KKRTC ಬೀದರ್: ಅಧಿಕಾರಿಗಳ ಕಿರುಕುಳಕ್ಕೆ ನೊಂದು ಬಸ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಚಾಲಕ ರಾಜು


ಬೀದರ್: ಅಧಿಕಾರಿಗಳ ಕಿರುಕುಳದಿಂದ ಮನನೊಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಬೀದರ್ ಘಟಕ-1ರ ಚಾಲಕ ಬಸ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಟಕದಲ್ಲಿ ರಾತ್ರಿ ನಡೆದಿದೆ.
ಬುಧವಾರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಬಸ್ ಚಾಲಕ ರಾಜು ಆಣದೂರು (59) ಬಸ್ ಒಳಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಮಾಣಿಕವಾಗಿ ಡ್ಯೂಟಿ ಮಾಡುತ್ತಿದ್ದ ಚಾಲಕ ರಾಜು ಅವರು ಡಿಪೋ ವ್ಯವಸ್ಥಾಪಕ ವಿಠಲ್ ಭೋವಿ ಅವರ ಬಳಿ ಹೋಗಿ ನಾಲ್ಕು ದಿನಗಳು ರಜೆ ಬೇಕು ನಮ್ಮ ಮಗಳ ಮನೆಗೆ ಹೋಗಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಡಿಎಂ ರಜೆ ಕೊಡದೆ ಡ್ಯೂಟಿಗೆ ಬರಬೇಕು ಇಲ್ಲದಿದ್ದರೆ ನಿನ್ನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೆದರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಾವು ಪ್ರಾಮಾಣಿಕವಾಗಿ ಡ್ಯೂಟಿ ಮಾಡುತ್ತಿದ್ದರೂ ಕೂಡ ಈ ರೀತಿ ಕಿರುಕುಳ ನೀಡುತ್ತಿದ್ದಾರಲ್ಲ. ನಮ್ಮ ರಜೆ ಕೊಡುವುದಕ್ಕೆ ಕಾಡುತ್ತಾರಲ್ಲ ಎಂದು ಮಾನಸಿಕವಾಗಿ ಮನನೊಂದು ಬಸ್ನಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಮೃತ ಚಾಲಕ ರಾಜು ಆಣದೂರು ಅವರು ಪತ್ನಿ, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಇನ್ನು ಮೂವರು ಪುತ್ರಿಯರಿಗೆ ವಿವಾಹವಾಗಿದ್ದು ಓರ್ವ ಪುತ್ರಿಯ ವಿವಾಹ ಆಗಿಲ್ಲ.

ಆತ್ಮಹತ್ಯೆಗೆ ಇಲಾಖೆಯ ನಿರ್ಲಕ್ಷ್ಯವೂ ಕಾರಣ: ಈ ನೌಕರ ಆತ್ಮಹತ್ಯೆಗೆ ಇಲಾಖೆಯ ನಿರ್ಲಕ್ಷ್ಯವೂ ಕಾರಣ ಎಂದು ನೌಕರರು ಆರೋಪಿಸಿದ್ದಾರೆ. ನೌಕರರು ಒತ್ತಡದಲ್ಲಿ ಕೆಲಸಮಾಡುತ್ತಿದ್ದು, ನಮಗೆ ಹಲವು ರೀತಿಯ ಸೇವಾ ಸಮಸ್ಯೆಗಳು ಇವೆ. ಅದನ್ನು ಬಗೆಹರಿಸಬೇಕಾದ ಅಧಿಕಾರಿಗಳು ಲಂಚಕ್ಕೆ ಅಪಾಪಿಸುತ್ತಿರುತ್ತಾರೆ. ಇದರ ನಡುವೆ ನಮ್ಮ ಸಂಸಾರ ಮತ್ತು ಮಕ್ಕಳ ಓದು, ವಯಸ್ಸಾದ ಅಪ್ಪ-ಅಮ್ಮಂದಿರ ಆರೋಗ್ಯ ವೆಚ್ಚವೆಲ್ಲವನ್ನು ಭರಿಸಬೇಕು.
ಕೊಡುತ್ತಿರುವ ವೇತನ ಸಂಸಾರ ಸಾಗಿಸುವುದಕ್ಕೆ ಕಷ್ಟವಾಗುತ್ತಿದೆ. ಇದರ ನಡುವೆ ಲಂಚ ಕೊಟ್ಟು ಉಳಿದವುಗಳಿಗೆ ಹಣಹೊಂದಿಸಬೇಕು ಎಂದರೆ ಹೇಗೆ ಸಾಧ್ಯ? ಇದರಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿರುವ ನೌಕರರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ನೌಕರರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಅಧಿಕಾರಿಗಳ ನಿರಂತರ ನಿರ್ಲಕ್ಷ್ಯ, ಕಿರುಕುಳದಿಂದ ಮಾನಸಿಕ ಹಿಂಸೆ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಸರ್ಕಾರ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಮತ್ತೆ 2024 ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಮಾಡದೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುತ್ತಿರುವುದು ಕೂಡ ಇಂಥ ದುರಂತಕ್ಕೆ ಕಾರಣವಾಗಿವೆ ಎಂದು ಸಹೋದ್ಯೋಗಿಗಳು ಆರೋಪಿಸಿದ್ದಾರೆ.
Related
