CRIMENEWSದೇಶ-ವಿದೇಶ

ಸರ್ಕಾರಿ ಬಸ್‌ ಬ್ರೇಕ್ ಫೇಲಾಗಿ ಬೈಕ್, ಪಿಕಪ್ ವ್ಯಾನ್‌ಗೆ ಡಿಕ್ಕಿ: ಗರ್ಭಿಣಿ, ಮಗು ಸೇರಿ ಎಂಟು ಮಂದಿ ಸಾವು

ವಿಜಯಪಥ ಸಮಗ್ರ ಸುದ್ದಿ

ಉತ್ತಮಸೋಲಪುರಂ : ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ತಮಿಳುನಾಡು ರಾಜ್ಯದ ಸರ್ಕಾರಿ ಬಸ್ ಬೈಕ್, ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಹಾಗೂ 11 ತಿಂಗಳ ಮಗು ಸೇರಿ ಎಂಟು ಮಂದಿ ಭೀಕರವಾಗಿ ಮೃತಪಟ್ಟಿರುವ ಘಟನೆ ಸೇಲಂ-ಕೊಯಮತ್ತೂರು (Selam-Coimbatore) ಹೆದ್ದಾರಿಯಲ್ಲಿ ನಡೆದಿದೆ.

ಇಂದು (ಮಾ.20) ಬೆಳಗ್ಗೆ 30ಕ್ಕೂ ಹೆಚ್ಚು ಜನರಿದ್ದ ಬಸ್ ಈರೋಡ್‌ನಿಂದ ಸೇಲಂಗೆ ಹೋಗುತ್ತಿತ್ತು. ಈ ವೇಳೆ ಉತ್ತಮಸೋಲಪುರಂ ಬಳಿ ಬಸ್‌ನ ಬ್ರೇಕ್ ಫೇಲ್ ಆಗಿ, ನಿಯಂತ್ರಣ ತಪ್ಪಿದೆ. ಪರಿಣಾಮ ಬಸ್ ಬೈಕ್ ಹಾಗೂ ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದು, ನಾಲ್ವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ.

ದೇವರ ಉತ್ಸವದಲ್ಲಿ ಭಾಗವಹಿಸಲು ಕಲ್ಪರಪಟ್ಟಿಗೆ ಪಿಕಪ್ ವ್ಯಾನ್‌ನಲ್ಲಿ ತೆರಳುತ್ತಿದ್ದ ನೈಕಾರಪಟ್ಟಿಯ 11ಮಂದಿ ಪೈಕಿ ನೈಕಾರಪಟ್ಟಿಯ 60 ವರ್ಷದ ಸೆಲ್ವರಾಜ್, ಅವರ ಮೊಮ್ಮಕ್ಕಳಾದ 11 ತಿಂಗಳ ಜೀವಿಕಾ ಮತ್ತು 5 ವರ್ಷದ ನಿತೀಶ್ಕಾ, ಮೂರು ತಿಂಗಳ ಗರ್ಭಿಣಿ ಅವರ ಸೊಸೆ ಸತ್ಯ (25), ಸಂಬಂಧಿಕರಾದ ಅಮುತಾ ಮತ್ತು ಮುರುಗನ್ ಸಾವನ್ನಪ್ಪಿದ್ದಾರೆ. ವ್ಯಾನ್ ಚಲಾಯಿಸುತ್ತಿದ್ದ ಸೆಲ್ವರಾಜ್ ಅವರ ಮಗ ಮೇಘನಾಥನ್ (23) ಹಾಗೂ ಇನ್ನುಳಿದವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ಬೈಕ್‌ನಲ್ಲಿ ಹೊರಟಿದ್ದ ಪುತ್ತೂರು ಬಳಿಯ ಸಂತನಕರಣಕಾಡು ನಿವಾಸಿಗಳಾದ ಎಸ್. ಮಣಿಕಂಠನ್ (21) ಮತ್ತು ತಾಯಿ ಎಸ್. ಇರುಸಾಯಿ (50) ಅಸುನೀಗಿದ್ದಾರೆ. ಇಬ್ಬರು ಹತ್ತಿರದ ಆಸ್ಪತ್ರೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತ ವಿಷಯ ತಿಳಿಯುತ್ತಿದ್ದಂತೆ ಕೊಂಡಲಂಪಟ್ಟಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸೇಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಸೇಲಂ ಜಿಲ್ಲೆಯ ಪೆರಿಯಾ ವನವಾಸಿಯ ಅಯ್ಯಂದುರೈ (49) ಬಸ್ ಚಾಲಕನಾಗಿದ್ದು, ಅಪಘಾತ ಸಂಭವಿಸಿದ ಬಳಿಕ ಪರಾರಿಯಾಗಿದ್ದ. ಆದರೆ ಒಂದು ಗಂಟೆಯೊಳಗೆ ಬಂಧಿಸಿದ್ದಾರೆ. ಜತೆಗೆ ಬಸ್ ಕಂಡಕ್ಟರ್ ಬಾಲಕೃಷ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಪಘಾತದಿಂದಾಗಿ ಸೇಲಂ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

Megha
the authorMegha

Leave a Reply

error: Content is protected !!