NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನಿವೃತ್ತ ನೌಕರರ ಪ್ರತಿಭಟನೆ: ಫೆ.1ರ ಕೇಂದ್ರ ಬಜೆಟ್‌ನಲ್ಲಿ ಎಲ್ಲ ನಿವೃತ್ತ ನೌಕರರ ಬೇಡಿಕೆ ಈಡೇರಿಸಲು ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕನಿಷ್ಠ ಹೆಚ್ಚುವರಿ ಪಿಂಚಣಿ 7500 ರೂ. ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ಇಪಿಎಸ್ ನಿವೃತ್ತರಿಗೆ, ಇಪಿಎಸ್ ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ 5000 ರೂ.ಗಳನ್ನು ಕೂಡಲೇ ನೀಡಬೇಕೆಂದು ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಇಪಿಎಸ್ ಪಿಂಚಣಿದಾರರು 37ನೇ ಬೃಹತ್ ಪ್ರತಿಭಟನೆ ಮಾಡಿದರು.

ಮಂಗಳವಾರ (ಜ.27) “ನಿಧಿ ಅಪ್ಕೆನಿಕಟ್” ಕಾರ್ಯಕ್ರಮದಂದು, ನಗರದ ರಿಚ್ಮಂಡ್ ವೃತ್ತದಲ್ಲಿರುವ, ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತರ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಇಪಿಎಸ್ ಪಿಂಚಣಿದಾರರ 37ನೇ ಬೃಹತ್ ಪ್ರತಿಭಟನೆಯಲ್ಲಿ ನೂರಾರು ಮಂದಿ ನಿವೃತ್ತ ನೌಕರರ ಭಾಗವಹಿಸಿ ಕೇಂದ್ರ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಪ್ರತಿಭಟನಾಕಾರರು ಕಚೇರಿ ಆವರಣದಲ್ಲಿ ಹರತಾಳ ನಡೆಸಿ, ಧಿಕ್ಕಾರದ ಘೋಷಣೆ ಕೂಗಿದರು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳನ್ನು ತೀವ್ರ ತಾರಾಟೆಗೆ ತೆಗೆದುಕೊಂಡರು. ನಮ್ಮನ್ನು ಇನ್ನೂ ಎಷ್ಟು ವರ್ಷಗಳು ಇದೇ ರೀತಿ ನಡೆಸಿಕೊಳ್ಳುತ್ತೀರಿ ನಿಮಗೆ ನಾಚಿಕೆ ಆಗುತ್ತಿಲ್ಲವೇ ಎಂದು ವಯೋವೃದ್ಧರು ಅಸಮಾಧಾನ ವ್ಯಕ್ತಡಿಸಿದ್ದು ಮನಸ್‌ಸಿಗೆ ಭಾರಿ ನೋವಾಗುವಂತೆ ಮಾಡಿತ್ತು.

ಈ ಇಳಿ ವಯಸ್ಸಿನಲ್ಲಿ ಕುಳಿತುಕೊಳ್ಳಲು ಮೇಲೇಳುವುದಕ್ಕೂ ಮತ್ತೊಬ್ಬರ ಸಹಾಯಬೇಕಿರುವ ದೇಹವಿದ್ದರು ಸಹ ಅದನ್ನು ಮೀರಿ ನಾವು ಈಗಲೂ ಸ್ವಾವಲಂಬಿಯಾಗಿ ಜೀವನ ನಡೆಸಬೇಕು ಎಂಬ ಹಠದಿಂದ ನಡೆಯುವುದಕ್ಕೂ ಆಗದೆ ಒಂದಷ್ಟು ದೂರ ಸಾಗಿದರೂ ಆಗುತ್ತಿಲ್ಲ ಎಂಬ ಸಂದೇಶ ನೀಡುವ ಕಾಲುಗಳನ್ನು ದಂಡಿಸಿಕೊಂಡೇ ರಾಜ್ಯದ ಹಾಗೂ ಬೆಂಗಳೂರು ನಗರದ ವಿವಿಧೆಡೆಯಿಂದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದ ತನಕ ಬಂದು ಹೋರಾಟ ಮಾಡುತ್ತಿದ್ದಾರೆ ಎಂದರೆ ಅವರ ಕೂಗಿಗೆ ಸರ್ಕಾರ ಸ್ಪಂದಿಸಬೇಕಲ್ಲವೇ.

ಇದೇ ಇವರ ಅಪ್ಪ ಅಮ್ಮ ಅವರು ಇಂಥ ಇಳಿವಯಸ್ಸಿನಲ್ಲಿ ಈ ರೀತಿ ಅನ್ಯಾಯಕ್ಕೆ ಒಳಗಾಗುತ್ತಿದ್ದರೆ ಅದನ್ನು ಸಹಿಸಿಕೊಂಡು ಇರುತ್ತಿದ್ದರೆ ಈ ಅಧಿಕಾರಿಗಳು ಹಾಗೂ ರಾಜಕಾರಣಿಗಳು. ಇನ್ನಾದರೂ ಇವರ ಕೂಗಿಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಇಳಿ ವಯಸ್‌ಸಿನಲ್ಲೂ ನವ ತರುಣರಂತೆ ಹೋರಾಟ ಮಾಡುತ್ತಿದ್ದವರನ್ನು ಛಲವನ್ನು ನೋಡಲು ನಿಂತಿದ್ದ ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದರು.

ಇನ್ನು ಅಧಿಕಾರಿಗಳಿಗೆ ಪ್ರತಿಭಟನಾಕಾರರು ಆಗ್ರಹಿಸಿದ ಅಂಶಗಳೇನೆಂದರೆ, ಇದುವರೆಗೂ ನಾವು ಪ್ರತಿಭಟನೆ ಮೂಲಕ 36 ಮನವಿ ಪತ್ರಗಳನ್ನು ಕೇಂದ್ರ ಸರ್ಕಾರದ ಸಚಿವರಿಗೆ ನೀಡಿದ್ದರೂ ಕೂಡ ಯಾವುದೇ ಮನವಿ ಪತ್ರಕ್ಕೂ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಬಜೆಟ್ ಅಧಿವೇಶನ ಜ.28ರಿಂದ ಪ್ರಾರಂಭವಾಗಿದ್ದು, ಫೆ.1 ರಂದು ಕೇಂದ್ರ ಹಣಕಾಸು ಸಚಿವರು 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.

ಅಂದು ನಮ್ಮ ಬೇಡಿಕೆಗೆ ಸ್ಪಂದಿಸಬೇಕು, ಒಂದು ವೇಳೆ ಈ ನಿವೃತ್ತರ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅಂದು ಯಾವುದೇ ಪ್ರಸ್ತಾವನೆ ಇಲ್ಲದೆ ಹೋದಲ್ಲಿ, ಉಗ್ರ ಹೋರಾಟ ನಡೆಸಲಾಗುವುದು ಎಂದು ಈ ಪ್ರತಿಭಟನೆ ಮೂಲಕವೇ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡುತ್ತಿದ್ದೇವೆ ಎಂದು ಹೇಳಿದರು.

ಇನ್ನು ಮದುರೈ ಉಚ್ಚ ನ್ಯಾಯಾಲಯವು 2/9/2025 ರಂದು, ಕೊಲ್ಕತ್ತಾ ಉಚ್ಚ ನ್ಯಾಯಾಲಯವು 14/11/2025 ರಂದು, ಇಪಿಎಸ್ ನಿವೃತ್ತರ ಪರ ನೀಡಿರುವ ಆದೇಶ ನಮಗೂ ಅನ್ವಯವಾಗಲಿದ್ದು, ಈ ಆದೇಶವನ್ನು ಕೂಡಲೇ ಅನುಷ್ಠಾನಗೊಳಿಸಿ ಅಧಿಕ ಹೆಚ್ಚುವರಿ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

ಜೇಮ್ ಷೇಡ್ಪುರದಲ್ಲಿರುವ M/s ಟಾಟಾ ಸ್ಟೀಲ್ ಪ್ರವೇಟ್ ಲಿಮಿಟೆಡ್ ಕಂಪನಿಯ ಇಪಿಎಸ್ ನಿವೃತ್ತರಿಗೆ ಅದರ ಟ್ರಸ್ಟ್ ರೂಲ್ಸ್ ಅನ್ವಯ ಅಧಿಕ ಪಿಂಚಣಿ ನೀಡಲು ಜಂಮ್ ಷೇಡ್ಪುರ ಇಪಿಎಫ್ಒ ಅಧಿಕಾರಿಗಳು 11/09/2025 ರಂದು ಸುತ್ತೋಲೆ ಹೊರಡಿಸಿದ್ದು ಈ ನಿಯಮವನ್ನು ನಮ್ಮ ನಾಲ್ಕೂ ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೂ ಸಹಾ ವಿಸ್ತರಿಸಬೇಕು.

ಜತೆಗೆ 10/10/ 2025 ರಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಇಪಿಎಸ್ ನಿವೃತ್ತರ ಪರ ಉಲ್ಲೇಖಿಸಿರುವ ಪತ್ರಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಂಡು ಎಲ್ಲ ಜಂಟಿ ಆಯ್ಕೆ ಪತ್ರಗಳನ್ನು ಟ್ರಸ್ಟ್ ನಿಯಮಾವಳಿಗನ್ವಯ ಪುನರ್ ಸ್ಥಾಪಿಸಿ, ಎಲ್ಲ ಇಪಿಎಸ್ ನಿವೃತ್ತರಿಗೆ ಅಧಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ್ ಅವರು ಎಲ್ಲ ಹೋರಾಟಗಾರರನ್ನು ಸ್ವಾಗತಿಸುವ ಮೂಲಕ ಪ್ರತಿಭಟನಗೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ನಂಜುಂಡೇಗೌಡ, ಕಾರ್ಯಾಧ್ಯಕ್ಷ ಶಂಕರ ಕುಮಾರ್, ಬಿಎಂಟಿಸಿ ನಿರ್ವಾಹಕಿ ಹಾಗೂ ರಂಗಭೂಮಿ ಕಲಾವಿದೆ ಉಮಾ ಪಿ., ಕೆಎಸ್ಆರ್ಟಿಸಿ ಚಿಕ್ಕಬಳ್ಳಾಪುರ ಟ್ರಸ್ಟ್ ನ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿದರು.

ಬಳಿಕ ಮನವಿ ಪತ್ರವನ್ನು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ(minister for labour & employment) ಸಚಿವರಾದ ಮುನ್ಸೂಕ್ ಮಾಂಡವೀಯ ಹಾಗೂ ಶೋಭಾ ಕರಂದ್ಲಾಜೆಯವರಿಗೆ ಮನವಿ ಪತ್ರವನ್ನು ಕೂಡಲೇ ಕಳುಹಿಸಿ ಕೊಡಬೇಕೆಂದು, ಅಧಿಕಾರಿಗಳಿಗೆ ಆಗ್ರಹಿಸಿ ನೀಡಲಾಯಿತು.

ಅಂತಿಮವಾಗಿ ಮನವಿ ಪತ್ರ ಸ್ವೀಕರಿಸಿದ ಇಪಿಎಫ್ಒ ಅಧಿಕಾರಿಗಳು ಮಾತನಾಡಿ, ಇಂದಿನ ಪ್ರತಿಭಟನೆಯ ಸಂಪೂರ್ಣ ವಿವರಗಳನ್ನು ಕೇಂದ್ರ ಸಚಿವರ ಕಾರ್ಯಾಲಯಕ್ಕೂ ಹಾಗೂ ದೆಹಲಿಯಲ್ಲಿನ ತಮ್ಮ ಮೇಲಧಿಕಾರಿಗಳಿಗೂ ಕಳಿಸಿ ಕೊಡುವುದಾಗಿ ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ನಾಗರಾಜು, ರುಕ್ಮೇಶ್, ಕೃಷ್ಣಮೂರ್ತಿ ಇದ್ದು, ಪ್ರತಿಭಟನೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

Megha
the authorMegha

Leave a Reply

error: Content is protected !!