
ಮಾಗಡಿ: ತಮಿಳುನಾಡು ಶಾಸಕರೇ ನಮ್ಮ ಬಳಿ ಮೇಕೆದಾಟು ನಮಗೆ ವರ ಎಂದು ಹೇಳಿದ್ದಾರೆ. ಆದರೆ ರಾಜಕೀಯವಾಗಿ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಷ್ಟೇ ಎಂದು ನಂಜಾವಧೂತ ಸ್ವಾಮೀಜಿ ತಿಳಿಸಿದ್ದಾರೆ.
ಮೇಕೆದಾಟು ಯೋಜನೆ ಕುರಿತು ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರದ ವಿರೋಧ ಇದೆ. ಈ ನಡುವೆ ದೇವೇಗೌಡರು ಕೇಂದ್ರದ ಜತೆ ಮಾತನಾಡಿ ಮನವೊಲಿಕೆ ಮಾಡಿದ್ದಾರೆ ಎಂದರು.
ಇನ್ನು ಮೇಕೆದಾಟು ನಮ್ಮ ಹಕ್ಕು ಎಂದು ಡಿಸಿಎಂ ಡಿಕೆಶಿ ಪಾದಯಾತ್ರೆ ಮಾಡಿದ್ದಾರೆ. ಆದರೆ ಅದಕ್ಕೂ ಮೊದಲು ಮೇಕೆದಾಟು ಯೋಜನೆ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದರು. ಪಕ್ಷಾತೀತವಾಗಿ ಮೇಕೆದಾಟು ಯೋಜನೆ ಮಾಡಬೇಕು ಅನ್ನೋ ಹಂಬಲವಿದೆ. ಪಕ್ಷಾತೀತವಾಗಿ ಎಲ್ಲರೂ ಮೇಕೆದಾಟು ಯೋಜನೆಗೆ ಬೆಂಬಲಿಸುತ್ತಾರೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಯಾವ ರೀತಿ ನೀರಿಗೆ ಜಾತಿ, ಪಕ್ಷ ಇಲ್ಲವೋ ಆ ರೀತಿ ಕರ್ನಾಟಕದಲ್ಲೂ ಬೆಂಬಲ ಸಿಗಬೇಕು. ಎಲ್ಲ ಜನ ನಮ್ಮವರೇ, ಇಡೀ ನಾಡು ನಮ್ಮದು ಎನ್ನುವ ರೀತಿ ಒಗ್ಗಟ್ಟಾಗಿ ನಿಲ್ಲಬೇಕು. ಪಕ್ಷಾತೀತವಾಗಿ ಹೋರಾಟ ಆಗಿದ್ದೇ ಆದಲ್ಲಿ ಕೆಲವೇ ವರ್ಷಗಳಲ್ಲಿ ಮೇಕೆದಾಟು ಆಗುತ್ತದೆ. 64 ಟಿಎಂಸಿ ನೀರು ಸದ್ಬಳಕೆ ಮಾಡಕೊಳ್ಳಬಹುದಾಗಿದೆ. ತಮಿಳುನಾಡಿನಲ್ಲೂ ಈ ನೀರನ್ನು ಬಳಸಿಕೊಳ್ಳುತ್ತಿಲ್ಲ. ನಾವು ಕೂಡ ಬಳಸಿಕೊಳ್ಳುತ್ತಿಲ್ಲ. ನೂರಾರು ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದೆ ಎಂದು ಹೇಳಿದರು.
ಹೊಸೂರಿಗೆ ಹೋಗಿದ್ದ ವೇಳೆ ತಮಿಳುನಾಡಿನ ಮೂರ್ನಾಲ್ಕು ಶಾಸಕರು ನಮ್ಮ ಬಳಿ ಮಾತನಾಡಿದ್ದು, ಮೇಕೆದಾಟು ನಮಗೆ ವರ ಎಂದಿದ್ದಾರೆ. ಆದರೆ ರಾಜಕೀಯವಾಗಿ ಇದನ್ನ ವಿರೋಧ ಮಾಡುತ್ತಿದ್ದಾರೆ ಅಷ್ಟೇ. ಇದು ಯಾರಿಗೂ ಶ್ರೇಯಸ್ಸು ತರುವುದಿಲ್ಲ. ಹೀಗಾಗಿ ಎರಡೂ ರಾಜ್ಯದ ಸರ್ಕಾರಗಳು ಮೇಕೆದಾಟು ಯೋಜನೆ ಮಾಡಿದ್ರೆ ಒಳ್ಳೆಯದಾಗುತ್ತದೆ ಎಂದರು.