NEWSನಮ್ಮಜಿಲ್ಲೆನಮ್ಮರಾಜ್ಯ

ಸೆ.4ರಂದು ಸರ್ವ ಸಾರಿಗೆ ಸಂಘಟನೆಗಳ ಸಭೆ: ನೌಕರರ ಸಮಸ್ಯೆ ನೀಗಿಸಲು ಒಗ್ಗೂಡುತ್ತಿವೆಯೇ ಸಂಘಟನೆಗಳು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ನಡೆದು 5ತಿಂಗಳುಗಳಾದರೂ ಆ ವೇಳೆ ನೌಕರರಿಗೆ ಅಗಿರುವ ತೊಂದರೆ ಸರಿಪಡಿಸಲು ಇನ್ನೂ ವಿಳಂಬವಾಗುತ್ತಿದೆ. ಹೀಗಾಗಿ ಸಂಸ್ಥೆಯ ಎಲ್ಲ ಸಂಘಟನೆಗಳ ಮುಖಂಡರು ಸೆ.4ರಂದು ಒಗ್ಗೂಡುತ್ತಿದ್ದಾರೆ ಎಂಬ ಬಗ್ಗೆ ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ.

ಸಾರಿಗೆಯ ನಾಲ್ಕೂ ನಿಗಮದ ಸಮಸ್ತ ನೌಕರರು ಒಗ್ಗೂಡಿ ಸಾರಿಗೆ ಮುಷ್ಕರ ನಡೆಸಿ ಹಲವು ತಿಂಗಳುಗಳು ಕಳೆದಿವೆ. ಈ ಮಧ್ಯೆ ಸಂಸ್ಥೆಯಲ್ಲಿರುವ ಎಲ್ಲ ಸಂಘಟನೆಗಳು ಹಲವಾರು ರೀತಿಯಲ್ಲಿ ಪ್ರಯತ್ನಪಟ್ಟರು ಮುಷ್ಕರದ ಸಮಯದಲ್ಲಿ ವಜಾ, ಅಮಾನತು, ವರ್ಗಾವಣೆ ಹಾಗೂ ಪೊಲೀಸ್ ಪ್ರಕರಣಗಳಾಗಿರುವುದಕ್ಕೆ ಪರಿಹಾರ ನೀಡುವಲ್ಲಿ ಸರ್ಕಾರ ಮತ್ತು ಸಾರಿಗೆ ಅಧಿಕಾರಿಗಳು ವಿಳಂಬನೀತಿ ಅನುಸರಿಸಿದ್ದಾರೆ.

ಹೀಗಾಗಿ ಸಾವಿರಾರು ನೌಕರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಳಂಬವಾಗುತ್ತಿದೆ. ಆಡಳಿತ ಮಂಡಳಿ ಆಗಬಹುದು ಇಲ್ಲ ಸರ್ಕಾರ ವಾಗಬಹುದು ಸಂಘಟನೆಯ ನಾಯಕರು ಭೇಟಿಯಾದಂತಹ ಸಂದರ್ಭದಲ್ಲಿ ಎಲ್ಲವನ್ನು ಸರಿಪಡಿಸುತ್ತೇವೆ, ಮಾಡಿಕೊಡುತ್ತೇವೆ ಎಂಬ ಭರವಸೆಯೊಂದಿಗೆ ಐದು ತಿಂಗಳು ಕಳೆದಿದ್ದಾರೆ. ಆದರೇ ಈವರೆಗೂ ಏನೊಂದು ಕೆಲಸವೂ ಆಗಿಲ್ಲ.

ಐದು ತಿಂಗಳಿನಿಂದಲೂ ಬರಿ ಭರವಸೆಗಳನ್ನೂ ನೀಡಿದ್ದಾರೆಯೇ ಹೊರತು ನೌಕರರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಈ ನಡುವೆ ನೌಕರರಿಗೆ ನ್ಯಾಯ ಸಿಗುವುದು ಇನ್ನೂ ತುಂಬಾ ವಿಳಂಬವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆದ್ದರಿಂದ ಈ ಎಲ್ಲ ವಿಚಾರವಾಗಿ ಚರ್ಚಿಸಿ ನೌಕರರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸಾರಿಗೆ ಸಂಸ್ಥೆಯಲ್ಲಿರುವ ಎಲ್ಲ ಸಂಘಟನೆಯ ಮುಖಂಡರು ಹಾಗೂ ನಾಲ್ಕೂ ನಿಗಮಗಳ ನೌಕರರು ಒಗ್ಗೂಡಿ ಒಂದು ಸಭೆ ಸೇರಬೇಕೆಂದು ತೀರ್ಮಾನಿಸಿದ್ದಾರೆ.

ಹಾಗಾಗಿ ಇದೇ ಸೆಪ್ಟಂಬರ್ 4ರ ಶನಿವಾರದಂದು ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಬೆಂಗಳೂರಿನ ಟೌನ್ ಹಾಲ್ ಹಿಂಭಾಗವಿರುವ ಎಸ್ಸಿ ಎಸ್ಟಿ ಸಮುದಾಯ ಭವನದಲ್ಲಿ ಸಭೆ ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ ಸಮಸ್ಯೆಗಳಿಗೆ ಒಳಗಾಗಿರುವ ಸಾರಿಗೆ ನೌಕರರ ಒಳಿತಿಗಾಗಿ ಸಂಸ್ಥೆಯಲ್ಲಿರುವ ಎಲ್ಲ ಸಂಘಟನೆಯ ಪ್ರಮುಖರು ಸಹ ಭಾಗವಹಿಸಿ ಒಗ್ಗಟ್ಟಾಗಿ ನ್ಯಾಯ ದೊರಕಿಸಿಕೊಳ್ಳುವ ಬಗ್ಗೆ ಚರ್ಚಿಸಬೇಕಿದೆ.

ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ನಿರ್ಧರಿಸುವುದನ್ನು ಸಾಮೂಹಿಕವಾಗಿ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಈ ಸಲುವಾಗಿ ಎಲ್ಲರೂ ಒಗ್ಗೂಡಿ ಸಭೆಗೆ ಹಾಜರಾಗುವುದು ಪ್ರಮುಖವಾಗಿದೆ.

Advertisement

ಪತ್ರದ ಮೂಲಕ ವ್ಯವಹಾರ ನಡೆಸಲು ಸಮಯದ ಅಭಾವವಿರುವುದರಿಂದ ಹಲವಾರು ಸಂಘಟನೆಯ ನಾಯಕರಿಗೆ ದೂರವಾಣಿ ಕರೆ ಮಾಡಲು ನಿರ್ಧರಿಸಿದ್ದೇವೆ. ನಮಗೆ ದೂರವಾಣಿ ಕರೆ ಬಂದಿಲ್ಲವೆಂದು ಯಾವ ನಾಯಕರು ಹಿಂದೆ ಸರಿಯದೆ, ಈ ಮೆಸೇಜನ್ನು ನೋಡಿ ನೌಕರರ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಎಲ್ಲರೂ ಬರಬೇಕೆಂದು ನೊಂದ ನೌಕರರು ಕೇಳಿಕೊಂಡಿದ್ದಾರೆ.

ಈ ಸಭೆ ಸೇರುವುದು ಪ್ರಮುಖವಾಗಿದೆ. ಕಾರಣ ಇದೇ ತಿಂಗಳ 13ರಿಂದ ವಿಧಾನಸಭಾ ಅಧಿವೇಶನವು ಪ್ರಾರಂಭವಾಗುತ್ತಿದ್ದು, ಕನಿಷ್ಠಪಕ್ಷ ಅಲ್ಲಿಯಾದರೂ ಈ ವಿಷಯ ಚರ್ಚೆಗೆ ಬಂದು ನಮ್ಮ ನೌಕರರ ಸಮಸ್ಯೆಗಳು ಬಗೆಹರಿಯಲಿ ಎಂಬುವುದು ನಮ್ಮ ಉದ್ದೇಶವಾಗಿದೆ ಎಂದು ತೊಂದರೆಗೆ ಸಿಲುಕಿರುವ ನೌಕರರು ತಿಳಿಸಿದ್ದಾರೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!