ಲಿ ಭತ್ತದ ಬೆಳೆ ಹೆಚ್ಚು ನಾಟಿ ಮಾಡಿದ್ದು ಯೂರಿಯಾ ರಸ ಗೊಬ್ಬರದ ಅವಶ್ಯಕತೆ ಹೆಚ್ಚು ಇದೆ. ಹೀಗಾಗಿ ರೈತರಿಗೆ ಸಮಸ್ಯೆಯಾಗದಂತೆ ಮುಕ್ತವಾಗಿ ಸಿಗಲು ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕು. ಮೈಸೂರು ತಾಲೂಕಿನ ಕಡಕೋಳ ಗ್ರಾಮದಿಂದ ವಾಜಮಂಗಲಕ್ಕೆ ಹೋಗುವ ಹೈಟೆನ್ಶನ್ ವೈರ್ ಹಾದು ಹೋಗುತ್ತಿದ್ದು ಇದರಿಂದ ರೈತರು ಜಮೀನು ಕಳೆದುಕೊಳ್ಳುತ್ತಿದ್ದಾರೆ.

ಈ ಭಾಗದ ಬಹುತೇಕ ರೈತರು ತುಂಡು ಭೂಮಿ ಹೊಂದಿದ್ದು ಜೀವನಕ್ಕೆ ಇದೇ ಆಧಾರವಾಗಿದೆ. ಎಲ್ಲರೂ ಸಣ್ಣ, ಅತಿ ಸಣ್ಣ ರೈತರಿದ್ದು ಇವರು ತೀವ್ರ ಸಂಕಷ್ಟಕ್ಕೆ ಸಿಲುಕಲ್ಲಿದ್ದಾರೆ ಅಂತಹ ರೈತರಿಗೆ ಪರ್ಯಾಯವಾಗಿ ಭೂಮಿ ನೀಡಬೇಕು ಅಥವಾ ಶಾಶ್ವತ ನ್ಯಾಯಯುತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಮೈಸೂರು ತಾಲೂಕು ಅಧ್ಯಕ್ಷ ಲಕ್ಷ್ಮೀಪುರ ವೆಂಕಟೇಶ್, ನಂಜನಗೂಡು ತಾಲೂಕು ಅಧ್ಯಕ್ಷ ದೇವನೂರು ವಿಜಯೇಂದ್ರ, ವರಕೋಡು ನಾಗೇಶ್, ಕೆಂಡಗಣಪ್ಪ, ಬನ್ನೂರು ಸೂರಿ, ವಾಜಮಂಗಲ ಮಹದೇವು, ಕಾಟೂರು ಮಹದೇವಸ್ವಾಮಿ, ಕಾಟೂರು ನಾಗೇಶ್, ಕೊಡನಹಳ್ಳಿ ಸೋಮಣ್ಣ, ಅಂಬಳೆ ಮಂಜುನಾಥ್, ದೇವನೂರು ಮಹದೇವಸ್ವಾಮಿ, ಸಾತಗಳ್ಳಿ ಬಸವರಾಜ್, ಕೂರ್ಗಳ್ಳಿ ರವಿಕುಮಾರ್, ಪಿ.ನಾಗೇಂದ್ರ, ಮಾರ್ಬಳ್ಳಿ ಬಸವರಾಜ, ಸಿದ್ಧರಾಮ, ನಂಜುಂಡಸ್ವಾಮಿ, ಗಣೇಶ್, ವಾಜಮಂಗಲ ನಾಗೇಂದ್ರ, ಚಂದ್ರು, ಸ್ವಾಮಿ, ಪುಟ್ಟಸ್ವಾಮಿ, ಶಿವಕುಮಾರ್, ಲೀಲಾ ಸೇರಿ ನೂರಾರು ರೈತರು ಇದ್ದರು.

Megha
the authorMegha

Leave a Reply

error: Content is protected !!