NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಮಹಿಳೆಯರ ಉಚಿತ ಪ್ರಯಾಣ -‘ಶಕ್ತಿ’ ಮೀರಿ ಪ್ರಯಾಣಿಸಿದರೆ ಚಾಲನಾ ಸಿಬ್ಬಂದಿ ಮೇಲೆ ಬೀಳಲಿದೆ ಓವರ್ ಲೋಡ್ ಕೇಸ್?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮಂಗಳೂರು: ನಗರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನರ್ಮ್ ಬಸ್‌ಗಳು ಸಂಚರಿಸುತ್ತಿವೆ. ‘ಶಕ್ತಿ’ ಯೋಜನೆಯಿಂದಾಗಿ ಬಸ್‌ಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ಈ ಬಸ್‌ಗಳು ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತವೆ. ಕಡಿಮೆ ಸೀಟು ಸಾಮರ್ಥದ ನರ್ಮ್ ಬಸ್‌ಗಳಲ್ಲಿ ಪ್ರಯಾಣಿಕರ ಓವರ್ ಲೋಡ್, ಫುಟ್ ಬೋರ್ಡ್‌ನಲ್ಲಿ ನಿಲ್ಲುವ ಸಮಸ್ಯೆ ತಲೆದೂರಿದೆ.

ಹೀಗಾಗಿ ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಿಂದ ತುಂಬಿ ತುಳುಕುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಈಗ ಪೊಲೀಸರು ಹಾಕುತ್ತಿರುವ ಓವರ್ ಲೋಡ್ ಕೇಸ್ ಎದುರಿಸಬೇಕಾಗಿದೆ. ಇತ್ತೀಚೆಗೆ ಖಾಸಗಿ ಬಸ್‌ವೊಂದರಲ್ಲಿ ಓವರ್‌ ಲೋಡ್ ಆಗಿ, ತಲಪಾಡಿ ಹಾಗೂ ನಿಟ್ಟೆಯಲ್ಲಿ ಫುಟ್ ಬೋರ್ಡ್‌ನಿಂದ ಕೆಳಕ್ಕೆ ಬಿದ್ದು ಒಬ್ಬ ಮೃತಪಟ್ಟಿದ್ದ. ಇದು ಓವರ್ ಲೋಡ್ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದೇ ಇರುವುದೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೂ ಒಳಗಾಗಿತ್ತು. ಬಳಿಕ, ಪೊಲೀಸರು ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ನರ್ಮ್ ಬಸ್‌ನಲ್ಲಿ ಕುಳಿತುಕೊಳ್ಳುವ ಸಾಮರ್ಥ 30 ಸೀಟು ಇದೆ. ಆದರೆ ಈ ಬಸ್‌ಗಳಲ್ಲಿ 70ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಾರೆ. ಅಲ್ಲದೆ, ಬಸ್‌ನ ಫುಟ್‌ ಬೋರ್ಡ್‌ನಲ್ಲಿ ನಿಂತುಕೊಂಡು ಸಂಚರಿಸುವುದೂ ಇದೆ. ಇದು ಸಂಚಾರಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ.

ಹೀಗಾಗಿ, ಈಗ ಓವರ್ ಲೋಡ್ ಕೇಸ್‌ನ ಎಚ್ಚರಿಕೆ ನೀಡುತ್ತಿದ್ದಾರೆ. ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆಯ ಹೊತ್ತು ನಗರ ಸಾರಿಗೆ ಬಸ್‌ಗಳು ಓವರ್ ಲೋಡಾಗಿ ಸಂಚರಿಸುತ್ತಿವೆ. ತಲಪಾಡಿ, ಮುಡಿಪು ಮಾತ್ರವಲ್ಲ ಧರ್ಮಸ್ಥಳ, ಪುತ್ತೂರು ನಡುವೆ ಸಂಚರಿಸುವ ಬಸ್‌ಗಳೂ ಈ ಹೊತ್ತಿನಲ್ಲಿ ತುಂಬಿ ತುಳುಕುತ್ತಿವೆ.

ಆದ್ದರಿಂದ ಓವರ್‌ ಲೋಡ್‌ ಕಂಡು ಬಂದರೆ ನಿರ್ವಾಹಕರ ಮೇಲೆ ಕೇಸು ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಪೊಲೀಸರ ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ಚಾಲಕ-ನಿರ್ವಾಹಕರು ಓವರ್ ಲೋಡ್‌ಗೆ ಅವಕಾಶ ನೀಡದೆ, ಕೆಲವು ಸ್ಟಾಪ್‌ಗಳಲ್ಲಿ ಬಸ್‌ಗಳನ್ನು ನಿಲ್ಲಿಸದೆ ಓಡಿಸಲು ಯತ್ನಿಸುತ್ತಿದ್ದಾರೆ. ಇದು ಬೆಳಗ್ಗೆ ಮತ್ತು ಸಂಜೆ ವೇಳೆ ಕಚೇರಿ, ಶಾಲಾ ಕಾಲೇಜಿಗೆ ತೆರಳುವವರಿಗೆ ತೊಂದರೆಯಾಗುತ್ತಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಮಂಗಳೂರು ನಗರದ ಹೆಚ್ಚಿನ ರೂಟ್‌ಗಳಲ್ಲಿ ಬಸ್ ಸಂಚಾರಕ್ಕೆ ಪರವಾನಗಿ ನೀಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಕೆಎಸ್‌ಆರ್‌ಟಿಸಿ ಮನವಿ ಸಲ್ಲಿಸಿದೆ. ಆದರೆ, ಹೆಚ್ಚುವರಿ ಬಸ್‌ಗಳು ಇನ್ನೂ ಬಂದಿಲ್ಲ.

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ನಡೆಸುವ ಕಾರ್ಯಾಚರಣೆಗೆ ಕೆಎಸ್‌ಆರ್‌ಟಿಸಿ ಬೆಂಬಲ ವ್ಯಕ್ತಪಡಿಸುತ್ತದೆ. ನಿಗಮದಿಂದಲೂ ಪ್ರತ್ಯೇಕ ತಂಡ ರಚಿಸಿ ನಿಯಮಿತವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಓವರ್ ಲೋಡ್ ಆಗದಂತೆ ಚಾಲಕ-ನಿರ್ವಾಹಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.

ಯಾವುದೇ ವಾಹನಗಳಲ್ಲಿ ಫುಟ್ ಬೋರ್ಡ್‌ಲ್ಲಿ ಪ್ರಯಾಣಿಸಲು ಅವಕಾಶ ಇಲ್ಲ. ಹೀಗಾಗಿ ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ನಿಯಮಾನುಸಾರ ಓವರ್‌ಲೋಡ್ ಕೂಡ ಹಾಕುವಂತಿಲ್ಲ. ಸುರಕ್ಷತೆ ಸಲುವಾಗಿ ಕಠಿಣ ಕ್ರಮ ಅನಿವಾರ್ಯ ಎಂದು ಮಂಗಳೂರು ಸಂಚಾರಿ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಹೇಳಿದ್ದಾರೆ.

ಇನ್ನು ಇಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಓವರ್ ಲೋಡ್ ಆಗದಂತೆ ಚಾಲಕ-ನಿರ್ವಾಹಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ತಿಳಿಸಿರುವುದು ಸ್ವಾಗತಾರ್ಹ. ಆದರೆ ಓವರ್ ಲೋಡ್ ಆಗದಂತೆ ನೋಡಿಕೊಂಡು ಬಸ್‌ ನಿಲ್ಲಿಸದೆ ಹೋಗುವ ಚಾಲನಾ ಸಿಬ್ಬಂದಿಗಳಿಗೆ ದಂಡ ಮೆಮೋ ಕೊಡುವುದನ್ನು ನಿಲ್ಲಿಸಿದರೆ ಅನುಕೂಲವಾಗುತ್ತದೆ ಎಂದು ಚಾಲನಾ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.

1 Comment

  • ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನ ಹಾಕಿದರೆ ಪೋಲೀಸರ ಕಾಟ. ಹೆಚ್ಚಿನ ಪ್ರಯಾಣಿಕರನ್ನು ಕರೆ ತರದಿದ್ದರೆ,ಅವರು ದೂರು ಕೊಟ್ಟರೆ ಈ ತಲೆ ಕೆಟ್ಟ ಅಧಿಕಾರಿಗಳು ಡ್ರೈವರ್, ಕಂಡಕ್ಟರ್ ಮೇಲೆ ಶಿಸ್ತಿನ ಕ್ರಮ ಹೇಗಿದೆ ಸಾರಿಗೆ ಅಧಿಕಾರಿಗಳ ದರ್ಪ. ಈಗೇನೋ ಈ dc ಹೇಳ್ತಾನೆ ನೌಕರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಅಂತ, ಅದೇ ಒಬ್ಬ ತರ್ಲೆ ಬಂದು ಬಸ್ಸು ನಿಲ್ಲಿಸಿಲ್ಲ ಅಂತ ದೂರು ಕೊಟ್ರೆ ಈ ಅವಿವೇಕಿ ಏನ್ ಮಾಡ್ತಾನೆ

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ