NEWSನಮ್ಮಜಿಲ್ಲೆಮೈಸೂರು

ಮೈಸೂರು: ಶೀಘ್ರದಲ್ಲೇ ಕಬಿನಿ ನೀರು ಹೊರ ವಲಯ ಬಡಾವಣೆಗಳಿಗೆ ಪೂರೈಕೆ: ಶಾಸಕ ಜಿಟಿಡಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಶೀಘ್ರದಲ್ಲೇ ಕಬಿನಿ ನದಿಯಿಂದ ನಗರದ ಹೊರ ವಲಯ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ರೂಪಾ ನಗರದಲ್ಲಿ ಸ್ಥಳೀಯ ನಿವಾಸಿಗಳ ಸಂಘ ಆಯೋಜಿಸಿದ್ದ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಸಸಿ ವಿತರಿಸಿ, ನಮ್ಮ ವನದಲ್ಲಿ ಸಸಿಗಳನ್ನು ನೆಟ್ಟ ಬಳಿಕ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಚಾಮುಂಡೇಶ್ವರಿ ಕ್ಷೇತ್ರ ಹೊರಗಿನವರಿಗೆ ಯಾರಿಗೂ ಪರಿಚಯವಿಲ್ಲ. ಚಾಮರಾಜ, ನರಸಿಂಹರಾಜ, ಕೃಷ್ಣರಾಜ ಮೂರು ಕ್ಷೇತ್ರಗಳು ರಿಂಗ್ ರಸ್ತೆ ಒಳಗೆ ಇದ್ದರೆ, ಚಾಮುಂಡೇಶ್ವರಿ ಕ್ಷೇತ್ರ ಒಳಗೆ ಮತ್ತು ಹೊರಗೆ ಇರುವ ಜತೆಗೆ ನಾಲ್ಕು ದಿಕ್ಕುಗಳಲ್ಲೂ ಹೊಂದಿದೆ. ಒಂದು ನಗರಸಭೆ, ನಾಲ್ಕು ಪಟ್ಟಣ ಪಂಚಾಯಿತಿ, ಐದು ನಗರಪಾಲಿಕೆ ವಾರ್ಡ್‍ಗಳು ಸೇರಿದಂತೆ 40 ಕಿ.ಮೀ ಪ್ರದೇಶ ಹೊಂದಿರುವ ಕ್ಷೇತ್ರ ಇದ್ದರೆ ಅದು ಚಾಮುಂಡೇಶ್ವರಿ ಕ್ಷೇತ್ರ ಮಾತ್ರ ಎಂದರು.

ಮೈಸೂರು ನಗರದ ಬಡಾವಣೆಗಳು ಇಂದು ಸಾಕಷ್ಟು ಬೆಳೆದಿವೆ. ಗ್ರಾಮಾಂತರ ಪ್ರದೇಶಗಳಿಂದ ಬಂದವರು ಮಕ್ಕಳನ್ನು ಓದಿಸಲು ಅಥವಾ ನೆಮ್ಮದಿಯ ಜೀವನ ಕಂಡುಕೊಳ್ಳಲು ರೂಪಾನಗರ ಸೇರಿದಂತೆ ಅನೇಕ ಬಡಾವಣೆಗಳಿಗೆ ಬಂದು ನಗರದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.

ನಿವೇಶನ ಖರೀದಿಸಿ ಮನೆ ಕಟ್ಟಿಸಿದ್ದಾರೆ. ಬಡಾವಣೆಗಳನ್ನು ರಚನೆ ಮಾಡಿದ ಮಾಲೀಕರು ಸರಿಯಾದ ರೀತಿಯಲ್ಲಿ ಯುಜಿಡಿ, ಸೆಫ್ಟಿಕ್ ಟ್ಯಾಂಕ್, ರಸ್ತೆ, ವಿದ್ಯುತ್ ವ್ಯವಸ್ಥೆ ಮಾಡದೆ ನಿವೇಶನ ಹಂಚಿಕೆ ಮಾಡಿ ಕೈ ತೊಳೆದುಕೊಂಡರು. ಮಾಲೀಕರು ನಿವೇಶನ ಮಾರಿ ಹಣ ಮಾಡಿಕೊಂಡರೆ, ಖರೀದಿಸಿದವರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ಹಳೆಯ ಉಂಡುವಾಡಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ನಡೆಸಿದ ಶ್ರಮ ನನಗೆ ಗೊತ್ತು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಚಿವ ಸಂಪುಟ ಸಭೆಗೆ ಅಂದಿನ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಐಎಸ್‍ಎನ್ ಪ್ರಸಾದ್ ಯೋಜನೆಯ ವಿಷಯ ಮಂಡನೆ ಮಾಡದಿದ್ದಾಗ ಗಲಾಟೆ ಮಾಡಿ ಚರ್ಚೆಗೆ ತರಲಾಯಿತು. ಈಗ 26 ಟ್ಯಾಂಕ್‍ಗಳ ನಿರ್ಮಾಣ ನಡೆಯುತ್ತಿದೆ. ಪೈಪ್‍ಲೈನ್ ಕಾಮಗಾರಿ ಶುರುವಾಗಿದೆ ಎಂದು ಹೇಳಿದರು.

ಯುಜಿಡಿ ಕಾಮಗಾರಿಗೆ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಟೆಂಡರ್‍ಪ್ರಕ್ರಿಯೆ ನಡೆಯುತ್ತಿದೆ. ರೂಪಾನಗರಕ್ಕೆ ಸಂಬಂಧಿಸಿದಂತೆ ಮೂರು ಎಕರೆ ಖರೀದಿಸಿ ಸೆಫ್ಟಿಂಕ್ ಟ್ಯಾಂಕ್ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮರಗಳನ್ನು ಬೆಳೆಸಬೇಕು: ಬಡಾವಣೆಗಳಲ್ಲಿ ಮರಗಿಡಗಳನ್ನು ಬೆಳೆಸಿ ಪೋಷಿಸಬೇಕು. ಮರ ಇದ್ದರೆ ಪ್ರಕೃತಿ ಉಳಿಯಲಿದೆ. ಹಾಗಾಗಿ, ಸಾರ್ವಜನಿಕರು ಹೆಚ್ಚು ಗಿಡಗಳನ್ನು ನೆಡಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಮೊದಲು ಕುಂಟುಬಿಲ್ಲೆ ಅಟ, ರಿಂಗ್ ಆಟ, ಬುಗುರಿ ಆಟಗಳನ್ನು ಆಡುತ್ತಿದ್ದರು. ಶಾಲೆಗಳಲ್ಲೂ ಅಂತಹ ಕ್ರೀಡೆಗಳು ಶಾಲೆಗಳಲ್ಲಿ ಇರುತ್ತಿದ್ದವು. ಈಗ ಕ್ರಿಕೆಟ್, ಫುಟ್‍ಬಾಲ್ ಬಿಟ್ಟರೆ ಬೇರೆ ಆಟಗಳನ್ನು ಮರೆಯುವಂತಾಗಿದೆ ಎಂದರು.

ಅಧ್ಯಕ್ಷತೆಯನ್ನು ಎನ್‍ಆರ್ WA ಅಧ್ಯಕ್ಷ ಎಂ.ಎನ್.ನರಸಿಂಹಮೂರ್ತಿ ವಹಿಸಿದ್ದರು. ಸಮಾರಂಭದಲ್ಲಿ ಸೋಮಿಜಿ, ರವಿಕುಮರ್, ದಾಸನಕೊಪ್ಪಲು ದೇವರಾಜು, ಹರೀಶ್, ಸಿದ್ದು, ಕಿರಣ್, ಪ್ರವೀಣ್ ಇದ್ದರು.

Megha
the authorMegha

Leave a Reply

error: Content is protected !!