- ದೂರು ದಾಖಲಿಸಿಕೊಳ್ಳಲು ಪೊಲೀಸರ ಹಿಂದೇಟು

ದೇವದುರ್ಗ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹೆಡ್ ಕಾನ್ಸ್ಟೆಬಲ್ ಒಬ್ಬರು ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಬಸ್ ಸೀಟಿಗಾಗಿ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಅಲ್ಲದೆ ಬಸ್ಗೆ ಕಲ್ಲು ಹೊಡೆದು ಬಸ್ ಮುಂಭಾಗದ ಗ್ಲಾಸ್ ಒಡೆದುಹಾಕಿದ್ದಾನೆ.
ಹೆಡ್ ಕಾನ್ಸ್ಟೆಬಲ್ ಶ್ರೀನಿವಾಸ್ ಎಂಬುವರೆ ಈ ಕೃತ್ಯ ಎಸಗಿದವರು. ಪಟ್ಟಣದಿಂದ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸ್ ದೇವದುರ್ಗದಿಂದ ರಾಯಚೂರಿಗೆ ಹೊರಟಿತ್ತು. ಕರ್ತವ್ಯ ಮುಗಿಸಿಕೊಂಡು ರಾಯಚೂರಿಗೆ ತೆರಳುತ್ತಿದ್ದ ಹೆಡ್ ಕಾನ್ಸ್ಟೆಬಲ್ ಶ್ರೀನಿವಾಸ್ ಬಸ್ನ ಸೀಟ್ ಒಂದರಲ್ಲಿ ಕುಳಿತಿದ್ದ ವೃದ್ಧೆಯೊಬ್ಬರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ಈ ವೇಳೆ ಬಸ್ನಲ್ಲಿ ಡ್ಯೂಟಿ ಮಾಡುತ್ತಿದ್ದ ಚಾಲಕ ಕಂ ನಿರ್ವಾಹಕ ಸುರೇಶಬಾಬು ಮತ್ತು ಬಸ್ನಲ್ಲಿದ್ದ ಪ್ರಯಾಣಿಕರು ತಿಳಿ ಹೇಳುವ ಪ್ರಯತ್ನಿಸಿದ್ದಾರೆ. ಆದರೆ, ಅವರ ಮಾತನ್ನು ಕೇಳಿಸಿಕೊಳ್ಳದೆ ಪ್ರಯಾಣಿಕರ ಮೇಲೆಯೇ ರೇಗಾಡಿದ ಹೆಡ್ ಕಾನ್ಸ್ಟೆಬಲ್ ಬಸ್ ಇಳಿದು ಬಂದು ಬಸ್ಗೆ ಕಲ್ಹೋಡೆದಿದ್ದಾರೆ. ಈ ಘಟನೆಯನ್ನು ಸಾರ್ವಜನಿಕರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಬಸ್ನ ಗಾಜು ಒಡೆದ ಬೆನ್ನಲ್ಲೇ ಚಾಲಕ ಸುರೇಶಬಾಬು ಬಸ್ ಅನ್ನು ನೇರವಾಗಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ ಹೆಡ್ ಕಾನ್ಸ್ಟೆಬಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸುರೇಶಬಾಬು ಹಾಗೂ ಪ್ರಯಾಣಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಸ್ ಚಾಲಕ ಹಾಗೂ ಪ್ರಯಾಣಿಕರಿಗೆ ಹೆಡ್ ಕಾನ್ಸ್ಟೆಬಲ್ ಶ್ರೀನಿವಾಸ ಜೀವ ಬೆದರಿಕೆ ಹಾಕಿದ್ದರು, ಹೆಡ್ ಕಾನ್ಸ್ಟೆಬಲ್ ವಿರುದ್ಧ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದ ಪೊಲೀಸರು ಸಂಧಾನಕ್ಕೂ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ಹೆಡ್ ಕಾನ್ಸ್ಟೆಬಲ್ ಶ್ರೀನಿವಾಸ ಹಿಂದೆ ಕರ್ತವ್ಯ ಲೋಪದಿಂದ ನಾಲ್ಕು ಬಾರಿ ಅಮಾನತುಗೊಂಡಿದ್ದರು ಎಂದು ಮೂಲಗಳು ಹೇಳಿವೆ.

ಘಟನೆಯಲ್ಲಿ ಹೆಡ್ ಕಾನ್ಸ್ಟೆಬಲ್ ತಪ್ಪಿದೆ ಕಾನೂನು ಸುವ್ಯವಸ್ಥೆ ಬಲ್ಲವರೇ ಈ ರೀತಿ ವರ್ತಿಸಿದ್ದು ಸರಿಯಲ್ಲ ದೂರು ನೀಡುವಂತೆ ನಿರ್ವಾಹಕ ಕಂ ಚಾಲಕನಿಗೆ ತಿಳಿಸಿದ್ದೇವೆ ಎಂದು ಘಟಕ ವ್ಯವಸ್ಥಾಪಕ ರಾಮನಗೌಡ ತಿಳಿಸಿದ್ದಾರೆ.
ಬಸ್ನಲ್ಲಿದ್ದ ಪ್ರಯಾಣಿಕರು, ಕೆಕೆಆರ್ಟಿಸಿ ಸಿಬ್ಬಂದಿಯಿಂದ ಘಟನೆಯ ಕುರಿತು ಮಾಹಿತಿ ಪಡೆದು ದೂರು ದಾಖಲಿಸಿಕೊಳ್ಳಲಾಗುವುದು ಎಂದು ದೇವದುರ್ಗ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್. ಮಂಜುನಾಥ ಹೇಳಿದ್ದಾರೆ.
Related









