ಮೈಸೂರು-ಮನಕಲಕುವ ಘಟನೆ: ಆಸ್ಪತ್ರೆ ಬಿಲ್ ಕಟ್ಟಲು ಗ್ರಾಮದ ಯುವಕರು, ಸಂಬಂಧಿಕರ ಜತೆ ಭಿಕ್ಷೆ ಬೇಡಿದ ಕುಟುಂಬ

ಮೈಸೂರು: ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದಲ್ಲೊಂದು ಮನಕಲಕುವ ಘಟನೆ ನಡೆದಿದೆ. ಆಸ್ಪತ್ರೆಯ ಬಿಲ್ ಕಟ್ಟಲು ಗ್ರಾಮದ ಯುವಕರು, ಸಂಬಂಧಿಕರ ಜೊತೆ ಸೇರಿ ಕುಟುಂಬವೊಂದು ಭಿಕ್ಷೆ ಬೇಡಿದೆ.
ಹೌದು. ಇದೇ ತಿಂಗಳ 2ರಂದು ಬದನವಾಳು ಬಳಿ 2 ಬೈಕ್ ನಡುವೆ ಅಪಘಾತ ಆಗಿದ್ದು, 6 ಜನ ಗಾಯಗೊಂಡಿದ್ದರು. ಅದರಲ್ಲಿ ಒಂದೇ ಕುಟುಂಬದ ತಂದೆ ಮಹೇಶ್ (38) ತಾಯಿ ರಾಣಿ (32) ಹಾಗೂ ಮಗಳು ಆದ್ಯ (5) ಗಾಯಗೊಂಡಿದ್ದರು.
ತಾಯಿ, ಮಗು ಒಂದೆಡೆ, ತಂದೆ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸದ್ಯ ಮಗು ಆದ್ಯಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 3 ದಿನದ ಚಿಕಿತ್ಸೆಗೆ 1,80,000 ರೂ. ಬಿಲ್ ಕಟ್ಟಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.
ಮಗು ನೋಡಬೇಕು, ವೆಂಟಿಲೇಟರ್ನಿಂದ ಹೊರ ತೆಗೆಯಬೇಕು ಅಂದರೆ ಮೊದಲು ಬಿಲ್ ಕಟ್ಟಿ ಅಂತಿದ್ದಾರೆ ಅಂತ ಸಂಬಂಧಿಕರು ಆರೋಪಿಸಿದ್ದಾರೆ. ಕೂಲಿ ಮಾಡುವ ಕುಟುಂಬಕ್ಕೆ ಅಷ್ಟು ಹಣ ನೀಡಲು ಆಗದ ಕಾರಣ ಬಡ ಕುಟುಂಬದ ನೆರವಿಗೆ ಬಂದ ಗ್ರಾಮದ ಯುವಕರು, ಸಂಬಂಧಿಕರು ಭಿಕ್ಷೆ ಬೇಡಿದ್ದಾರೆ.
ಮಗುವಿನ ದೊಡ್ಡಮ್ಮ ಮಂಗಳ ಎಂಬುವರು ಭಿಕ್ಷೆ ಬೇಡೋ ವಿಡಿಯೋ ವೈರಲ್ ಆಗಿದೆ. ಈ ನಡುವೆ ಖಾಸಗಿ ಆಸ್ಪತ್ರೆ (ಬೃಂದಾವನ) ಆಡಳಿತ ಮಂಡಳಿಯ ಖಂಡೇಶ್ ಎಂಬುವರು ಸ್ಪಷ್ಟನೆ ನೀಡಿದ್ದು, ಆಸ್ಪತ್ರೆಗೆ ಬಂದಾಗ ಇಲ್ಲಿನ ಚಿಕಿತ್ಸಾ ವೆಚ್ಚದ ಬಗ್ಗೆ ತಿಳಿಸಲಾಗಿತ್ತು. ಅವರು ಅದಕ್ಕೆ ಒಪ್ಪಿದ್ದರು. ಆ ಕುಟುಂಬದ ಆರ್ಥಿಕ ಪರಿಸ್ಥಿತಿ ನಮಗೆ ಗೊತ್ತಿರಲಿಲ್ಲ.
ಇನ್ನು ಭಿಕ್ಷೆ ಬೇಡಿ ಹಣ ತಂದಿದ್ದಾರೆ ಎಂಬುದು ನಮಗೆ ವಿಡಿಯೋ ಮೂಲಕ ತಿಳಿಯಿತು. ಹೀಗಾಗಿ ಈ ವಿಡಿಯೋ ನೋಡಿ ನಾವು ರಿಯಾಯಿತಿ ಕೊಡಲು ತೀರ್ಮಾನ ಮಾಡಿದ್ದೇವೆ. ಮಗು ಐಸಿಯುನಲ್ಲಿದ್ದರೂ ಡಿಸ್ಚಾರ್ಜ್ ಮಾಡಿ ಎನ್ನುತ್ತಿದ್ದಾರೆ ಅಂತ ಖಂಡೇಶ್ ಹೇಳಿದ್ದಾರೆ.

Related








