KSRTC: ಟಿಕೆಟ್ ತೋರಿಸದಿದ್ದಕ್ಕೆ ತನಿಖಾ ಅಧಿಕಾರಿಯಿಂದ ವೃದ್ಧನ ಮೇಲೆ ಹಲ್ಲೆ ಆರೋಪ- ಅಧಿಕಾರಿ ವಿರುದ್ಧ FIR ದಾಖಲು

- ಟಿಕೆಟ್ ಪಡೆದ ಇಬ್ಬರಲ್ಲಿ ಒಬ್ಬ ಹಿಂದಿನ ನಿಲ್ದಾಣದಲ್ಲೇ ಇಳಿದ ಮತ್ತೊಬ್ಬ ಚೆಕಿಂಗ್ ಅಧಿಕಾರಿಗಳಿಗೆ ಸಿಕ್ಕಿಕೊಂಡು ಸಬೂಬ್ ಹೇಳಿದ!
ಸಕಲೇಶಪುರ, ಮಾ.22: ಬಸ್ ಟಿಕೆಟ್ ವಿಚಾರವಾಗಿ ಸಾರಿಗೆ ಇಲಾಖೆಯ ತನಿಖಾಧಿಕಾರಿಯೊಬ್ಬರು ವೃದ್ಧರೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಸಕಲೇಶಪುರದಲ್ಲಿ ನಡೆದಿದೆ.

ಈ ಘಟನೆ ಮಾ.19ರ ಗುರುವಾರ ನಡೆದಿದ್ದು ಕೋರ್ಟ್ ಮುಖಾಂತರ ದೂರು ದಾಖಲಾಗಿದೆ. ಇನ್ನು ಹಲ್ಲೆಯಿಂದ ಗಾಯಗೊಂಡ ಅಬ್ದುಲ್ ಹಫೀಜ್ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಅವರು ನೀಡಿದ ಹೇಳಿಕೆ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ಏನು?: ಬೆಳಗೋಡು ಹೋಬಳಿಯ ಉದೇವಾರ ಗ್ರಾಮದ ನಿವಾಸಿ ಹಾಗೂ ಕೋಳಿ ಅಂಗಡಿ ಮಾಲೀಕ ಅಬ್ದುಲ್ ಹಫೀಜ್ (76) ಎಂಬುವರು ಗುರುವಾರ ಬೆಳಗ್ಗೆ 10:30ರ ಸುಮಾರಿಗೆ ಉದೇವಾರದಿಂದ ಸಕಲೇಶಪುರಕ್ಕೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಜತೆಯಲ್ಲಿದ್ದ ಶಿವಣ್ಣ ಎಂಬುವರು ಇಬ್ಬರಿಗೂ ಸೇರಿಸಿ ಟಿಕೆಟ್ ಪಡೆದುಕೊಂಡಿದ್ದರು.
ಸಕಲೇಶಪುರ ತಲುಪುವ ಮೊದಲೇ ಶಿವಣ್ಣ ಅವರು ಸೇತುವೆ ಸ್ಟಾಪ್ನಲ್ಲಿ ಇಳಿದು ಹೋಗಿದ್ದರು. ಈ ನಡುವ ಇಬ್ಬರ ಟಿಕೆಟ್ ಕೂಡ ಅವರ ಬಳಿಯೇ ಇತ್ತು.
ಇನ್ನು ಅಬ್ದುಲ್ ಹಫೀಜ್ ಅವರು ಹಳೆ ಬಸ್ ನಿಲ್ದಾಣದ ಬಳಿ ಇಳಿಯುವಾಗ, ಅಲ್ಲಿ ಕರ್ತವ್ಯದಲ್ಲಿದ್ದ ಟಿಕೆಟ್ ಚೆಕ್ಕಿಂಗ್ ಇನ್ಸ್ಪೆಕ್ಟರ್ ಸದಾಶಿವ ಎಂಬುವರು ಟಿಕೆಟ್ ಕೇಳಿದ್ದಾರೆ. ಆ ವೇಳೆ ಈ ಎಲ್ಲವನ್ನು ಅಬ್ದುಲ್ ಹಫೀಜ್ ಅವರು ವಿವರಿಸಿದ್ದಾರೆ. ಆದರೆ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದ ತನಿಖಾಧಿಕಾರಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಸಭ್ಯ ವರ್ತನೆ ಮತ್ತು ಹಲ್ಲೆ ಆರೋಪ: ಟಿಕೆಟ್ ನನ್ನ ಜತೆ ಬಂದಿದ್ದವರ ಬಳಿ ಇದೆ ಎಂದು ಅಬ್ದುಲ್ ಹಫೀಜ್ ವಿವರಿಸಲು ಪ್ರಯತ್ನಿಸಿದರೂ, ಸದಾಶಿವ ಅವರು ಅದನ್ನು ಕೇಳಿಸಿಕೊಳ್ಳದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ವಯಸ್ಸಾದವರು ಎಂದು ನೋಡದೆ ಅವರ ಮೇಲೆ ಕೈನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಅಲ್ಲದೆ ಹಲ್ಲೆಯಿಂದ ಗಾಯಗೊಂಡ ಅಬ್ದುಲ್ ಹಫೀಜ್ ಅವರು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಅವರು ನೀಡಿದ ಹೇಳಿಕೆ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕಾನೂನು ಕ್ರಮ: ಈ ಪ್ರಕರಣವು ಅಸಂಜ್ಞೆಯ (Non-Cognizable) ಸ್ವರೂಪದ್ದಾಗಿರುವುದರಿಂದ, ಪೊಲೀಸರು ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದ ನಂತರ, ಈಗ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಜಿ.ಎಸ್.ಸಿ ನಂ 117/2026 ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ತನಿಖಾಧಿಕಾರಿಗಳಿಗೆ ಟಿಕೆಟ್ ತೋರಿಸುವುದು ಕೂಡ ನಮ್ಮ ಕೆಲಸವೆ: ಟಿಕೆಟ್ ಪಡೆದು ಅದನ್ನು ತನಿಖಾಧಿಕಾರಿಗಳು ಚೆಕಿಂಗ್ ವೇಳೆ ಕೇಳಿದಾಗ ತೋರಿಸದಿರುವುದು ಕೂಡ ಇವರ ತಪ್ಪಾಗುತ್ತದೆ. ಇವರಿಗಿಂತ ಮುಂಚೆಯೇ ಇಳಿದ ವ್ಯಕ್ತಿ ಮುಂದೆ ಪ್ರಯಾಣ ಬೆಳೆಸುತ್ತಿದ್ದ ಇವರಿಗೆ ಆ ಟಿಕೆಟ್ ಕೊಡಬೇಕಿತ್ತು. ಆದರೆ, ಆ ಕೆಲಸ ಮಾಡದೆ ಇಳಿದು ಹೋಗಿರುವುದು ಅವರ ತಪ್ಪು. ಅದಕ್ಕೆ ಅಬ್ದುಲ್ ಹಫೀಜ್ ಅವರು ಟಿಕೆಟ್ ಪಡೆದಿಲ್ಲ ಎಂಬುದನ್ನು ಪರಿಗಣಿಸಿ ತನಿಖಾಧಿಕಾರಿಗಳು ದಂಡ ಹಾಕಿದ್ದರೆ ಅದನ್ನು ಇವರು ಕಟ್ಟಬೇಕಿತ್ತು.
ಇಲ್ಲಿ ತನಿಖಾಧಿಕಾರಿಯನ್ನು ಹೊಣೆ ಮಾಡುವುದು ಸರಿಯಲ್ಲ ಹಾಗಂತ ಇವರು ಹಲ್ಲೆ ಮಾಡಿದ್ದರೆ ಅದನ್ನು ನಾವು ಸಮರ್ಥಿಸಿಕೊಳ್ಳುತ್ತಿಲ್ಲ, ಹಲ್ಲೆ ಮಾಡಿದ್ದರೆ ಅದುಕೂಡ ತಪ್ಪೆ. ಈ ಇಬ್ಬರ ಕಡೆಯಿಂದಲೂ ತಪ್ಪಾಗಿದ್ದರೆ ಕಾನೂನಿನಡಿ ಇಬ್ಬರು ಶಿಕ್ಷೆ ಅನುಭವಿಸಲೇಬೇಕು. ಅದನ್ನು ಬಿಟ್ಟು ತನಿಖಾಧಿಕಾರಿಯದೇ ತಪ್ಪು ಎಂಬಂತೆ ಬಿಂಬಿಸುವುದು ಕೂಡ ತಪ್ಪಾಗುತ್ತದೆ. ಇಲ್ಲಿ ಇಬ್ಬರಿಗೂ ನ್ಯಾಯ ಸಿಗಬೇಕಿದೆ.
Related









