ಬೆಂಗಳೂರು: ಕೆಎಸ್ಆರ್ಟಿಸಿ ಆರೋಗ್ಯ ಯೋಜನೆಯಡಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗುವ ಪ್ರಕರಣಗಳಲ್ಲಿ 01.07.2025 ರಿಂದ ಜಾರಿಗೆ ಬರುವಂತೆ ಅರೆ ಖಾಸಗಿ ವಾರ್ಡ್ ಬದಲು ಸಾಮಾನ್ಯ ವಾರ್ಡ್ ಸೌಲಭ್ಯಕ್ಕೆ ಸೀಮಿತ ಮಾಡಲಾಗಿದೆ ಎಂದು ನಿರ್ದೇಶಕರು (ಸಿ&ಜಾ) ತಿಳಿಸಿದ್ದಾರೆ.
ಸಾಮಾನ್ಯ ವಾರ್ಡ್ ಸೌಲಭ್ಯ ಒದಗಿಸಲು 26.06.2025 ರಂದು ನಡೆದ ಕೆಎಸ್ಆರ್ಟಿಸಿ ಆರೋಗ್ಯ ಯೋಜನೆಯ ಮುಖ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಬಗ್ಗೆ ಸಂಸ್ಥೆಯ ಎಲ್ಲ ಇಲಾಖಾ ಮುಖ್ಯಸ್ಥರು, ಎಲ್ಲ ಹಿರಿಯ- ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಕಾರ್ಯ ನಿರ್ವಾಹಕ ಅಭಿಯಂತರರಿಗೆ ಮಾಹಿತಿ ನೀಡಲಾಗಿದೆ.
26.06.2025 ರಂದು ನಡೆದ ಕೆಎಸ್ಆರ್ಟಿಸಿ ಆರೋಗ್ಯ ಮುಖ್ಯ ಸಮಿತಿಯ ಸಭೆಯ ನಿರ್ಣಯದಂತೆ ಸಂಸ್ಥೆಯ ಆರೋಗ್ಯ ಯೋಜನೆಯ ಮುಖ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಈ ವಿಷಯವನ್ನು ತಮ್ಮ ವಿಭಾಗ ವ್ಯಾಪ್ತಿಯ ಮಾನ್ಯತೆ ಹೊಂದಿರುವ ಎಲ್ಲ ಆಸ್ಪತ್ರೆಯವರ ಗಮನಕ್ಕೆ ತಂದು 01.07.2025 ರಿಂದ ಒಳರೋಗಿಯಾಗಿ ದಾಖಲಾಗುವ ಪ್ರಕರಣಗಳಿಗೆ ಸಾಮಾನ್ಯ ವಾರ್ಡ್ ನಲ್ಲಿಯೇ ದರಗಳನ್ನು ವಿಧಿಸುವಂತೆ ತಿಳಿಸಿದ್ದಾರೆ.
ಒಂದು ವೇಳೆ ಸಾಮಾನ್ಯ ವಾರ್ಡ್ಗಿಂತ ಹೆಚ್ಚಿನ ಮಟ್ಟದ ಸೌಲಭ್ಯವನ್ನು ಐಚ್ಛಿಕವಾಗಿ ಪಡೆದುಕೊಂಡಲ್ಲಿ ವ್ಯತ್ಯಾಸದ ಮೊತ್ತವನ್ನು ನೌಕರರಿಂದ ಪಾವತಿಸಿಕೊಳ್ಳುವಂತೆ ತಿಳಿಸಿದ್ದಾರೆ.
ಇನ್ನು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಅಸ್ವಸ್ಥ ಸ್ಥಿತಿಗಳನ್ನು ಹೊಂದಿರುವ ರೋಗಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಮಾಲೋಚನೆಯನ್ನು ಸೀಮಿತಗೊಳಿಸಲು ಮತ್ತು ಮೂರು ತಿಂಗಳವರೆಗೆ ಮಾತ್ರ ಔಷಧಗಳನ್ನು ಶಿಫಾರಸು ಮಾಡಲು ಹಾಗೂ ಈ ಸಂಬಂಧ ಮೂರು ತಿಂಗಳಿಗೊಮ್ಮೆ ಮಾತ್ರ ಸಮಾಲೋಚನಾ ಶುಲ್ಕವನ್ನು ಪಡೆಯಲಾಗುವುದೆಂದು ತಿಳಿಸಲಾಗಿದೆ.
ಇನ್ನು ಮುಂದುವರಿದು, ಈ ಮಾಹಿತಿಯನ್ನು ಸಂಸ್ಥೆಯ ಎಲ್ಲ ನೌಕರರ ಗಮನಕ್ಕೆ ತರಲು ಅಗತ್ಯ ಕ್ರಮವಹಿಸಲು ಸಿಬ್ಬಂದಿ ಜಾಗೃತಾ ವಿಭಾಗದ ನಿರ್ದೇಶಕರು ಸೂಚಿಸಿದ್ದಾರೆ.

Related
