CrimeNEWSನಮ್ಮಜಿಲ್ಲೆ

ಗುತ್ತಿಗೆದಾರನ ಮೇಲೆ KSRTC ಅಧ್ಯಕ್ಷ ಶ್ರೀನಿವಾಸ್‌ ಹಲ್ಲೆ : ಎಫ್‌ಐಆರ್‌ ದಾಖಲು

ವಿಜಯಪಥ ಸಮಗ್ರ ಸುದ್ದಿ

ಗುಬ್ಬಿ: ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಕಾಂಗ್ರೆಸ್‌ ಕಾರ್ಯಕರ್ತ ರಾಯಸಂದ್ರ ರವಿಕುಮಾರ್‌ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು KSRTC ಅಧ್ಯಕ್ಷ ಎಸ್‌.ಆರ್‍.‌ ಶ್ರೀನಿವಾಸ್‌ (ವಾಸು) ವಿರುದ್ದ ಎಫ್‌ಐಆರ್‌ ದಾಖಲಾಗಿದೆ.

ರಾಯಸಂದ್ರ ರವಿಕುಮಾರ್‌ ಅವರ ಮೇಲೆ ತುಮಕೂರು ಜಿಲ್ಲೆಯ ಗುಬ್ಬಿ ಶಾಸಕರೂ ಆದ ಕೆಎಸ್‌ಆರ್ಟಿ‌ಸಿ ಅಧ್ಯಕ್ಷ ಶ್ರೀನಿವಾಸ್‌ ಮತ್ತು ಅವರ ಬೆಂಬಲಿಗರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದರೂ ಸಹ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಘಟನೆ ನಡೆದು 2 ದಿನದ ನಂತರ ಎಫ್‌ಐಆರ್‌ ದಾಖಲಿಸಲಾಗಿದೆ.

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಹದಗೆಟ್ಟಿದೆ ಮತ್ತು ಹಲ್ಲೆ, ಕೊಲೆ, ಅತ್ಯಾಚಾರ ಪ್ರಕರಣಗಳಂತಹ ಅಪರಾಧಗಳ ಸಂಖ್ಯೆಯೂ ಹೆಚ್ಚಿವೆ ಎಂದು ಸದನದಲ್ಲಿ ಪ್ರತಿಪಕ್ಷಗಳು ಆರೋಪಿಸಿದ್ದವು. ಇದರ ಬೆನ್ನಲ್ಲೇ ಸ್ವತಃ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆಯೇ ಕಾಂಗ್ರೆಸ್‌ ಶಾಸಕ ಶ್ರೀನಿವಾಸ್‌ ಮತ್ತವರ ಗುಂಪೊಂದು ಹಲ್ಲೆ ನಡೆಸಿರುವುದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಹಳಿ ತಪ್ಪಿದೆ ಎಂಬ ಆರೋಪಕ್ಕೆ ಮತ್ತೊಂದು ಪುಷ್ಠಿ ನೀಡುವಂತಿದೆ.

ವಿಶೇಷವೆಂದರೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‍‌ ಅವರ ಸ್ವಕ್ಷೇತ್ರದಲ್ಲಿಯೇ ಈ ಹಲ್ಲೆ ನಡೆದಿರುವುದು ಕಾನೂನು ಸುವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

ಎಫ್‌ಐಆರ್‌ನಲ್ಲಿ ಏನಿದೆ ? ರಸ್ತೆ, ಚರಂಡಿ ಮತ್ತಿತರ ನಾಗರಿಕ ಮೂಲಭೂತ ಸೌಲಭ್ಯಗಳ ಕಾಮಗಾರಿ ನಡೆಸುವ ಸಂಬಂಧ ಪಂಚಾಯತ್‌ರಾಜ್‌ ಇಲಾಖೆಯು ಕರೆದಿದ್ದ ಟೆಂಡರ್‌ನಲ್ಲಿ ಪ್ರಥಮದರ್ಜೆ ಗುತ್ತಿಗೆದಾರ ರಾಯಸಂದ್ರ ರವಿಕುಮಾರ್‌ ಅವರು ಕಡಿಮೆ ದರ ನಮೂದಿಸಿದ್ದರಿಂದಾಗಿ ಸಿವಿಲ್‌ ಕಾಮಗಾರಿಯ ಗುತ್ತಿಗೆ ದೊರೆತಿತ್ತು.

ಈ ಸಂಬಂಧ ಕಾರ್ಯಪಾಲಕ ಇಂಜಿನಿಯರ್‌ ಅವರು 2024ರ ಫೆ.21ರಂದು ಅಂಚೆ ಮೂಲಕ ರವಿಕುಮಾರ್‌ ಅವರಿಗೆ ಗುತ್ತಿಗೆಯ ಸಮ್ಮತಿ ದಾಖಲೆಗಳನ್ನು ರವಾನಿಸಿದ್ದರು. 2024ರ ಫೆ.27ರಿಂದ ಈ ಗುತ್ತಿಗೆ ಸಮ್ಮತಿ ಪತ್ರವು ಜಾರಿಯಾಗಿತ್ತು.

ಗುತ್ತಿಗೆ ಸಮ್ಮತಿ ಪತ್ರ ಕೈ ಸೇರಿದ ನಂತರ ರವಿಕುಮಾರ್‌  2024ರ ಮಾರ್ಚ್‌ 14ರಂದು ಮಧ್ಯಾಹ್ನ ಕುಣಿಗಲ್‌ ಮುಖ್ಯ ರಸ್ತೆಯಲ್ಲಿರುವ ಕೆ.ಲಕ್ಕಪ್ಪ ವೃತ್ತದ ಬಳಿ ಇರುವ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗಕ್ಕೆ ಭೇಟಿ ನೀಡಿದ್ದರು. ಗುತ್ತಿಗೆ ಕರಾರನ್ನು ಮಾಡಿಕೊಳ್ಳುವ ಸಂಬಂಧ ಸಹಾಯಕ ಇಂಜಿನಿಯರ್‌ ಲಿಂಗರಾಜು ಅವರು ತಕರಾರು ತೆಗೆದಿದ್ದರು.

ಈ ಕುರಿತು ಅಧಿಕಾರಿಗಳೊಂದಿಗೆ ರವಿಕುಮಾರ್‌ ಚರ್ಚಿಸಿದ್ದರು. ಆದರೆ ಕಡೇ ಗಳಿಗೆಯಲ್ಲಿ ಈ ಕಾಮಗಾರಿಯು ರದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇದು ಕಾನೂನುಬಾಹಿರ ಮತ್ತು ಏಕಪಕ್ಷೀಯವಾಗಿ ಕೂಡಿದೆ ಎಂದು ರವಿಕುಮಾರ್‍‌ ಆಕ್ಷೇಪಿಸಿ ಅಲ್ಲೇ ಅನಿರ್ದಿಷ್ಟಾವಧಿಯ ಪ್ರತಿಭಟನೆ ನಡೆಸುತ್ತಿದ್ದರು.

ವಿಷಯ ತಿಳಿದ ಶಾಸಕ ಶ್ರೀನಿವಾಸ್‌ ಮತ್ತು ಅವರ 10 ಮಂದಿ ಬೆಂಬಲಿಗರು ಏಕಾಏಕೀ ಧರಣಿ ಸ್ಥಳಕ್ಕೆ ಬಂದು ಗಲಾಟೆ ಮಾಡಿದರು. ಈ ವೇಳೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಶಾಸಕರು ಯಾವನೋ ಅವನು ರಾಯಸಂದ್ರ ರವಿ ಎಂದು ಕಿರುಚಾಡಿ ನನ್ನ ಕ್ಷೇತ್ರದಲ್ಲಿ ನನ್ನ ಅನುಮತಿ ಇಲ್ಲದೇ ಕಾಮಗಾರಿ ಮಂಜೂರು ಮಾಡಿಸಿಕೊಳ್ಳಲು ಎಷ್ಟು ಧೈರ್ಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಅಲ್ಲದೆ ನಿನಗೆ ತಾಕತ್ತಿದ್ದರೆ ಕೆಲಸ ಮಾಡು ನಿನ್ನೊಂದಿಗೆ ನಿನ್ನ ಕೆಲಸ ಮಾಡಿಸುವ ಯಂತ್ರೋಪಕರಣದೊಂದಿಗೆ ಜೀವಂತ ಸುಡಿಸುತ್ತೇನೆ ಎಂದು ಕೂಗಾಡಿದರು ಎಂದು ರವಿಕುಮಾರ್‍‌ ನೀಡಿರುವ ದೂರಿನಲ್ಲಿ ಘಟನೆ ಬಗ್ಗೆ ವಿವರಿಸಿದ್ದಾರೆ.

ಹಲ್ಲೆಗೊಳಗಾದ ರವಿಕುಮಾರ್‌: ಈ ವೇಳೆ ನನ್ನ ಮೇಲೆ ಏಕಾಏಕೀ ಕೈಗಳಿಂದ ಮನಸೋ ಇಚ್ಛೆ ಗುದ್ದಿ ಜೋರಾಗಿ ಹಿಮ್ಮುಖನಾಗಿ ಬೀಳುವಂತೆ ತಳ್ಳಿದಾಗ ಕತ್ತಿನ ಹಿಂಭಾಗ ಹಾಗೂ ಬೆನ್ನಿನ ಮೇಲೆ ರಕ್ತ ಹೆಪ್ಪುಗಟ್ಟಿದ ಗಾಯಗಳಾದವು. ನಂತರ ಅವರ ಜತೆ ಬಂದಿದ್ದವರು ಸಹ ಕೈ ಕಾಲುಗಳಿಂದ ತುಳಿದು ಕಾಲಿನಿಂದ ಒದ್ದರು.

ಇನ್ನು ಇವರ ಹಲ್ಲೆಯಿಂದ ದೇಹದ ಹಲವಾರು ಕಡೆ ಮೂಗೇಟು ಗಾಯಗಳು ಆಗಿವೆ. ನಂತರ ನನ್ನನ್ನು ಕಾರಿಗೆ ಎತ್ತಿ ಹಾಕಿಕೊಳ್ಳಿರೋ ಎಲ್ಲಿಯಾದರೂ ತೆಗೆದುಕೊಂಡು ಹೋಗಿ ಸಾಯಿಸಿ ಬಿಡೋಣ ಎಂದು ಧರಣಿ ನಡೆಯುತ್ತಿದ್ದ ಸ್ಥಳದಿಂದ ಎಳೆದುಕೊಂಡು ಹೋಗಿದರು ಎಂದು ರವಿಕುಮಾರ್‍‌ ಘಟನೆಯನ್ನು ಮತ್ತಷ್ಟು ವಿವರಿಸಿದ್ದಾರೆ.

ಈ ಸಂಬಂಧ ರವಿಕುಮಾರ್‌ ನೀಡಿದ್ದ ದೂರಿನ ಮೇರೆಗೆ 48 ಗಂಟೆಗಳ ಬಳಿಕ ಶಾಸಕ ಶ್ರೀನಿವಾಸ್‌ ಮತ್ತು ಅವರ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್‌ 1860, 511, 506, 504, 143, 149, 323, 363 ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...