ಸಂಜೆ 4.42ರಿಂದ5.06 ಗಂಟೆಯ ಶುಭ ಕುಂಭ ಲಗ್ನದಲ್ಲಿ ‘ಅಭಿಮನ್ಯು’ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಗೊಂಡಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ


ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯನ್ನು ವಿಜಯದಶಮಿಯಂದು (ಅ.2) ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತರರಾಗಿದ್ದು, ಜಿಲ್ಲಾಡಳಿತ ಅಂತಿಮ ಹಂತದ ಸಿದ್ಧತೆ ಪೂರ್ಣಗೊಳಿಸಿದೆ.
ಅ. 2ರಂದು ಗುರುವಾರ ಮಧ್ಯಾಹ್ನ 1ರಿಂದ 1.18ರವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದ್ದಾರೆ.
ಇನ್ನು ಸಂಜೆ 4.42ರಿಂದ 5.06 ಗಂಟೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿಅರಮನೆ ಆವರಣದಲ್ಲಿ ‘ಅಭಿಮನ್ಯು’ ಹೊರಲಿರುವ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಗೊಂಡ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವರು. ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.
ವಿಜಯದಶಮಿ ಮೆರವಣಿಗೆಯಲ್ಲಿ 58 ಸ್ತಬ್ಧಚಿತ್ರಗಳು, 125ಕ್ಕೂ ಹೆಚ್ಚು ಕಲಾತಂಡಗಳು ಹಾಗೂ 14 ಆನೆಗಳ ಗಜಪಡೆ, ಅಶ್ವಾರೋಹಿ ಪಡೆಗಳು ಭಾಗವಹಿಸಿವೆ.
6ನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು: 6ನೇ ಬಾರಿ ಕ್ಯಾಪ್ಟನ್ ‘ಅಭಿಮನ್ಯು’ ಅಂಬಾರಿ ಹೊತ್ತು ಬನ್ನಿಮಂಟಪದವರೆಗೂ ಸಾಗಲಿದ್ದಾನೆ. ‘ಕಾವೇರಿ’ ಮತ್ತು ‘ರೂಪ’ ಕುಮ್ಕಿ ಆನೆಗಳಾಗಿ ಸಾಥ್ ನೀಡುತ್ತಿವೆ. ನಿಶಾನೆ ಆನೆಯಾಗಿ ಧನಂಜಯ ಹಾಗೂ ನೌಪತ್ ಆನೆಯಾಗಿ ಗೋಪಿ ಕಾರ್ಯ ನಿರ್ವಹಿಸುತ್ತಿವೆ.
48 ಸಾವಿರ ಆಸನ ವ್ಯವಸ್ಥೆ: ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಪ್ರಕರಣ ನಡೆದಿರುವುದರಿಂದ ಈ ಬಾರಿ ಎಚ್ಚೆತ್ತುಕೊಂಡು ಆಸನಕ್ಕೆ ತಕ್ಕಂತೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಅರಮನೆ ಆವರಣದಲ್ಲಿ48 ಸಾವಿರ ಮಂದಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ.

ಕಳೆದ ಬಾರಿ 59,600 ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಬಾರಿ 11,600 ಆಸನ ವ್ಯವಸ್ಥೆ ಕಡಿತಗೊಳಿಸಲಾಗಿದೆ. ಅಲ್ಲದೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ರಸ್ತೆ, ಇಕ್ಕೆಲಗಳಲ್ಲಿ ಪೆಂಡಾಲ್ ಹಾಕಿ ಆಸನದ ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್ ಕಾರ್ಡ್, ವಿವಿಐಪಿ, ವಿಐಪಿ ಪಾಸ್ವುಳ್ಳವರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಜತೆಗೆ ಜಂಬೂ ಸವಾರಿ ವೇಳೆ ಸಾರ್ವಜನಿಕರು ರಸ್ತೆಗೆ ಬಾರದಂತೆ ಎರಡೂ ಕಡೆ ಮರದ ಬ್ಯಾರಿಕೇಡ್ ನಿರ್ಮಿಸಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್: ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್್ತ ವ್ಯವಸ್ಥೆ ಮಾಡಿದೆ. ಸಿವಿಲ್, ಟ್ರಾಫಿಕ್ ಸಿಬ್ಬಂದಿ ಸೇರಿ ಒಟ್ಟು 6184 ಮಂದಿ ನಿಯೋಜನೆ ಮಾಡಲಾಗಿದೆ. ಐದು ಎಸ್ಪಿ, 35 ಡಿವೈಎಸ್ಪಿ, 140 ಸರ್ಕಲ್ ಇನ್ಧಿಸ್ಪೆಕ್ಟರ್, 35 ಕೆಎಸ್ಆರ್ಪಿ, 15 ಸಿಎಆರ್, ಡಿಎಆರ್, 29 ಎಎಸ್ಸಿ ತಂಡ, 1 ಗರುಡ ಪೊಲೀಸ್, 1 ಆರ್ಎಎಫ್, 1700 ಹೋಂ ಗಾರ್ಡ್ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅರಮನೆಯಲ್ಲಿಭದ್ರತಾ ದೃಷ್ಟಿಯಿಂದ ಕಮಾಂಡೋ ಪಡೆ ತುಕಡಿಗಳನ್ನು ನೇಮಿಸಲಾಗಿದೆ.
ಡ್ರೋನ್ ಕಣ್ಗಾವಲು: ಭದ್ರತೆ ದೃಷ್ಟಿಯಿಂದ ಡ್ರೋನ್ ಕಣ್ಗಾವಲು ಇರಲಿದೆ. ಈಗಾಗಲೇ ಇರುವ 30,614 ಸಿಸಿ ಕ್ಯಾಮೆರಾಗಳ ಜತೆಗೆ, ಹೆಚ್ಚುವರಿಯಾಗಿ ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ, ಇತರ ಪ್ರಮುಖ ಸ್ಥಳಗಳಲ್ಲಿ200 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 32 ಅಗ್ನಿಶಾಮಕ ದಳ, 26 ಆಂಬ್ಯುಲೆನ್ಸ್ಗಳನ್ನು ನಿಯೋಜನೆ ಮಾಡಲಾಗಿದೆ.
ಆಕರ್ಷಕ ಪಂಜಿನ ಕವಾಯತು: ಜಂಬೂಸವಾರಿ ಮುಗಿದ ಬಳಿಕ ರಾತ್ರಿ 7 ಗಂಟೆಗೆ ಬನ್ನಿಮಂಪಟದ ಮೈದಾನದಲ್ಲಿಪಂಜಿನ ಕವಾಯತು ನಡೆಯಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಎರಡು ಗಂಟೆಗಳ ಕಾಲ ಸಾಹಸಮಯ, ರೋಮಾಂಚನಕಾರಿ ಬೈಕ್, ಅಶ್ವಾರೋಹಿ ಪಡೆಗಳ ಚಮತ್ಕಾರ, ಡ್ರೋನ್ ಶೋ ಮೂಲಕ ಹನ್ನೊಂದು ದಿನಗಳ ಕಾಲದ ನಾಡಹಬ್ಬಕ್ಕೆ ತೆರೆ ಬೀಳಲಿದೆ.
Related
