NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ಸಾಮಾನ್ಯ ಮರಣ ಪ್ರಕರಣಕ್ಕಿದ್ದ 10 ಲಕ್ಷ ರೂ. ಪರಿಹಾರ ಮೊತ್ತ 14 ಲಕ್ಷ ರೂ.ಗಳಿಗೆ ಏರಿಸಿ ಎಂಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ
  • ಪರಿಷ್ಕರಿಸಿದ 14 ಲಕ್ಷ ರೂ. ಪರಿಹಾರ ಮೊತ್ತ ಸೆಪ್ಟೆಂಬರ್‌ 1-2025ರಿಂದ ಜಾರಿ

ಬೆಂಗಳೂರು: 10 ಲಕ್ಷ ರೂ.ಗಳಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಮೊತ್ತವನ್ನು 14 ಲಕ್ಷ ರೂ.ಗಳಿಗೆ ಪರಿಷ್ಕರಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಗೆ ಸಹಮತಿ ನೀಡಿರುವ ಎಲ್ಲ ಸದಸ್ಯ ನೌಕರರು/ಅಧಿಕಾರಿಗಳಿಂದ 350 ರೂ.ಗಳ ವಂತಿಕೆಯನ್ನು ಪಡೆದು ನಿಗಮದ ವತಿಯಿಂದ ಪ್ರತಿ ಸದಸ್ಯ ನೌಕರನಿಗೆ 150 ರೂ.ಗಳ ವಂತಿಗೆಯನ್ನು ನೀಡಲಾಗುತ್ತಿದೆ.

ಈ ಯೋಜನೆಯಡಿ ಸಾಮಾನ್ಯ ಮರಣ ಪ್ರಕರಣಗಳಲ್ಲಿ ಅವರ ನಾಮನಿರ್ದೇಶಿತರಿಗೆ 10 ಲಕ್ಷ ರೂ.ಗಳು ಹಾಗೂ ಅಪಘಾತದಿಂದ ಮರಣ ಹೊಂದಿದಲ್ಲಿ 50 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ನೀಡಲಾಗುತ್ತಿದೆ. ಆದರೆ, ಸೆ.1ರಿಂದ 10 ಲಕ್ಷ ರೂ.ಗಳ ಬದಲಿಗೆ 14 ಲಕ್ಷ ರೂ.ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಇದರ ಜತೆಗೆ ಸೇವೆಯಲ್ಲಿರುವ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅವರೊಂದಿಗೆ 50 ಲಕ್ಷ ರೂ.ಗಳ ವೇತನ ಆಧಾರಿತ (CSP) ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ನವೆಂಬರ್-2022 ರಿಂದ ಜಾರಿಗೆ ತರಲಾಗಿದೆ.

ಇನ್ನು 16.01.2025 ರಂದು ಪರಿಷ್ಕೃತ ಒಡಂಬಡಿಕೆಯನ್ನು ಮಾಡಿಕೊಂಡು ಪ್ರಸ್ತುತ ಅಪಘಾತದಿಂದ ಸಂಭವಿಸುವ ಮರಣ ಪ್ರಕರಣಗಳಿಗೆ ಒಂದು ಕೋಟಿ ರೂ.ಗಳ ಅಪಘಾತ ವಿಮೆಯನ್ನು SBIಯಿಂದಲೇ ಜಾರಿಗೊಳಿಸಲಾಗಿದೆ. ಆದುದರಿಂದ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡುತ್ತಿದ್ದ 50 ರೂ. ಲಕ್ಷ ರೂ.ಗಳ ಅಪಘಾತ ಪರಿಹಾರ ಮೊತ್ತವನ್ನು 16.01.2025 ರಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ವಾರ್ಷಿಕ ಅಂದಾಜು 10 ಅಪಘಾತ ಮರಣ ಪ್ರಕರಣಗಳಿಗೆ ನೀಡುತ್ತಿದ್ದ ತಲಾ 50 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ಸ್ಥಗಿತಗೊಳಿಸಿ, ವಾರ್ಷಿಕ ಅಂದಾಜು 144 ಸಾಮಾನ್ಯ ಮರಣ ಪ್ರಕರಣಗಳಿಗೆ ತಲಾ 10 ಲಕ್ಷ ರೂ.ಗಳಿಂದ 14 ಲಕ್ಷ ರೂ. ಗಳಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಇನ್ನು ಅಪಘಾತ ಹೊರತುಪಡಿಸಿ ಇತರೇ ಯಾವುದೇ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು 10 (ಹತ್ತು ಲಕ್ಷ ರೂಪಾಯಿಗಳು) ಲಕ್ಷ ರೂ.ಗಳಿಂದ 14 ಲಕ್ಷ ರೂ.ಗಳಿಗೆ (ಹದಿನಾಲ್ಕು ಲಕ್ಷ ರೂಪಾಯಿಗಳು) ಹೆಚ್ಚಿಸಿ, ಪರಿಷ್ಕರಿಸಲಾಗಿದೆ. ಅಪಘಾತ ಮರಣ ಪ್ರಕರಣಗಳಲ್ಲಿ ನೀಡಲಾಗುತ್ತಿದ್ದ 50 ಲಕ್ಷ ರೂ.ಗಳ ಅಪಘಾತ ಪರಿಹಾರ ಮೊತ್ತವನ್ನು 16.01.2025 ರಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಈ ನಡುವೆ ನೌಕರರ ಮಾಸಿಕ ವಂತಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾಮಾನ್ಯ ಮರಣ ಪ್ರಕರಣಗಳ ಪರಿಷ್ಕೃತ ಪರಿಹಾರ ಮೊತ್ತ 14 ಲಕ್ಷ ರೂ.ಗಳು 01.09.2025 ರಿಂದ ಜಾರಿಗೆ ಬರುವಂತೆ ಮುಂದುವರಿದ ಸಾಮಾನ್ಯ ಮರಣ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಉಳಿದಂತೆ ಈ ಯೋಜನೆಯ ಅನುಷ್ಠಾನ ಸಂಬಂಧ ಹೊರಡಿಸಿರುವ ಸುತ್ತೋಲೆಗಳಲ್ಲಿ ನೀಡಿರುವ ನಿರ್ದೇಶನಗಳಲ್ಲಿ ಯಾವುದೇ ಬದಲಾವಣೆಗಳು ಇಲ್ಲ ಎಂದು ಎಂಡಿ ಅಕ್ರಂ ಪಾಷ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!