NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29) ಕ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಮತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ನೂರಾರು ಸಂಖ್ಯೆಯಲ್ಲಿ ರಜೆಯಲ್ಲಿ ಇರುವ ನೌಕರರು ಭಾಗವಹಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ನೇತೃತ್ವದಲ್ಲಿ ಸಾರಿಗೆ ನೌಕರರ ವಿವಿಧ ಸಂಘಟನೆಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟದಡಿಯಲ್ಲಿ ಈ ಧರಣಿ ಸತ್ಯಾಗ್ರಹವನ್ನು ಇಂದು ಬೆಳಗ್ಗೆಯಿಂದ ಫ್ರೀಡಂ ಪಾರ್ಕ್‌ನಲ್ಲಿ ಆರಂಭಿಸಲಾಗಿದೆ.

ಬಸ್‌ ನಿಲ್ಲಿಸಿ ಮುಷ್ಕರ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಅಧಿಕಾರಿಗಳು ನಮ್ಮ ಶಾಂತಿಯುತ ಹೋರಾಟವನ್ನು ಬೆಂಬಲಿಸುವುದಾಗಿ ವಿಜಯಪಥಕ್ಕೆ ತಿಳಿಸಿದ್ದು, ಅದಂತೆ ಈ ಅನಿರ್ದಿಷ್ಟಾವಧಿ ಉಪವಾಸ ಮತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದಕ್ಕೆ ಬೇಷರತ್ತಾಗಿ ಬೆಂಬಲ ನೀಡಿದ್ದಾರೆ.

ಇನ್ನು ಸಾರಿಗೆ ನೌಕರರಿಗೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಅಂದರೆ ವಿಧಾನಸಭಾ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7ನೇ ವೇತನ ಆಯೋಗದ ಮಾದರಿಯಲ್ಲಿ) 01/01/2024 ರಿಂದ ಜಾರಿ ಮಾಡಬೇಕು ಎಂದು ಬೇಡಿಕೆ ಸಮಸ್ತ ಅಧಿಕಾರಿಗಳು ಹಾಗೂ ನೌಕರರ ಆಗ್ರಹವಾಗಿದೆ.

ಇದರ ಜತೆಗೆ 01/01/2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಈ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡಬೇಕು (ನಿವೃತ್ತ ನೌಕರರಿಗೆ ಮೊದಲ ಅದ್ಯತೆಯಲ್ಲಿ ಅವರ ಹಿಂಬಾಕಿ ಮತ್ತು ಇತರೆ ಸೇವಾ ಆರ್ಥಿಕ ಸೌಲಭ್ಯಗಳನ್ನು ನೀಡುವುದು.

ಇನ್ನು ಪ್ರಮುಖವಾಗಿ 2020 ಮತ್ತು 2021ರ ಸಾರಿಗೆ ಮುಷ್ಕರದ ಸಮಯದಲ್ಲಿ ಆಗಿರುವ ವಜಾ ಮತ್ತು ಇತರೆ ಪ್ರಕರಣಗಳ ಶಿಕ್ಷಾದೇಶಗಳನ್ನು ರದ್ದು ಪಡಿಸಿ ಸೌಹರ್ದ ರೀತಿಯಲ್ಲಿ ಇತ್ಯರ್ಥ ಪಡಿಸುವುದು ಹಾಗೂ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇದರ ನಡುವೆ ಸಾರಿಗೆ ಸಂಘಟನೆಗಳ ಮುಖಂಡರು ಅದರಲ್ಲೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು 1992 ನಂತರ ಸಾರಿಗೆ ಸಂಸ್ಥೆಗಳಲ್ಲಿ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಯದೆ ಇರುವುದರಿಂದ, ಕೂಡಲೆ” ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ಮಾಡಲು ಆದೇಶ ಮಾಡಬೇಕು ಎಂದು ಒತ್ತಾಯಿಸಿ ಈ ಧರಣಿ ಹಮ್ಮಿಕೊಂಡಿದ್ದು, ನೌಕರರು ಹಾಗೂ ನೌಕರರ ಕುಟುಂಬದವರು ಧರಣಿಯಲ್ಲಿ ಭಾಗವಹಿಸುತ್ತಿದ್ದಾರೆ.

Megha
the authorMegha

Leave a Reply

error: Content is protected !!