ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್ನಲ್ಲಿ ಅರ್ಜಿ ಹಾಕಿದ್ದು ಆ ಪ್ರಕರಣದ ವಿಚಾರಣೆ ಇಂದು ಹೈ ಕೋರ್ಟ್ ನಡೆದು, ಸೆ.24ಕ್ಕೆ ಮುಂದೂಡಿದೆ.
ಈ ಹಿಂದೆ ಸೆ.3ರಂದು ಪ್ರಕರಣದ ವಿಚಾರಣೆ ನಡೆದಿತ್ತು. ನೌಕರರ ಪರ ವಕೀಲರು ಹಾಗೂ ಸರ್ಕಾರ, ಸಾರಿಗೆ ಆಡಳಿತ ಮಂಡಲಿ ಪರ ವಕೀಲರು ಹಾಜರಾಗಿದ್ದರು. ಈ ವೇಳೆ ನೌಕರರ ಪರ ವಕೀಲರು ಐಎ ಹಾಕಿದ್ದರು. ಬಳಿಕ ಸೆ.10ಕ್ಕೆ ಮುಂದೂಡಲಾಗಿತ್ತು. ಮತ್ತೆ ಸೆ.17ಕ್ಕೆ ಅಂದರೆ ಇಂದು ವಿಚಾರಣೆ ನಡೆಯಿತು.
ಈ ವೇಳೆ ಸಂಸ್ಥೆಯ ಪರ ವಕೀಲರು ನೌಕರರ ಪರ ವಕೀಲರು ಹಾಕಿರುವ ಐಎಗೆ ಆಕ್ಷೇಪಣೆ (Objection) ಸಲ್ಲಿಸಿದ್ದಾರೆ. ಈ ನಡುವೆ ಸೆ.24ಕ್ಕೆ ಪ್ರಕರಣವನ್ನು ಮುಂದೂಡಲಾಗಿದೆ. ಹೀಗಾಗಿ ನೌಕರರ ಪರ ವಕೀಲರಾದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಕೀಲ ಎಚ್.ಬಿ.ಶಿವರಾಜು ನೌಕರರ ವೇತನ ಹೆಚ್ಚಳ ಸಂಬಂಧ ಶತಾಯಗತಾಯ ಕಾನೂನು ಪ್ರಕಾರ ನ್ಯಾಯದೊರಕಿಸಿಕೊಡುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಇನ್ನು ಈ ಪ್ರಕರಣ ತ್ವರಿತವಾಗಿ ಮುಗಿಯಬೇಕು ನೌಕರರಿಗೆ ನ್ಯಾಯಸಿಗಬೇಕು ಎಂದು ಕೋರ್ಟ್ ಕೂಡ ಬಯಸಿದ್ದು ಆ ನಿಟ್ಟಿನಲ್ಲಿ ಹತ್ತಿರ ಹತ್ತಿರದಲ್ಲೇ ಡೇಟ್ ಕೂಡ ಕೊಡುತ್ತಿದೆ ಎಂದು ಹೇಳಬಹುದು. ಇದನ್ನು ಗಮನಿಸಿದರೆ ಕೋರ್ಟ್ ಕೂಡ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಗಮನಿಸುತ್ತಿದೆ ಎನ್ನಬಹುದು. ಆದರೆ, ಕೋರ್ಟ್ ದಾಖಲೆಗಳ ಆಧಾರದ ಮೇಲೆ ತೀರ್ಪುಕೊಡುವುದರಿಂದ ಎಷ್ಟರಮಟ್ಟಿಗೆ ವಾದ ಪ್ರತಿವಾದ ಮಂಡನೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಕರಣವೇನು?: ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಬೇಕಿದ್ದು20 ತಿಂಗಳಗಳು ಕಳೆದರೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ನೌಕರರ ವೇತನ ಹೆಚ್ಚಳ ಸಂಬಂಧ 2025ರ ಮಾರ್ಚ್ 10ರಂದು ಹೈ ಕೋರ್ಟ್ನಲ್ಲಿ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ, ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಮಾಡಿಲ್ಲ. ಹೀಗಾಗಿ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.
Related









