ಸಂಚಾರ ನಿಯಮ ಪಾಲಿಸದಿದ್ದರೆ ನೀನು ಸೀದಾ ಯಮನ ಬಳಿ: ಎಳ್ಳು ಬೆಲ್ಲ, ಗುಲಾಬಿ ನೀಡಿ ಜಾಗೃತಿ ಮೂಡಿಸಿದ ಪೊಲೀಸ್

ಮೈಸೂರು: ನಗರದ ಹೃದಯ ಭಾಗ ಕೆ.ಆರ್.ವೃತ್ತದಲ್ಲಿ ಗಂಧದಗುಡಿ ಫೌಂಡೇಶನ್ ಮತ್ತು ನಗರ ಸಂಚಾರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬುಧವಾರ, ಯಮಧರ್ಮನ ವೇಷಧರಿಸಿ ಸಂಚಾರ ನಿಯಮ ಪಾಲಿಸದಿದ್ದರೆ ನೀನು ಸೀದಾ ಯಮನ ಬಳಿ” ಎಂಬ ಘೋಷ ವಾಕ್ಯದೊಂದಿಗೆ ವಾಹನ ಸವಾರರ ಗಮನ ಸೆಳೆದರು. ಡಿಸಿಪಿ ಕೆ.ಎಸ್. ಸುಂದರ್ರಾಜ್ ಎಳ್ಳು ಬೆಲ್ಲ ಹಾಗೂ ಗುಲಾಬಿ ನೀಡಿ ಬೈಕ್ ಸವಾರರಿಗೆ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದರು.

ಪೊಲೀಸರು, ವಾಹನಗಳನ್ನು ತಡೆಯುತ್ತಿದ್ದುದನ್ನು ಗಮನಿಸಿದ ಕೆಲವರು ಪರಾರಿಯಾದರೆ, ಕೆಲವರು ಸಿಕ್ಕಿಕೊಂಡರು ದಂಡ ಕಟ್ಟಬೇಕೆನ್ನುವ ಚಿಂತೆ, ತಪ್ಪು ಮಾಡಿದ ಭಾವದಿಂದ ಅವರ ಮುಖ ಕಳೆಗುಂದಿತ್ತು. ಇನ್ನು ಚಾಲಕರು ವಾಹನದಿಂದ ಇಳಿದು ದಂಡವನ್ನು ಕಟ್ಟಲು ಹಣಕ್ಕಾಗಿ ಜೇಬಿಗೆ ಕೈಹಾಕುತ್ತಿದ್ದಂತೆ ಪೊಲೀಸರು ಗುಲಾಬಿ ಹೂ ಹಾಗೂ ಎಳ್ಳು ಬೆಲ್ಲ ನೀಡಲು ಮುಂದಾಗುತ್ತಿದ್ದರು.
ಈ ವೇಳೆ ಅಚ್ಚರಿಯಿಂದಲೇ ಎಳ್ಳು ಬೆಲ್ಲ, ಹೂ ಸ್ವೀಕರಿಸಿಸುತ್ತಿದ್ದ ಸವಾರರು ಮತ್ತೆ ಸಂಚಾರ ನಿಯಮ ಉಲ್ಲಂಘಿಸಿ, ತಪ್ಪು ಮಾಡುವುದಿಲ್ಲ ಎನ್ನುವ ಭರವಸೆ ನೀಡುತ್ತಿದ್ದುದು ವಿಶೇಷವಾಗಿತ್ತು. ಸಂಚಾರ ನಿಯಮಗಳನ್ನು ಪಾಲಿಸಿ, ವಾಹನದ ದಾಖಲಾತಿಗಳ ಸುರಕ್ಷತೆಗೆ ಆದ್ಯತೆ ನೀಡಿ, ವಿಮೆ ಮಾಡಿಸಿ, ಓವರ್ಟೇಕ್ ಮಾಡುವುದನ್ನು ನಿಲ್ಲಿಸಬೇಕು, ಅಪಘಾತವಾಗದಂತೆ ಎಚ್ಚರವಹಿಸಬೇಕು, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸದಿರಿ, ಸುರಕ್ಷಿತ ವಾಹನ ಚಾಲನೆಗೆ ಮುಂದಾಗಿ ಹೀಗೆ ಪೊಲೀಸರು ವಾಹನ ಸವಾರರಿಗೆ ಹತ್ತಾರು ಸಲಹೆಗಳನ್ನು ನೀಡಿದರು.
ಡಿಸಿಪಿ ಸುಂದರ್ ರಾಜ್ ಮಾತನಾಡಿ, ದುಡಿಯುವ ವ್ಯಕ್ತಿಗೆ ಪ್ರಾಣ ಹಾನಿಯಾದರೆ ಆ ಕುಟುಂಬ ಬೀದಿಗೆ ಬೀಳುತ್ತದೆ ಎಂಬುದನ್ನು ಪ್ರತಿಯೊಬ್ಬ ಚಾಲಕ ಮತ್ತು ಸವಾರರು ಮನಸ್ಸಿನಲ್ಲಿ ಸದಾ ನೆನಪಿಟ್ಟುಕೊಳ್ಳಬೇಕು. ಯಾವುದೇ ಪ್ರಾಣಹಾನಿ ಆಗದಂತೆ ವಾಹನ ಸಂಚಾರ ಮಾಡುವಾಗ ಸಂಚಾರ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಚಾಲನೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿ ಹೇಳಿದರು.
ಎಸಿಪಿ ಶಿವಶಂಕರ್ ಮಾತನಾಡಿ, ಸುರಕ್ಷತೆ ದೃಷ್ಟಿಯಿಂದ ಜಾರಿಗೆ ತಂದಿರುವ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ಹಾಗೂ ತಿಳಿವಳಿಕೆ ಇದ್ದರೂ ಕೂಡ ಸಾರ್ವಜನಿಕರು ಅದನ್ನು ಪಾಲಿಸುತ್ತಿಲ್ಲ ಅಪಘಾತಗಳನ್ನು ತಪ್ಪಿಸಲು ಸವಾರರು ಹಾಗೂ ಚಾಲಕರ ಮನಸ್ಥಿತಿ ಬದಲಾಬೇಕು ಎಂದು ಹೇಳಿದರು.
ದೇವರಾಜ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿ.ಡಿ.ಮಮತಾ, ಸೀಟ್ ಎಡ್ ಚಿತ್ರದ ನಾಯಕ ಸಿದ್ದು ಮೂಲಿಮನಿ, ನಾಯಕನಟಿ ರವೀಕ್ಷಾ ಶೆಟ್ಟಿ, ಗಂಧದಗುಡಿ ಫೌಂಡೇಶನ್ನ ರಾಜ್ಯಾಧ್ಯಕ್ಷ ಆರ್ಯನ್ ಗಂಧದಗುಡಿ ಮತ್ತಿತರರು ಇದ್ದರು.
Related









