ಬೆಂಗಳೂರು: ನಾವು ಸಿಡಿದೇಳುವ ಮುನ್ನ ಡಿ.ಕೆ.ಶಿವಕುಮಾರ್ಗೆ ಪಟ್ಟ ಕೊಡ್ಬೇಕು ಎಂದು ಒಕ್ಕಲಿಗ ಸಂಘ ಎಚ್ಚರಿಕೆ ನೀಡಿದೆ.

ಇಂದು ನಡೆದ ರಾಜ್ಯ ಒಕ್ಕಲಿಗ ಸಂಘದ ಮಹತ್ವದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಪದಾಧಿಕಾರಿಗಳು, ನಾವು ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡುವ ಮುನ್ನವೇ ಡಿಕೆಶಿಗೆ ಸಿಎಂ ಸ್ಥಾನ ನೀಡಿ ಎಂದು ಆಗ್ರಹಿಸಿದರು.
ಇನ್ನು ಒಕ್ಕಲಿಗ ಸಂಘದ ನೂತನ ಅಧ್ಯಕ್ಷ ಎಲ್.ಶ್ರೀನಿವಾಸ್ ಮಾತನ್ನಾಡಿ, 2028ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಡಿಕೆಶಿ ಸಿಎಂ ಆಗಬೇಕು. ಸಿದ್ದರಾಮಯ್ಯನವರೇ, ನೀವೇ ಡಿಕೆ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿ. ಶಿವಕುಮಾರ್ ಹಿಂದೆ ನಡೆದ ಚುನಾವಣೆ ಪ್ರಚಾರದಲ್ಲಿ ನನ್ನ ಕೈಗೆ ಪೆನ್ನು ಪೇಪರ್ ಕೊಡಿ ಎಂದಿದ್ದರು. ಅವರಿಗೆ ಮತಗಳನ್ನು ಕೊಟ್ವಿ. ಅಧ್ಯಕ್ಷರಾಗಿ ಶ್ರಮ ಪಟ್ಟು ಊಟ ನಿದ್ದೆ ಇಲ್ಲದೇ ಒದ್ದಾಡಿದ್ದಾರೆ. ಇನ್ನು ನೀವು ಸಿದ್ದರಾಮಯ್ಯರವರೆ ಈ ಹಿಂದೆಯೂ ಅಧಿಕಾರ ಅನುಭವಿಸಿದ್ದೀರಿ. ಹೀಗಾಗಿ ಅವರಿಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.
ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ: ಒಳ್ಳೆಯ ಕೆಲಸವನ್ನು ಅವರೂ ಮಾಡಿದ್ದಾರೆ. ಆದರೆ, ಅಧಿಕಾರ ಹಂಚಿಕೆಯ ಒಪ್ಪಂದದ ಚರ್ಚೆಯಾಗಿದೆ. ಈಗ ಅಧಿಕಾರ ಹಸ್ತಾಂತರಕ್ಕೆ ಸಿದ್ದರಾಮಯ್ಯ ಒಪ್ಪುತ್ತಾರೋ ಅನ್ನೋ ಚರ್ಚೆ ಬರುತ್ತಿದೆ. ಹೀಗಾಗಿ ಡಿಕೆಶಿ ಪಟ್ಟ ಕಷ್ಟಕ್ಕೆ ಕೂಲಿ ಕೊಡಿ ಅಂತಾ ಕೇಳೋಕೆ ನಾವು ತಯಾರಾಗಿದ್ದೇವೆ. ನಮ್ಮ ರಾಜ್ಯ ಮಾತ್ರವಲ್ಲ, ಬೇರೆ ರಾಜ್ಯದಲ್ಲಿಯೂ ಪಕ್ಷ ಸಂಘಟನೆ ಮಾಡಿದ್ದಾರೆ. ಡಿಕೆಶಿಗೆ ಅನ್ಯಾಯ, ಮೋಸ ಆಗಬಾರದು. ಸ್ವಾಮೀಜಿಗಳ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ಹೋರಾಟ ಮಾಡುತ್ತೀವಿ ಎಂದು ಗುಡುಗಿದ್ದಾರೆ.
ಸಿದ್ದರಾಮಯ್ಯ ಅಧಿಕಾರ ಕೊಡೋದಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಕೆಶಿಗೆ ಅವಕಾಶ ಕೊಡಲಿ. ಡಿಕೆಶಿ ಅವರಿಗೆ ಮುಖ್ಯಮಂತ್ರಿಯಾಗಲು ಒಮ್ಮೆ ಅವಕಾಶ ನೀಡಲಿ. ನಮ್ಮ ಜನಾಂಗಕ್ಕೆ ಅನ್ಯಾಯವಾಗಲು ಬಿಡೋದಿಲ್ಲ. ಅನ್ಯಾಯವಾದರೆ ಕೈಕಟ್ಟಿ ಕೂರದೇ KPCC ಅಧ್ಯಕ್ಷರಾಗಿ ದುಡಿದಿದ್ದಾರೆ.
ಎರಡನೇ ಅವಧಿಗೆ ಸಿಎಂ ಆಗುತ್ತಾರೆ ಅನ್ನೋ ತಾಳ್ಮೆಯಿಂದ ಸುಮ್ಮನಿದ್ದೆವು. ಈಗ ಸಿಎಂ ಬದಲಾವಣೆ ವಿಚಾರದಲ್ಲಿ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ನಾವು ಇನ್ನೊಬ್ಬರ ಅವಕಾಶ ಕೇಳುತ್ತಿಲ್ಲ. ನಮ್ಮ ಜನಾಂಗಕ್ಕೆ ನ್ಯಾಯ ಸಿಗಬೇಕು ಅನ್ನೋದು ನಮ್ಮ ಬೇಡಿಕೆ. ನಮ್ಮ ಸಮುದಾಯಕ್ಕೆ ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಸಹಿಸೋದಿಲ್ಲ ಎಂದು ಎಚ್ಚರಿಕೆ ನೀಡಿದರು.
Related










