NEWSನಮ್ಮಜಿಲ್ಲೆಬೆಂಗಳೂರು

ನಾಗರಿಕರಿಗೆ ತ್ವರಿತವಾಗಿ ಸ್ಪಂದಿಸಿ: 5 ನಗರ ಪಾಲಿಕೆಗಳ ಆಯುಕ್ತರಿಗೆ ತುಷಾರ್ ಗಿರಿನಾಥ್ ಸೂಚನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಎಲ್ಲ ವಿಭಾಗಗಳ ಕುರಿತು ಸಮಗ್ರ ಪರಿಚಯ ಹಾಗೂ ವಿಶೇಷವಾಗಿ 3 ವಿಷಯಗಳಾದ ರಸ್ತೆ ಗುಂಡಿ, ಬೀದಿ ದೀಪ ಹಾಗೂ ಕಸದ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 5 ನಗರ ಪಾಲಿಕೆಗಳ ಅಧಿಕಾರಿಗಳ ಜೊತೆ ಇಂದು ಮಲ್ಲೇಶ್ವರಂನ ಐಪಿಪಿ ಕೇಂದ್ರದಲ್ಲಿ ಮೊದಲ ಸಭೆ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಾಗರಿಕರಿಗೆ ಉತ್ತಮ ಆಡಳಿತ ಹಾಗೂ ಪರಿಣಾಮಕಾರಿಯಾಗಿ ಯೋಜನೆಗಳನ್ನು ಜಾರಿಗೊಳಿಸುವ ಸಲುವಾಗಿ ಜಿಬಿಎ ಜಾರಿಗೆ ತಂದು 5 ನಗರ ಪಾಲಿಕೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಹೊಸದಾಗಿ ನೇಮಕಗೊಂಡ ಎಲ್ಲ ಅಧಿಕಾರಿಗಳಿಗೂ ಎಲ್ಲ ರೀತಿಯ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಲಾಗುವುದೆಂದು ತಿಳಿಸಿದರು.

ಆಯಾ ನಗರ ಪಾಲಿಕೆಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅವುಗಳನ್ನು ಕಾಲಮಿತಿಯೊಳಗಾಗಿ ಬಗೆಹರಿಸುವ ಕೆಲಸ ಮಾಡಬೇಕು. ಸಾಮಾನ್ಯವಾಗಿ ರಸ್ತೆ ಗುಂಡಿ ಮುಚ್ಚುವುದು, ಬೀದಿ ದೀಪಗಳ ಅಳವಡಿಕೆ, ತ್ಯಾಜ್ಯ ಸಮಸ್ಯೆ ಪರಿಣಾಮಕಾರಿಯಾಗಿ ಬಗೆಹರಿಸಿದರೆ ಬಹುತೇಕ ಸಮಸ್ಯೆ ಬಗೆಹರಿಸಿದಂತೆ. ಜೊತೆಗೆ ನಾಗರಿಕರಿಗೆ ಸ್ಪಂದಿಸುವ ಕೆಲಸ ಕೆಲಸ ಮಾಡಬೇಕೆಂದು ಹೇಳಿದರು.

ನಗರದಲ್ಲಿ ಕಸದ ಸಮಸ್ಯೆ ನಿವಾರಣೆಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತವು 5 ನಗರ ಪಾಲಿಕೆಗಳ ಜೊತೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದೆ. ಬೆಂಗಳೂರು ಅತೀ ಮುಖ್ಯವಾದ ಸ್ಥಳವಾಗಿದ್ದು, ಅದನ್ನು ನಾವೆಲ್ಲರೂ ಸೇರಿ ಮೇಲ್ದರ್ಜೆಗೆ ತಂದು ಜನ ಮೆಚ್ಚುವ ಕೆಲಸ ಮಾಡಬೇಕೆಂದು ತಿಳಿಸಿದರು.

ನಗರದಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರಗಳು, ಒಣಗಿರುವ ಮರಗಳು ಹಾಗೂ ವಿದ್ಯುತ್ ದೀಪಕ್ಕೆ ಅಡ್ಡಲಾಗಿರುವಂತೆ ಮರದ ರೆಂಬೆ/ಕೊಂಬೆಗಳನ್ನು ತೆರವುಗೊಳಿಸಬೇಕು. ಕೆರೆಗಳು, ಉದ್ಯಾನವನಗಳಿಗೆ ಹೋರ್ಮ್ ಗಾರ್ಡ್ ಗಳನ್ನು ನಿಯೋಜಿಸಬೇಕು. ಜಿಬಿಎ ಆದ ಬಳಿಕ ಅಧಿಕಾರಿಗಳು ಮಾಡುವ ಕೆಲಸ-ಕಾರ್ಯಗಳಲ್ಲಿ ಆಗಿರುವ ಬದಲಾವಣೆಗಳನ್ನು ಜನರು ಗಮನಿಸುವಂತಾಗಬೇಕೆಂದು ಹೇಳಿದರು.

ಜಿ.ಬಿ.ಎ ಹಾಗೂ 5 ನಗರ ಪಾಲಿಕೆಗಳ ಸಮನ್ವಯದಿಂದ ಕೆಲಸ ಮಾಡಿ, ಇರುವ ಸಮಸ್ಯೆಗಳನ್ನು ಹಂತ-ಹಂತವಾಗಿ ನಿವಾರಣೆ ಮಾಡಬೇಕು. ನಗರದಲ್ಲಿ ಜಂಕ್ಷನ್ ಗಳ ಅಭಿವೃದ್ಧಿ, ನಾಗರಿಕರ ಸುಗಮ ಸಂಚಾರಕ್ಕೆ ಪಾದಚಾರಿಗಳ ಅಭಿವೃದ್ಧಿ ಸೇರಿದಂತೆ ನಿರೀಕ್ಷೆಗೂ ಮೀರಿ ಕೆಲಸ ಮಾಡಲು ಸೂಚನೆ ನೀಡಿದರು.

Advertisement

ಮಳೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಿ: ನಗರದಲ್ಲಿ ಮಳೆಯ ಮುನ್ಸೂಚನೆಯಿದ್ದು, ಎಲ್ಲ ನಗರ ಪಾಲಿಕೆಗಳಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜಲಾವೃತವಾಗುವ ಸ್ಥಳಗಳಲ್ಲಿ ಗ್ರೇಟಿಂಗ್‌ಗಳ ಬಳಿ ತ್ಯಾಜ್ಯ ಇರದಂತೆ ಸ್ವಚ್ಛತೆ ಮಾಡಬೇಕು, ರಾಜಕಾಲುವೆಗಳಲ್ಲಿ ನಿರಂತರವಾಗಿ ಸ್ವಚ್ಛತೆ ಕಾಪಾಡಬೇಕು ಹಾಗೂ ವಿಪತ್ತು ನಿರ್ವಹಣೆಗೆ ಸರಿಯಾದ ಯೋಜನೆ ರೂಪಿಸಿಕೊಂಡು ಕೆಲಸ ಮಾಡಲು ಸೂಚನೆ ನೀಡಿದರು.

ಜಿ.ಬಿ.ಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಮಾತನಾಡಿ, ಜಿ.ಬಿ.ಎ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಹಾಗೂ ಇ-ಖಾತಾ ನೀಡುವ ಸಲುವಾಗಿ ಕಂದಾಯ ವಿಭಾಗದ ವಿಶೇಷ ಆಯುಕ್ತರು ಪ್ರತಿನಿತ್ಯ ನಡೆಸುವ ವರ್ಚ್ಯುವಲ್ ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರು ಪಾಲ್ಗೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.

ನೆವೆಂಬರ್ 1, 2025 ರಂದು ಎಲ್ಲಾ ನಗರ ಪಾಲಿಕೆಗಳ ಕಛೇರಿಗಳಿಗೆ ಶಂಕುಸ್ಥಾಪನೆ ಮಾಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಈ ಪೈಕಿ ಎಲ್ಲರಿಗೂ ಅನುಕೂಲವಾಗುವಂತಹ ಉತ್ತಮ ಸ್ಥಳಗಳನ್ನು ಗುರುತಿಸಿ ಅಂತಿಮಗೊಳಿಸಿದೆ. ಈಗಾಗಲೇ ಯೋಜನಾ ವಿಭಾಗ, ಬೃಹತ್ ನೀರುಗಾಲುವೆ, ವರ್ಲ್ಡ್ ಬ್ಯಾಂಕ್ ಯೋಜನೆ ಕಾಮಗಾರಿಗಳನ್ನು ಆಯಾ ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದ್ದು, ಆಯಾ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಲಾಯಿತು.

ಮೈಕ್ರೋ ಪ್ಲಾನ್ ಮಾಡಿಕೊಂಡು ಕೆಲಸ ಮಾಡಿ: ಎಲ್ಲಾ 5 ನಗರ ಪಾಲಿಕೆಗಳಲ್ಲಿ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವ ಜೊತೆಗೆ ರಸ್ತೆ ಗುಣಮಟ್ಟವನ್ನು ಹೆಚ್ಚಿಸಬೇಕು. ಸಾಮೂಹಿಕ ಸ್ವಚ್ಛತಾ ಕಾರ್ಯ, ಕಸ ಗುಡಿಸುವುದು, ರಸ್ತೆ ಬದಿ ಕಸ ಬಿಸಾಡುವ ಬ್ಲಾಕ್ ಸ್ಪಾಟ್ ಗಳನ್ನು ನಿರ್ಮೂಲನೆ ಮಾಡುವುದು ಸೇರಿದಂತೆ ಎಲ್ಲದಕ್ಕೂ ಮೈಕ್ರೋ ಪ್ಲಾನ್ ಮಾಡಿಕೊಂಡು ಸರಿಯಾದ ಅನುಕ್ರಮದಲ್ಲಿ ಕಾರ್ಯನಿರ್ವಹಿಸಲು ಸೂಚಿಸಿದರು.

ನಾಮಫಲಕಗಳನ್ನು ಅಳವಡಿಸಿ: ಸರ್ಕಾರದಿಂದ ಈಗಾಗಲೇ 5 ನಗರ ಪಾಲಿಕೆಗಳಿಗೆ ಗಡಿಗಳನ್ನು ಗುರುತಿಸಿದ್ದು, ನಾಗರಿಕರಿಗೆ ಯಾವ ನಗರ ಪಾಲಿಕೆಗೆ ಬರಲಿದ್ದೇವೆ ಎಂಬ ಗೊಂದಲಗಳಿವೆ. ಈ ಸಂಬಂಧ ಆಯಾ ನಗರ ಪಾಲಿಕೆಗಳಲ್ಲಿ ಕೂಡಲೇ ನಾಮಫಲಕಗಳನ್ನು ಅಳವಡಿಸಬೇಕು. ಪಾಲಿಕೆಗಳ ಗಡಿಗಳಲ್ಲಿ ಸರಿಯಾದ ರೀತಿಯಲ್ಲಿ ಗಡಿ ನಿಗದಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ಮಾತನಾಡಿ, ಜಿ.ಬಿ.ಎ. ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ರೂ.6,700/- ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಈ ಪೈಕಿ ಈವರೆಗೆ ರೂ.3,217/- ಕೋಟಿ ಸಂಗ್ರಹಿಸಲಾಗಿದ್ದು, ರೂ.3,483/- ಕೋಟಿ ಸಂಗ್ರಹಿಸಬೇಕಿದೆ. ಅಲ್ಲದೇಸುಮಾರು 2.75 ಲಕ್ಷ ಆಸ್ತಿ ಸುಸ್ತಿದಾರರಿಂದ ರೂ.786 ಕೋಟಿ ತೆರಿಗೆ ಸಂಗ್ರಹಿಸಬೇಕಿದ್ದು, ಅವರೆಲ್ಲರಿಗೂ ಎಲೆಕ್ಟ್ರಾನಿಕ್ ಡಿಮಾಂಡ್ ನೋಟೀಸ್ ನಿಡಲಾಗಿದೆ. ಈ ಸಂಬಂಧ ಆಯಾ ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಹಾಗೂ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಂದ ತ್ವರಿತಗತಿಯಲ್ಲಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ನಗರದಲ್ಲಿ 25 ಲಕ್ಷ ಆಸ್ತಿಗಳಿದ್ದು, ಎಲ್ಲಾ ಆಸ್ತಿಗಳಿಗೂ ಆನ್ ಲೈನ್ ಮೂಲಕ ಡ್ರಾಫ್ಟ್ (ಕರಡು) ಇ-ಖಾತಾಗಳನ್ನು ಪಡೆಯಬಹುದಾಗಿದೆ. ಈವರಗೆ 7.5 ಲಕ್ಷ ಅಂತಿಮ ಇ-ಖಾತಾಗಳನ್ನು ವಿತರಣೆ ಮಾಡಲಾಗಿದೆ.

ಯಾವ ನಗರ ಪಾಲಿಕೆಗೆ ಬರಲಿದ್ದೀರಿ ಎಂದು ತಿಳಿಯಲು ವೆಬ್ ಸೈಟ್ & ಕ್ಯೂ. ಆರ್ ಕೋಡ್ ರಚನೆ:
ಜಿ.ಬಿ.ಎ ವ್ಯಾಪ್ತಿಯಲ್ಲಿ 5 ನಗರ ಪಾಲಿಕೆಗಳನ್ನು ರಚಿಸಿದ್ದು, ಪ್ರಸ್ತುತ 198 ವಾರ್ಡ್ ಗಳನ್ನು ಈ 5 ಪಾಲಿಕೆಗಳಿಗೆ ವಿಂಗಡನೆ ಮಾಡಲಾಗಿದೆ. ಬೆಂಗಳೂರು ನಗರ ನಾಗರಿಕರಿಗೆ ಯಾವ ನಗರ ಪಾಲಿಕೆಗೆ ಬರುತ್ತೇವೆ ಎಂಬುದನ್ನು ತಿಳಿಯುವ ಸಲುವಾಗಿ ವೆಬ್‌ಸೈಟ್ ರಚಿಸಲಾಗಿದ್ದು, https://BBMP.gov.in/KnowYourNewCorporation ಈ ಲಿಂಕ್ ಗೆ ಭೇಟಿ ನೀಡಿ ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ (ಲಗತ್ತಿಸಿದೆ) ನಂತರ ವಾರ್ಡ್ ಸಂಖ್ಯೆ ಅಥವಾ ಹೆಸರು ನಮೂದಿಸಿದಲ್ಲಿ ನೀವು ಯಾವ ನಗರ ಪಾಲಿಕೆಯಲ್ಲಿದ್ದೇವೆ ಎಂಬುದನ್ನು ತಿಳಿಯಬಹುದು.

ಪ್ರಾತ್ಯಕ್ಷಿಕೆ ಮೂಲಕ ವಿವರಣೆ: ಜಿಬಿಎ ವ್ಯಾಪ್ತಿಯಲ್ಲಿ ಕಂದಾಯ, ಜಾಹೀರಾತು, ಆಸ್ತಿಗಳು, ಆರೋಗ್ಯ, ಪಶುಪಾಲನಾ ವಿಭಾಗ, ಕಲ್ಯಾಣ ಕಾರ್ಯಕ್ರಮಗಳು, ಶಿಕ್ಷಣ, ಅನುದಾನ ಹಂಚಿಕೆ, ಕಾಮಗಾರಿಗಳು, ಕೆರೆಗಳು, ಉದ್ಯಾನವನಗಳು, ಅರಣ್ಯ, ನಗರ ಯೋಜನೆ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಲಾಯಿತು.

ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಪ್ರೀತಿ ಗೆಹ್ಲೋಟ್, ಬಿ.ಎಸ್.ಡ.ಬ್ಲ್ಯೂ.ಎಂಎಲ್ ಸಿ.ಇ.ಒ ಕರೀಗೌಡ, ನಗರ ಪಾಲಿಕೆಗಳ ಆಯುಕ್ತರುಗಳಾದ ರಮೇಶ್ ಡಿ.ಎಸ್, ಕೆ.ಎನ್ ರಮೇಶ್, ಪೊಮ್ಮಲ ಸುನೀಲ್ ಕುಮಾರ್, ರಾಜೇಂದ್ರ ಕೆ.ವಿ, ಅಪರ ಆಯುಕ್ತರು (ಅಭಿವೃದ್ಧಿ) ಆದ ಲತಾ, ದಿಗ್ವಿಜಯ್ ಬೋಡ್ಕೆ, ಲೊಕಂಡೆ ಸ್ನೇಹಲ್ ಸುಧಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!