
ಮಡಿಕೇರಿ: ಹೋಮ್ ಸ್ಟೇ ನಿರ್ವಾಹಕನೊಬ್ಬನ ವಿಕೃತಿಯಿಂದಾಗಿ ಮಡಿಕೇರಿ ತೆರಳಿದ್ದ ಪ್ರವಾಸಿಗರು ಇನ್ನಿಲ್ಲದ ಹಿಂಸೆ ಅನುಭವಿಸಿದ್ದಾರೆ. ಈ ಸಂಬಂಧ ಮಡಿಕೆರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಾತ್ರಿಯಿಡಿ ಹಿಂಸೆ ನೀಡಿದೆ ಇಬ್ಬರನ್ನು ಪೊಲೀಸರು ಬಂಧಿಸಿ ಕಂಬಿಹಿಂದೆ ತಳ್ಳಿದ್ದಾರೆ.
ಬೆಂಗಳೂರು ಮೂಲದ ಮಮತಾ ಎಂಬುವರು ತಮ್ಮ ಮಗಳ ಜೊತೆ ಸಮಯ ಸಿಕ್ಕಾಗಲೆಲ್ಲ ಪ್ರವಾಸ ಹೋಗುವುದನ್ನು ಹವ್ಯಾಸವಾಗಿಸಿಕೊಂಡಿದ್ದು, ಅದರಂತೆ ಈ ಬಾರಿ ಊಟಿಗೆ ತೆರಳಿ ಬಳಿಕ ಮಡಿಕೇರಿಯಲ್ಲಿ ಕೆಲವು ದಿನಗಳ ಕಾಲ ತಂಗಲು ಬಂದಿದ್ದರು.
ಹೀಗಾಗಿ ಮಡಿಕೇರಿ ನಗರದ ಈಶ್ವರ ನಿಲಯ ಎಂಬ ಹೋಂ ಸ್ಟೇಯಲ್ಲಿ ಶನಿವಾರ (ಏ.5) ರ ರಾತ್ರಿ ತಂಗಿದ್ದರು. ಈ ವೇಳೆ ನಸುಕಿನ ಜಾವ 3 ಗಂಟೆ ಸುಮಾರಿಗೆ ಹೋಂಸ್ಟೇ ನಿರ್ವಾಹಕ ಪ್ರವೀಣ್ ಎಂಬಾತ ತನ್ನ ಮತ್ತೊಬ್ಬ ಸಹಚರನೊಂದಿಗೆ ಬಂದು ಮಮತಾ ಅವರು ಇದ್ದ ಕೋಣೆಯ ಬಾಗಿಲು ಬಡಿದಿದ್ದಾನೆ. ಬಾಗಿಲು ತೆಗೆಯುವಂತೆ ಕಿರುಚಿದ್ದಾನೆ. ಇಬ್ಬರು ಮಹಿಳೆಯರೇ ಇದ್ದಿದ್ದರಿಂದ ಅವರು ಬಾಗಿಲು ತಗೆದಿಲ್ಲ.
ಆದರೆ, ಹಠ ಬಿಡದ ಪ್ರವೀಣ್ ನಾಲ್ಕು ಗಂಟೆಯವರೆಗೂ ಬಾಗಿಲು ಬಡಿದು ಬೆದರಿಕೆ ಹಾಕಿದ್ದಾನೆ. ಬಾಗಿಲು ತಗೆಯದೆ ಇದ್ದರೇ ಬಾಗಿಲು ಮುರಿದು ಒಳಗೆ ಬರುವುದಾಗಿ ಬೆದರಿಸಿದ್ದಾನೆ. ಮಮತಾ ತೀವ್ರ ಭಯಗೊಂಡು ಬಾಗಿಲನ್ನು ಇನ್ನಷ್ಟು ಭದ್ರ ಮಾಡಿಕೊಂಡು ತೆಗೆಯದೆ ಒಳಗೇ ಉಳಿದಿದ್ದಾರೆ.
ಇನ್ನು ಬೆಳಕಾದ ಮೇಲೆ ಬಾಗಿಲು ತೆಗೆದು ಹೊರಗೆ ಬಂದು ತಮ್ಮ ಕಾರನ್ನು ನೋಡಿರೆ ಕಾರಿನ ನಾಲ್ಕೂ ಚಕ್ರಗಳನ್ನು ಡ್ಯಾಮೇಜ್ ಮಾಡಿ ಗಾಳಿ ತೆಗೆದಿದ್ದಾರೆ ಕಿರಾತಕರು. ಇದರಿಂದಲೂ ಕೋಪಗೊಂಡ ಮಮತಾ, ಮಡಿಕೇರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾದ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಿಳೆಗೆ ಕಿರುಕುಳ ನೀಡಿದ ಆರೋಪಿ ಪ್ರವೀಣ್ ಮತ್ತು ಆತನ ಸಹಚರ ಬಾಬು ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇನ್ನು ಹೋಂಸ್ಟೇ ಮಾಲೀಕ ಕಾವೇರಪ್ಪ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಇತ್ತ ಆರೋಪಿ ಪ್ರವೀಣ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಆತನ ಮೇಲೆ ಈಗಾಗಲೇ ರೌಡಿಶೀಟರ್ ತೆರೆಯಲಾಗಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ. ಸದ್ಯ, ಈ ಹೋಂಸ್ಟೇಯ ಲೈಸೆನ್ಸ್ ರದ್ದತಿ ಮಾಡಲು ಪೊಲಿಸ್ ಇಲಾಖೆ ಪ್ರವಾಸೋಧ್ಯಮ ಇಲಾಖೆಗೆ ಪತ್ರ ಬರೆದಿದೆ.
ಇನ್ನು ಕೊಪ್ಪಳದಲ್ಲಿ ಪ್ರವಾಸಿಗರ ಮೇಲೆ ದೌರ್ಜನ್ಯ ನಡೆದ ಬಳಿಕ ಎಲ್ಲ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಗರಿಷ್ಟ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸೂಚಿಸಿದ್ದರು. ಪ್ರವಾಸಿಗರಿಗೆ ಹೋಂಸ್ಟೇ ನಿರ್ವಾಹಕರು ಈ ರೀತಿ ಹಿಂಸೆ ನೀಡಿದ್ರೆ ಪ್ರವಾಸಕ್ಕೆ ಬರುವುದಾದರೂ ಹೇಗೆ ಎಂಬ ಪ್ರಶ್ನೆ ಪ್ರವಾಸಿಗರನ್ನು ಕಾಡುತ್ತಿದೆ.
