ಜಾತಿ ಕಿರುಕುಳಕ್ಕೆ ಬೇಸತ್ತು ಐಪಿಎಸ್ ಅಧಿಕಾರಿ ಆತ್ಮಹತ್ಯೆ- ಐಎಎಸ್ ಅಧಿಕಾರಿಯೂ ಆಗಿರು ಪತ್ನಿ ದೂರು ಕೊಟ್ಟರೂ FIR ದಾಖಲಿಸದ ಪೊಲೀಸರು


ಚಂಡೀಗಢ: ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹರಿಯಾಣದ ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಪತ್ನಿ ಹಿರಿಯ ಐಎಎಸ್ ಅಧಿಕಾರಿ ಅಮ್ನೀತ್ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿಗೆ ಪತ್ರ ಬರೆದಿದ್ದಾರೆ.
ಜಾತಿ ಕಿರುಕುಳಕ್ಕೆ ಬೇಸತ್ತು IPS ಅಧಿಕಾರಿ ಪೂರಣ್ ಕುಮಾರ್ ಇದೇ ಅಕ್ಟೋಬರ್ 7 ರಂದು ಚಂಡೀಗಢದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹಿರಿಯ IAS ಅಧಿಕಾರಿತೂ ಆಗಿರುವ ಪತ್ನಿ ದೂರು ನೀಡಿದ್ದರೂ ಪೊಲೀಸರು FIR ದಾಖಲಿಸದೆ ಅಸಡ್ಡೆಯಿಂದ ನಡೆದುಕೊಂಡಿದ್ದಾರೆ.
8 ಪುಟಗಳ ಆತ್ಮಹತ್ಯೆ ಟಿಪ್ಪಣಿ ಮತ್ತು ಔಪಚಾರಿಕ ದೂರಿನ ಹೊರತಾಗಿಯೂ ಯಾವುದೇ ಎಫ್ಐಆರ್ (FIR) ದಾಖಲಿಸಲಾಗಿಲ್ಲ ಎಂದು ಪತ್ನಿ ಅಮ್ನೀತ್ ಆಕ್ರೋಶ ಹೊರ ಹಾಕಿದ್ದಾರೆ.
ಪತಿಯ ಆತ್ಮಹತ್ಯೆ ಪತ್ರವನ್ನು ಉಲ್ಲೇಖಿಸಿ ಬರೆದ ಪತ್ರದಲ್ಲಿ, ಕಿರುಕುಳ, ಅವಮಾನ ಮತ್ತು ಮಾನಸಿಕ ಹಿಂಸೆಯಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಗಳ ಎಲ್ಲ ವಿವರಗಳನ್ನು ನೀಡಿದ್ದರು, ಚಂಡೀಗಢ ಪೊಲೀಸರು, ನಿರ್ಲಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹರಿಯಾಣ ಪೊಲೀಸ್ (Haryana Police) ಮತ್ತು ಆಡಳಿತದ ಪ್ರಭಾವಿ ಉನ್ನತ ಅಧಿಕಾರಿಗಳು ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಅವರು ಚಂಡೀಗಢ ಪೊಲೀಸರ ಮೇಲೆ ಪ್ರಭಾವ ಬೀರುತ್ತಿರುವುದಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಉನ್ನತ ಹುದ್ದೆಯಲ್ಲಿರುವ, ಪ್ರಭಾವಿ ಅಧಿಕಾರಿಗಳು ನನ್ನ ಮತ್ತು ನನ್ನ ಕುಟುಂಬದ ಮೇಲೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಾರೆ ಮತ್ತು ಬೇರೆ ರೀತಿಯಲ್ಲಿ ನನ್ನನ್ನು ಸಿಲುಕಿಸಲು ಪ್ರಯತ್ನಿಸಬಹುದು ಎಂದು ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದಲ್ಲಿ ಹರಿಯಾಣ ಸರ್ಕಾರದ ನಿಯೋಗದೊಂದಿಗೆ ಅಮ್ನೀತ್ ಅವರು ಜಪಾನ್ಗೆ ತೆರಳಿದಾಗ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಅವರು ಪ್ರವಾಸದಿಂದ ಹಿಂತಿರುಗಿದ್ದರು.

ತಾವು ಜಪಾನ್ನಿಂದ ಮರಳಿದ ತಕ್ಷಣ ಪತಿಯ ಲ್ಯಾಪ್ಟಾಪ್ ಬ್ಯಾಗ್ನಲ್ಲಿ ಡೆತ್ನೋಟ್ನ 2ನೇ ಪ್ರತಿ ಸಿಕ್ಕಿದೆ. ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಹಿನ್ನೆಲೆಯಲ್ಲಿ ಜಾತಿ ತಾರತಮ್ಯಕ್ಕೆ ಒಳಗಾಗಿದ್ದರು.
ರೋಹ್ಟಕ್ ಎಸ್ಪಿ ನರೇಂದ್ರ ಬಿಜರ್ನಿಯಾ, ಡಿಜಿಪಿ ಕಪೂರ್ ಅವರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಅರ್ಬನ್ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಸುಳ್ಳು ಎಫ್ಐಆರ್ ದಾಖಲಿಸಲಾಗಿದೆ. ಈ ಘಟನೆಯಿಂದಾಗಿ ಪತಿ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದರು. ಈ ವಿಷಯವನ್ನು ಡಿಜಿಪಿ ಮತ್ತು ಎಸ್ಪಿ ಜತೆ ಚರ್ಚಿಸಲು ಪತಿ ಮಾಡಿದ ಪ್ರಯತ್ನಗಳು ವಿಫಲವಾದ ಕಾರಣ ಅವರು ಈ ರೀತಿಯ ನಿರ್ಧಾರ ತೆಗೆದುಕೊಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಮ್ನಿತ್ ತಮ್ಮ ಪತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರು ಮತ್ತು ಅವರ ಆತ್ಮಹತ್ಯೆ ಪತ್ರ ಮತ್ತು ಉಯಿಲು ಪತ್ರವನ್ನು ಸ್ವೀಕರಿಸಿದ ನಂತರ ಅವರಿಗೆ 15 ಬಾರಿ ಕರೆ ಮಾಡಿರುವುದಾಗಿ ಹೇಳಿದರು. ಅವರ ಕರೆಗಳಿಗೆ ಉತ್ತರಿಸದ ಹಿನ್ನೆಲೆ ತಮ್ಮ ಚಿಕ್ಕ ಮಗಳಿಗೆ ವಿಚಾರಿಸಲು ಕರೆ ಮಾಡಲಾಯಿತು, ಅವರು ಮನೆಗೆ ಧಾವಿಸಿದಾಗ, ನೆಲಮಾಳಿಗೆಯಲ್ಲಿ ರೆಕ್ಲೈನರ್ ಮೇಲೆ ತನ್ನ ಪತಿಯ ನಿರ್ಜೀವ ದೇಹವು ಕಂಡುಬಂದಿತು ಎಂದು ವಿವರಿಸಿದ್ದಾರೆ.
ಇನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಧಿಕಾರಿಗಳ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಬೇಕು. ತನಿಖೆಯ ಮೇಲೆ ಹಸ್ತಕ್ಷೇಪ, ಸಾಕ್ಷ್ಯಾಧಾರಗಳ ತಿರುಚುವಿಕೆ ಅಥವಾ ಪ್ರಭಾವ ತಡೆಯಲು ಆರೋಪಿತರನ್ನು ಅಮಾನತುಗೊಳಿಸುವಂತೆಯೂ ಅವರು ಕೋರಿದ್ದಾರೆ.
Related
