NEWSನಮ್ಮಜಿಲ್ಲೆನಮ್ಮರಾಜ್ಯ

ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧ: ಡಿಸಿಎಂ ಡಿಕೆ ಶಿವಕುಮಾರ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೈಗಾರಿಕೆಗಳ, ಉದ್ಯಮಗಳ ಬೆಳವಣಿಗೆಗೆ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕವಾದ ಎಲ್ಲ ರೀತಿಯ ಸಹಕಾರ ಮತ್ತು ನೆರವನ್ನು ನೀಡಲು ನಮ್ಮ ಸರ್ಕಾರ ಸದಾ ಸಿದ್ಧವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ) ವತಿಯಿಂದ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಅವ್ವೇರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ಕಾಸಿಯಾ ಶ್ರೇಷ್ಠತಾ ಮತ್ತು ನಾವೀನ್ಯತಾ ಕೇಂದ್ರ ಮತ್ತು ವಸ್ತು ಪ್ರದರ್ಶನ ಕೇಂದ್ರದ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಣ್ಣ ಕೈಗಾರಿಕೆಗಳು ನಮ್ಮ ಆರ್ಥಿಕತೆಯ ಬೆನ್ನೆಲುಬು. ನನಗೆ ಅವುಗಳ ಶಕ್ತಿ ಮತ್ತು ಸವಾಲುಗಳ ಬಗ್ಗೆ ಸಂಪೂರ್ಣ ಅರಿವಿದೆ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಇದ್ದಾಗ ಮಾತ್ರ ಗುಣಮಟ್ಟ ಹೆಚ್ಚಾಗುತ್ತದೆ. ಹಾಗಾಗಿ, ನಮ್ಮ ಕೈಗಾರಿಕೆಗಳಿಗೆ, ವಿಶೇಷವಾಗಿ ಸಣ್ಣ ಕೈಗಾರಿಕೆಗಳಿಗೆ, ಇನ್ನಷ್ಟು ಹೊಸ ಶಕ್ತಿ ತುಂಬಲು ನಾವು ಸಿದ್ಧರಿದ್ದೇವೆ. ನಮ್ಮ ನೀತಿಗಳನ್ನು ಮತ್ತಷ್ಟು ಆಕರ್ಷಕವಾಗಿಸುತ್ತೇವೆ. ಹೂಡಿಕೆ, ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಮೂಲಕ ಉದ್ಯಮಗಳು ಇನ್ನಷ್ಟು ಪ್ರವರ್ಧಮಾನಕ್ಕೆ ಬರಲು ಬೇಕಾದ ಎಲ್ಲ ಬೆಂಬಲವನ್ನು ನೀಡುತ್ತೇವೆ ಎಂದರು.

ಬೆಂಗಳೂರಿನ ಹೆಮ್ಮೆ ನಮ್ಮಲ್ಲಿರುವ ಅಪ್ರತಿಮ ಪ್ರತಿಭೆಗಳು. ವಿಶ್ವದ ಉನ್ನತ ಹುದ್ದೆಗಳಲ್ಲಿರುವ ಅನೇಕರು ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಮಾಡಿದವರು, ಇಲ್ಲೇ ತಮ್ಮ ವೃತ್ತಿಜೀವನ ರೂಪಿಸಿಕೊಂಡವರು. ಇದು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಪ್ರತಿಭಾ ಪೋಷಣೆಯ ಸಾಮರ್ಥ್ಯಕ್ಕೆ ಸಾಕ್ಷಿ. ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ತಂತ್ರಜ್ಞಾನದ ಪ್ರಗತಿಯನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಈ ತಂತ್ರಜ್ಞಾನ ಮತ್ತು ಪ್ರತಿಭೆಗಳ ಸಮ್ಮಿಲನದಿಂದ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಣ್ಣ ಕೈಗಾರಿಕೆಗಳ ಸಮಸ್ಯೆಗಳನ್ನು ಕಾಲಕಾಲಕ್ಕೆ ಸರ್ಕಾರದ ಗಮನಕ್ಕೆ ತರುವಲ್ಲಿ ಮತ್ತು ಪರಿಹಾರ ಕಂಡುಕೊಳ್ಳುವಲ್ಲಿ ನಿಮ್ಮ ಪಾತ್ರ ಶ್ಲಾಘನೀಯ ಎಂದರು.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಇನ್ನು ಮೂರ್ನಾಲ್ಕು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಖರ್ಚು ಮಾಡಲು ಅಂದಾಜಿಸಲಾಗಿದೆ‌. 40 ಕಿಮೀ ಟನಲ್ ರಸ್ತೆ, 113 ಫ್ಲೈಓವರ್, ಮೆಟ್ರೋ ರೈಲು ನಿಲ್ದಾಣ ರೂಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಮಾತನಾಡಿ, ಕೇಂದ್ರದಲ್ಲಿ ನಾನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಂತ್ರಿ ಆಗಿದ್ದಾಗ ಅಂದು ಭಾರತದಾದ್ಯಂತ 20 ತಂತ್ರಜ್ಞಾನದ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಯಿತು ಅವುಗಳಿಂದ ಹೆಚ್ಚಿನ ಕೈಗಾರಿಕೆಗಳ ಸ್ಥಾಪನೆಗೆ ಸಹಕಾರಿಯಾಯಿತು. ದೇವನಹಳ್ಳಿಯ ಏರೋಸ್ಪೇಸ್ ಸೆಂಟರ್ ಅನ್ನು ಮಂಜೂರು ಮಾಡಿ ಅಲ್ಲಿ ಅನುಕೂಲವಾಗುವ ರೀತಿಯಲ್ಲಿ ಜಾರಿಗೊಳಿಸಿದೆ. ಈ ತರಬೇತಿ ಕೇಂದ್ರದಲ್ಲಿ ಆಧುನಿಕ ತಂತ್ರಜ್ಞಾನ, ಎಕ್ಸ್ಪೋರ್‌ಟ್ ಗುಣಮಟ್ಟದ ಉತ್ಪಾದನೆಯು ವಿದೇಶಗಳಲ್ಲಿ ಹೆಚ್ಚು ಬೇಡಿಕೆಗೆ ಸಹಕಾರಿಯಾಗಬೇಕು ಎಂದರು.

ಕಾಸಿಯಾ ನಿರ್ಮಿಸಿರುವ ತರಬೇತಿ ಕೇಂದ್ರಲ್ಲಿಯೂ ಕೂಡ ಗುಣಮಟ್ಟದ ತರಬೇತಿ ನೀಡುತ್ತಾರೆ, ಸ್ಥಳೀಯಯರಿಗೆ ಮೊದಲ ಆದ್ಯತೆ ಕೊಡಿ. ನಿಮ್ಮ ತಂತ್ರಜ್ಞಾನ ಕೈಗಾರಿಕಾ ಉತ್ಪನ್ನಗಳು ಹೊರ ದೇಶದಲ್ಲಿ ಬೇಡಿಕೆ ಸಿಗಬೇಕು. ಎಲ್ಲಾ ಕೈಗಾರಿಕೆಗಳಲ್ಲಿಯೂ ಕೂಡ ಅಭ್ಯರ್ಥಿಗಳಿಗೆ ಇದೇ ರೀತಿ ಕೌಶಲ್ಯಾಭಿವೃದ್ಧಿ ತರಬೇತಿಗಳು ಸಿಕ್ಕರೆ ಕೈಗಾರಿಕೆಗಳು ಬೆಳೆಯುತ್ತವೆ. ಹಾಗಾಗಿ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ಒಂದು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಆಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನೆಲಮಂಗಲ ಶಾಸಕ ಎನ್. ಶ್ರೀನಿವಾಸ್, ಮಾಜಿ ಶಾಸಕ ಹಾಗೂ ಉದ್ಯಮಿ ಅಶೋಕ್ ಖೇಣಿ, ಕೆ.ಎಸ್.ಎಸ್.ಐ.ಡಿ.ಸಿ ಯ ವ್ಯವಸ್ಥಾಪಕ ನಿರ್ದೇಶಕರು ಕ್ಯಾಪ್ಟನ್ ಡಾ. ರಾಜೇಂದ್ರ, ಎಂ.ಎಸ್.ಎಂ.ಇ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರು ನಿತೀಶ್ ಪಾಟೀಲ್,ಕಾಸಿಯಾ ಅಧ್ಯಕ್ಷರಾದ ಎಂ.ಜಿ. ರಾಜಗೋಪಾಲ್, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!