ಆರೋಗ್ಯನಮ್ಮರಾಜ್ಯ

KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಇದೇ ಜ.6ರಿಂದ ಜಾರಿಗೆ ಬಂದಿರುವ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯ ಒಡಂಬಡಿಕೆಯಲ್ಲಿರುವ ಆಸ್ಪತ್ರೆಗಳು ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳನ್ನು ಹೊರಗಿಡಲಾಗುವುದು ಎಂದು ಅಧಿಕಾರಿಗಳು ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

ಹೌದು! ಜನವರಿ 6ರಂದು ಈ ಯೋಜನೆ ಜಾರಿಯಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಕೆಎಸ್‌ಆರ್‌ಟಿಸಿ ನೌಕರರು ಇಲ್ಲವೇ ಅವರ ಅವಲಂಬಿತರಲ್ಲಿ 1200ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದಾರೆ. ಯೋಜನೆಯ ಆರಂಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾಗುವುದು ಸಹಜ ಎಂದು ಅಧಿಕಾರಿಳು ಸ್ಪಷ್ಟಪಡಿಸಿದ್ದಾರೆ.

ಇನ್ನು ಕೆಎಸ್‌ಆರ್‌ಟಿಸಿ ಆರೋಗ್ಯ ಯೋಜನೆಯ ಒಡಂಬಡಿಕೆಯಲ್ಲಿರುವ ಮಂಡ್ಯದ ಆಸ್ಪತ್ರೆಯಲ್ಲಿ ಕೆಎಸ್‌ಆರ್‌ಟಿಸಿಯ ನೌಕರರೊಬ್ಬರು ಹೆರಿಗೆಗಾಗಿ ಅವರ ಪತ್ನಿಯನ್ನು ದಾಖಲಿಸಲು ಕರೆದೊಯ್ದಾಗ ಉಚಿತ ಇಲ್ಲ ಎಂದು ಅಲ್ಲಿನ ಆಡಳಿತ ಮಂಡಳಿ ಹೇಳಿರುವ ಆಡಿಯೋ ಸಹಿತ ವಿಜಯಪಥ ಕನ್ನಡ ಯೂ ಟೂಬ್‌ನಲ್ಲಿ ಪ್ರಸಾರವಾಗಿತ್ತು.

ಇದರಿಂದ ಎಚ್ಚೆತ್ತ ಅಧಿಕಾರಿಗಳು ಆ ರೀತಿ ನಡೆದುಕೊಳ್ಳುವ ಆಸ್ಪತ್ರೆಗಳ ಜತೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ರದ್ದು ಮಾಡುವ ಮೂಲಕ ಅವುಗಳನ್ನು ಹೊರಗಿಡಲಾಗುವುದು ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಮಂಡ್ಯದ ಆಸ್ಪತ್ರೆಯಲ್ಲಿ..?: ಸಂಸ್ಥೆಯ ನೌಕರರೊಬ್ಬರು ಪತ್ನಿಯನ್ನು ದಾಖಲಿಸಲು ಆಸ್ಪತ್ರೆಗೆ ಕರೆದೊಯ್ದಾಗ ಉಚಿತ ಇಲ್ಲ ಎಂದು ಗೊತ್ತಾಗಿ ಆಸ್ಪತ್ರೆಯ ಮೇಲಧಿಕಾರಿಯೊಂದಿಗಿನ ಫೋನ್ ಕರೆಯ ಸಂಭಾಷಣೆ ಮಾಡಿರುವುದು ಆಡಿಯೋದಲ್ಲಿದೆ. ‘ಸಹಜ ಹೆರಿಗೆಗೆ ₹8,000, ಸಿಸೇರಿಯನ್‌ಗೆ ₹12,000 ಮಾತ್ರ ಕೆಎಸ್‌ಆರ್‌ಟಿಸಿಯಿಂದ ವಿಮಾ ಮೊತ್ತ ಸಿಗುತ್ತದೆ. ಇದು ಒಟ್ಟು ವೆಚ್ಚದ ಶೇ.20ರಷ್ಟು. ಉಳಿದ ಮೊತ್ತವನ್ನು ನೌಕರರು ಭರಿಸಬೇಕು ಎಂಬುದು ಆಡಿಯೋದಲ್ಲಿದೆ.

ಯೋಜನೆ ಪರ ವಿಡಿಯೋ: ‘ಕೆಎಸ್‌ಆರ್‌ಟಿಸಿ ಆರೋಗ್ಯ’ ಯೋಜನೆಯಿಂದ ಅನುಕೂಲವಾಗಿದೆ ಎಂದು ಹಲವರು ವಿಡಿಯೋ ಮಾಡಿದ್ದಾರೆ. ಶಿವಮೊಗ್ಗ ಘಟಕದಲ್ಲಿ ಚಾಲಕರಾಗಿರುವ ಶಿವಕುಮಾ‌ರ್ ಅವರು ತನ್ನ ಪತ್ನಿಯನ್ನು ಹೆರಿಗೆಗಾಗಿ ಭದ್ರಾವತಿಯ ಆಸ್ಪತ್ರೆಗೆ ದಾಖಲಿಸಿದ್ದರು. ‘ಯಾವುದೇ ಶುಲ್ಕ ಕಟ್ಟಿಸಿಕೊಳ್ಳದೇ ಸಿಸೇರಿಯನ್ ಮಾಡಿದ್ದಾರೆ. ಮೊದಲ ಹೆರಿಗೆಗೆ ಇದೇ ಆಸ್ಪತ್ರೆಯಲ್ಲಿ ₹45 ಸಾವಿರ ವೆಚ್ಚವಾಗಿತ್ತು’ ಎಂದು ಹೇಳಿಕೊಂಡಿದ್ದಾರೆ.

ಇನ್ನು ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ ನೌಕರರಾಗಿರುವ ಪ್ರಭಾವತಿ ಅವರು ಅಪಘಾತದಲ್ಲಿ ಗಾಯಗೊಂಡಾಗ ಮಲ್ಲೇಶ್ವರದಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಸಕಾಲದಲ್ಲಿ ಉಚಿತವಾಗಿ ಚಿಕಿತ್ಸೆ ದೊರೆತಿರುವುದನ್ನು ಅವರ ಮಗಳು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಅನಗತ್ಯ ವಿಡಿಯೋ: ರಾಮಲಿಂಗಾರೆಡ್ಡಿ: ‘ಕೆಎಸ್‌ಆರ್‌ಟಿಸಿ ಆರೋಗ್ಯ’ದಡಿ 250 ಆಸ್ಪತ್ರೆಗಳೊಂದಿಗೆ ಮೊದಲ ಹಂತದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆನಂತರ ಮತ್ತೆ 64 ಆಸ್ಪತ್ರೆಗಳು ಸೇರ್ಪಡೆಗೊಂಡಿವೆ. ಅದರಲ್ಲಿ ಮಂಡ್ಯದಲ್ಲಿಯೇ ನಾಲ್ಕು ಆಸ್ಪತ್ರೆಗಳಿವೆ. ಯಾವುದೋ ಒಂದು ಆಸ್ಪತ್ರೆಯಲ್ಲಿ ನಮ್ಮ ಜತೆಗೆ ಒಡಂಬಡಿಕೆ ಮಾಡಿಕೊಂಡಂತೆ ಮಾಡಿ ಬಳಿಕ ಇಲ್ಲ ಎಂದು ಹೇಳಿದ್ದರೆ ಆ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳುತ್ತಾರೆ. ಯಾವುದೇ ನೌಕರರು ಭಯಪಡುವುದು ಬೇಡ ಎಂದು ತಿಳಿಸಿದ್ದಾರೆ.

ಇನ್ನು ಕೆಲವರು ಯೋಜನೆ ಬಗ್ಗೆ ಕೆಟ್ಟ ಹೆಸರು ತರುವುದಕ್ಕೆ ಈ ರೀತಿ ಮಾಡುತ್ತಾರೆ ಅಂಥವರ ಬಗ್ಗೆ ನೌಕರರು ತಲೆ ಕೆಡಿಸಿಕೊಳ್ಳಬಾರದು. ಅಲ್ಲದೆ ಒಡಂಬಡಿಕೆ ಮಾಡಿಕೊಂಡಿರುವ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡದಿದ್ದರೆ ಅವುಗಳನ್ನು ಏನು ಮಾಡಬೇಕು ಎಂಬುವುದರ ಬಗ್ಗೆ ನಮ್ಮ ಸಂಸ್ಥೆಯ ಅಧಿಕಾರಿಗಳು ಕ್ರಮ ಜರುಗಿಸುತ್ತಾರೆ ಎಂದು ಹೇಳಿದ್ದಾರೆ.

Deva
the authorDeva

Leave a Reply

error: Content is protected !!